ಮಂಗಳೂರು: ಜಾಗತಿಕ ಅಭಿವೃದ್ಧಿ ಮತ್ತು ಆರ್ಥಿಕತೆಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ಅಗಾಧ ಕೊಡುಗೆ ಮತ್ತು ಅದರ ಸಾಮಾಜಿಕ ಪ್ರಭಾವಕ್ಕೆ ಎಂಎಸ್‌ಎಂಇ ದೊಡ್ಡ ಚೈತನ್ಯವನ್ನೇ ನೀಡುತ್ತಿದೆ. ಜಾಗತಿಕವಾಗಿ ಉದ್ಯೋಗದ ಶೇ.70 ಮತ್ತು ಶೇ.50 ಜಿಡಿಪಿ, ಬಡತನ ಕಡಿಮೆಗೊಳಿಸಿ ನಗರ ಮತ್ತು ಗ್ರಾಮೀಣ ಅಸಮತೋಲನ ನಿವಾರಿಸುತ್ತದೆ ಎಂದು ಬಿಜೆಪಿ ಆರ್ಥಿಕ ಪ್ರಕೋಷ್ಠದ ಸಂಚಾಲಕ ಸಿಎ ಎಸ್‌.ಎಸ್‌. ನಾಯಕ್‌ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂ.27ರಂದು ವಿಶ್ವಸಂಸ್ಥೆಯಿಂದ ಅಂತಾರಾಷ್ಟ್ರೀಯ ಎಂಎಸ್‌ಎಂಇ ದಿನವನ್ನು ಆಚರಿಸಲಾಗುತ್ತದೆ. ಭಾರತದಲ್ಲಿ ಉದ್ಯಮಶೀಲ ಪರಿಸರ ವ್ಯವಸ್ಥೆ, ಬ್ಯಾಂಕಿಂಗ್‌, ನವೋದ್ಯಮ ಮತ್ತು ತೆರಿಗೆ ವ್ಯವಸ್ಥೆಯು ಆರ್ಥಿಕತೆಯ ದೃಢವಾದ ಬೆಳವಣಿಗೆಗೆ ಅನುಕೂಲಕರವಾಗಿದೆ. ಭಾರತ ವಿಶ್ವದಲ್ಲಿಯೇ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದ್ದು, ದಾಖಲೆಯ ಶೇ.7.7 ಬೆಳವಣಿಗೆ ದರವನ್ನು ದಾಖಲಿಸಿದೆ. ಎಂಎಸ್‌ಎಂಇಗಳು ಜಿಡಿಪಿಯ ಶೇ.31.1, ಒಟ್ಟು ರಫ್ತಿನ ಶೇ.48 ಒಟ್ಟು ಉತ್ಪಾದನಾ ಉತ್ಪಾದನೆಯ ಶೇ.35 ಕೊಡುಗೆ ನೀಡುತ್ತದೆ ಮತ್ತು 38.96 ಕೋಟಿ ರು. ಜನರಿಗೆ ಉದ್ಯೋಗವನ್ನು ನೀಡುತ್ತದೆ. ಪ್ರಸ್ತುತ 8.78 ಕೋಟಿ ರು. ಎಂಎಸ್‌ಎಂಇಗಳು ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿಸಲ್ಪಟ್ಟಿವೆ ಎಂದರು.ಕ್ರೆಡಿಟ್‌ ಕಾರ್ಡ್‌ ಯೋಜನೆ, ಪ್ರಧಾನಮಂತ್ರಿ ಉದ್ಯೋಗ ಸೃಷ್ಟಿ, ಪಿಎಂಎಫ್‌ಎಂಇ ಯೋಜನೆ, ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆ, ಸ್ವನಿಧಿ ಯೋಜನೆ, ಕ್ರೆಡಿಟ್‌ ಲೈನ್‌ ಗ್ಯಾರಂಟಿ ಯೋಜನೆ, ಜಿಎಸ್‌ಟಿ ವ್ಯವಹಾರ ಸಾಲ, ಸ್ಟ್ಯಾಂಡ್‌ ಅಪ್‌ ಇಂಡಿಯಾ ಯೋಜನೆ, 59 ನಿಮಿಷಗಳಲ್ಲಿ ಸಾಲ, ಸಿಜಿಟಿಎಂಎಸ್‌ಇ ಯೋಜನೆ, ಮ್ಯೂಚ್ಯುವಲ್‌ ಗ್ಯಾರಂಟಿ ಯೋಜನೆ, ಮತ್ಸ್ಯ ಸಂಪದ ಯೋಜನೆ, ಟಫ್‌ ಯೋಜನೆ, ಎಐಎಫ್‌ ಯೋಜನೆ, ಟ್ರೆಡ್ಸ್‌ ಯೋಜನೆಗಳು ಅನುಕೂಲ ಒದಗಿಸಿದೆ ಎಂದರು.ರಾಜ್ಯ ಸರ್ಕಾರದ ಪರಿಸರ ವ್ಯವಸ್ಥೆಯು ಎಂಎಸ್‌ಎಂಇ ಬೆಂಬಲಿಸುತ್ತದೆ. ರಾಜ್ಯದಲ್ಲಿ ಕರ್ನಾಟಕ ಕೈಗಾರಿಕಾ ನೀತಿ 2020-25 ಕರ್ನಾಟಕ ಪ್ರವಾಸೋದ್ಯಮ ನೀತಿ 2019-24 ಮತ್ತು ಕರ್ನಾಟಕ ಸ್ಟಾರ್ಟ್‌ ಅಪ್‌ ನೀತಿ 2025-30 ಉದ್ಯಮಿಗಳು ಹೊಸ ಘಟಕಗಳನ್ನು ಸ್ಥಾಪಿಸಲು ಮತ್ತು ವಿಸ್ತರಣೆಯನ್ನು ಕೈಗೊಳ್ಳಲು ಬೆಂಬಲ ನೀಡುತ್ತಿವೆ. ಆಯ್ದ ಸಂದರ್ಭಗಳಲ್ಲಿ ಬಂಡವಾಳ ಹೂಡಿಕೆ ಸಬ್ಸಿಡಿ, ಸ್ಟ್ಯಾಂಪ್‌ ವಿನಾಯಿತಿ ಮತ್ತು ಪರಿವರ್ತನೆ ಶುಲ್ಕ ಮನ್ನಾವನ್ನು ಒಳಗೊಂಡಿದೆ. ಕೆಎಸ್‌ಎಫ್‌ಸಿ ಸಹ ಎಸ್‌ಸಿ, ಎಸ್‌ಟಿ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಸಾಮಾನ್ಯ ಉದ್ಯಮಿಗಳಿಗೆ ರಿಯಾಯಿತಿ ಬಡ್ಡಿ ದರದಲ್ಲಿ ಉದ್ಯಮಿಗಳಿಗೆ ಸಾಲಗಳನ್ನು ನೀಡುತ್ತದೆ ಎಂದರು.ಸಹ ಸಂಚಾಲಕರಾದ ಜಿ. ಯೋಗೀಶ್‌ ಪೈ, ಸದಸ್ಯರಾದ ರಾಜೇಶ್‌ ರಾವ್‌, ವಸಂತ ಶೆಟ್ಟಿ, ಡಾ.ಎಸ್‌.ಎಂ. ಶಿವಪ್ರಕಾಶ್‌, ರಘುನಾಥ ಪೈ, ಎಂ. ಸುಂದರ ಶೆಟ್ಟಿ ಇದ್ದರು.