ಭೂ ಗ್ಯಾರಂಟಿ ಯೋಜನೆಗೆ ದೇಶಪಾಂಡೆ ಚಾಲನೆ । 320 ಫಲಾನುಭವಿಗಳಿಗೆ ಜಮೀನು ಹಕ್ಕು ಪತ್ರ ವಿತರಣೆ
ನನ್ನ ಕ್ಷೇತ್ರದಲ್ಲಿ ಹಲವಾರು ಯೋಜನೆಗಳನ್ನು ತಂದರೂ, ಜನಪರ ಕಾರ್ಯಕ್ರಮ ಜಾರಿಗೊಳಿಸಿದರೂ, ಚುನಾವಣೆಯ ಸಮಯದಲ್ಲಿ ನಾನು ಮಾಡಿರುವ ಜನಪರ ಅಭಿವೃದ್ಧಿ ಕೆಲಸ ಮರೆತು ಬಿಡುತ್ತಿರಿ. ಮತದಾನ ಎಣಿಕೆ ಕಾರ್ಯ ಆರಂಭವಾದಾಗ ಅದರಲ್ಲೂ ಹಳಿಯಾಳ ಗ್ರಾಮಾಂತರ ಏಣಿಕೆ ಆರಂಭವಾದಾಗಲಂತೂ ನನಗೆ ಎಲ್ಲಿಲ್ಲದ ಭಯ ಉಂಟಾಗುತ್ತದೆ ಎಂದು ಶಾಸಕ ಆರ್.ವಿ. ದೇಶಪಾಂಡೆ ನೋವು ತೊಡಿಕೊಂಡರು.
ಸೋಮವಾರ ತಾಲೂಕಾಡಳಿತ ಸೌಧದ ಸಭಾಂಗಣದಲ್ಲಿ ಕಂದಾಯ ಇಲಾಖೆಯಿಂದ ಆಯೋಜಿಸಿದ ಭೂ ಗ್ಯಾರಂಟಿ ಯೋಜನೆಯಲ್ಲಿ ತಾಲೂಕಿನ 320 ಫಲಾನುಭವಿಗಳಿಗೆ ಜಮೀನು ಹಕ್ಕುಪತ್ರ ವಿತರಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಹಳಿಯಾಳ ತಾಲೂಕಿನ ವಿಶೇಷವಾಗಿ ಗ್ರಾಮಾಂತರ ಭಾಗದವರ ಮನಸ್ಥಿತಿ ನನಗೆ ಅರ್ಥವಾಗುತ್ತಿಲ್ಲ. ನಿಮ್ಮ ಗ್ರಾಮೀಣ ಭಾಗದಲ್ಲಿ ಶೈಕ್ಷಣಿಕ ವ್ಯವಸ್ಥೆ, ಆರೋಗ್ಯ ಸೌಲಭ್ಯ, ಮೂಲಭೂತ ಸೌಲಭ್ಯಗಳನ್ನು ಒದಗಿಸಿದ್ದರೂ ಎಲ್ಲಾ ಮರೆತೇ ಬಿಡುವ ನಿಮ್ಮ ನಿಲುವು ಅರ್ಥವಾಗಿಲ್ಲ. ನಾನೇನೂ ತಪ್ಪು ಮಾಡಿದ್ದೇನೆ? ನನ್ನ ಮೇಲೆ ಭ್ರಷ್ಟಾಚಾರದ ಆಪಾದನೆ ಇದೆಯೇ? ನಿಮ್ಮ ಬಳಿ ಲಂಚ ಪಡೆದಿದ್ದೇನೆಯೇ ಎಂದು ಪ್ರಶ್ನಿಸಿದರು. ನನಗೆ ಅಭಿವೃದ್ಧಿಯ ಹುಚ್ಚು ಇದೇ, ನೀವು ಕೇಳಲಿ ಬಿಡಲಿ ನನ್ನ ಮತದಾರರಿಗೆ ಒಳ್ಳೆಯ ಯೋಜನೆಗಳನ್ನು ತಂದು ಕೊಡಬೇಕೆಂಬ ತುಡಿತ ನನ್ನಲ್ಲಿದೆ. ನನ್ನ ಕ್ಷೇತ್ರ ಮಾದರಿ ಮಾಡಬೇಕೆಂಬ ಇಚ್ಛೆ ನನಗಿದೆ ಎಂದರು. ಒಳ್ಳೆಯವರಿಗೆ ಮತ ಹಾಕಿ:ಮತದಾರರು ತಮ್ಮ ಜವಾಬ್ದಾರಿ ಯಾವತ್ತೂ ಮರೆಯಬಾರದು. ಒಳ್ಳೆಯ ಕೆಲಸಗಳನ್ನು ಮಾಡುವವರಿಗೆ, ಅಭಿವೃದ್ಧಿ ಪರವಾಗಿದ್ದವರ ಪರವಾಗಿ ನೀವು ಆಶೀರ್ವದಿಸಬೇಕು, ಜವಾಬ್ದಾರಿಯುತವಾಗಿ ಮತ ಚಲಾಯಿಸಬೇಕೆಂದರು.
ಇಲ್ಲಿ ಎಲ್ಲಿಯೂ ಭ್ರಷ್ಟಾಚಾರ ನಡೆಯುವುದಿಲ್ಲ. ನಿಮ್ಮ ಕೆಲಸಗಳಿಗಾಗಿ ಯಾರಿಗೂ ಲಂಚ ಕೊಡಬೇಡಿ, ಭ್ರಷ್ಟಚಾರಕ್ಕೆ ಅವಕಾಶ ನೀಡಬೇಡಿ. ಭ್ರಷ್ಟಾಚಾರ ತೊಲಗಬೇಕು, ನಾನು ಸರಿಯಾಗಿದ್ದರೇ ಬೇರೆಯವರು ಸರಿಯಿರುತ್ತಾರೆ ಎಂಬುವುದು ನನ್ನ ಅಭಿಪ್ರಾಯ ಎಂದರು. ರಾಜ್ಯದಲ್ಲಿರುವ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನಪರ ಸರ್ಕಾರ ನಡೆಸುತ್ತಿದೆ. ಈಗ ಭೂ ಗ್ಯಾರಂಟಿ ಯೋಜನೆಯಲ್ಲಿ ಜಮೀನು ಹಕ್ಕುಪತ್ರ ವಿತರಿಸುವ ಮೂಲಕ ಐತಿಹಾಸಿಕ ಹೆಜ್ಜೆಯಿಟ್ಟಿದೆ. ಇಂತಹ ಎಲ್ಲಾ ಒಳ್ಳೆಯ ಕೆಲಸಗಳನ್ನು ಮತದಾರರು ಮರೆಯಬಾರದು ಎಂದರು.ಕಾರ್ಯಕ್ರಮದಲ್ಲಿ ಹಳಿಯಾಳ ತಹಸೀಲ್ದಾರ ಫಿರೋಜಷಾ ಸೋಮನಕಟ್ಟಿ, ತಾಪಂ ಇಒ ವಿಲಾಸರಾಜ್ ಪ್ರಸನ್ನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಪಾಟೀಲ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪಿ.ಐ. ಮಾನೆ, ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಇದ್ದರು. ರಮೇಶ ಪಾಟೀಲ ಕಾರ್ಯಕ್ರಮ ನಿರ್ವಹಿಸಿದರು.