ರಕ್ತದಾನದಿಂದ ಜೀವ ಉಳಿಸಬಹುದು: ಡಿಹೆಚ್ಒ ಡಾ. ಯಲ್ಲಾ ರಮೇಶ್ ಬಾಬು

KannadaprabhaNewsNetwork | Published : May 30, 2025 12:45 AM
ಸ್ವಯಂ ಪ್ರೇರಿತ ರಕ್ತದಾನದಿಂದ ಜನರ ಜೀವ ಉಳಿಸಬಹುದು.

ಕನ್ನಡಪ್ರಭ ವಾರ್ತೆ ಬಳ್ಳಾರಿಸ್ವಯಂ ಪ್ರೇರಿತ ರಕ್ತದಾನದಿಂದ ಜನರ ಜೀವ ಉಳಿಸಬಹುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಹೇಳಿದರು.ಬುಧವಾರ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರಕ್ತ ಸುರಕ್ಷತಾ ಟಾಸ್ಕ್ ಪೋರ್ಸ್ ಸಮಿತಿ ಹಾಗೂ ಏಡ್ಸ್ ನಿಯಂತ್ರಣ ಘಟಕ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ದೇವಿನಗರ, ಯೋಗ ತರಬೇತಿ ಕೇಂದ್ರ ಪಾರ್ವತಿನಗರ, ಎಸ್‌ಪಿ ಸರ್ಕಲ್ ಆಟೋ ಚಾಲಕರ ಸಂಘ ಇವುಗಳ ಸಹಯೋಗದಲ್ಲಿ ಸ್ಪಂದನ ಬ್ಲಡ್‌ಬ್ಯಾಂಕ್ ವತಿಯಿಂದ ದೇವಿನಗರದಲ್ಲಿ ಹಮ್ಮಿಕೊಂಡಿದ್ದ ಸ್ವಯ ಪ್ರೇರಿತ ರಕ್ತದಾನ ಶಿಬಿರದಲ್ಲಿ ದಾನ ಮಾಡಿದ ರಕ್ತದಾನಿಗಳಿಗೆ ಅಭಿನಂದಿಸಿ ಅವರು ಮಾತನಾಡಿದರು.ಜೀವಂತವಿರುವಾಗಲೇ ತಮ್ಮ ದೇಹದಿಂದ ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ಜಾತಿ ಧರ್ಮಗಳ ಎಲ್ಲೆಯಿಲ್ಲದೆ, ಗಂಡು-ಹೆಣ್ಣು ಎಂಬ ಭೇದವಿಲ್ಲದೆ ದಾನ ಮಾಡಬಹುದಾದ ಮತ್ತು ಇನ್ನೊಬ್ಬರ ಜೀವ ಉಳಿಸಲು ಸಹಾಯಕವಾಗುವುದೆಂದರೆ ಅದು ಮನುಷ್ಯನ ರಕ್ತವಾಗಿದೆ ಎಂದರು.ಒಬ್ಬರಿಂದ ಪಡೆದ ರಕ್ತವನ್ನು ಹೊಲ್ ಬ್ಲಡ್, ಪ್ಲೇಟ್‌ಲೆಟ್ಸ್, ಪ್ಲಾಸ್ಮಾ, ಪ್ಯಾಕಡ್ ಸೆಲ್ಸ್, ಎಂಬ ನಾಲ್ಕು ರೂಪದಲ್ಲಿ ವ್ಯಕ್ತಿಯ ಜೀವ ಉಳಿಸಲು ಬಳಸಬಹುದಾಗಿದ್ದು, ಪ್ರಸ್ತುತ ದಿನಗಳಲ್ಲಿ ರಕ್ತದ ಅವಶ್ಯಕತೆಯಿರುವುದರಿಂದ 18 ವರ್ಷ ಮೇಲ್ಪಟ್ಟ ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡುವ ಮೂಲಕ ಹಲವಾರು ಜನರ ಜೀವ ಉಳಿಸುವ ಕಾರ್ಯದಲ್ಲಿ ಭಾಗಿಯಾಗಬೇಕು ಎಂದು ತಿಳಿಸಿದರು.45 ಕೆಜಿ ಮೇಲ್ಪಟ್ಟ ಹಾಗೂ 12.5 ಗ್ರಾಮ್‌ಗಿಂತ ಹೆಚ್ಚು ಹಿಮೋಗ್ಲೊಬಿನ್ ಇರುವ 18 ವರ್ಷ ಮೇಲ್ಪಟ್ಟ ಮಹಿಳೆಯರು ಪ್ರತಿ ನಾಲ್ಕು ತಿಂಗಳಿಗೊಮ್ಮೆ, ಪುರುಷರು ಪ್ರತಿ ಮೂರು ತಿಂಗಳಿಗೊಮ್ಮೆ, ರಕ್ತದಾನ ಮಾಡುವ ಮೂಲಕ ರಕ್ತಹೀನತೆಯಿಂದ ಬಳಲುವ ಗರ್ಭಿಣಿ ಸ್ತ್ರೀಯರಿಗೆ, ಶಸ್ತ್ರಚಿಕಿತ್ಸಾ ಹೆರಿಗೆ ವೇಳೆ ಮತ್ತು ಅಪಘಾತಗಳು, ತುರ್ತು ಶಸ್ತ್ರಚಿಕಿತ್ಸೆಗಳ ಸಂದರ್ಭಕ್ಕಾಗಿ ಹಾಗೂ ಕ್ಯಾನ್ಸರ್ ರೋಗಿಗಳಿಗೆ ಥ್ಯಾಲಿಸೀಮಿಯಾ, ಹಿಮೋಫಿಲಿಯಾ ಮುಂತಾದ ರೋಗಿಗಳ ಜೀವವನ್ನು ಉಳಿಸಲು ಸಹಾಯಕವಾಗಲಿದೆ ಎಂದರು. ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾದಿಕಾರಿ ಡಾ.ಆರ್. ಅಬ್ದುಲ್ಲಾ ಮಾತನಾಡಿ ಸೊಳ್ಳೆ ಕಚ್ಚುವಿಕೆಯಿಂದ ಹರಡುವ ಡೆಂಘೀಯಂತಹ ಕಾಯಿಲೆಗೆ ಒಳಗಾಗಿ ಪ್ಲೇಟ್‌ಲೇಟ್ಸ್‌ ಕೊರತೆಯಾದಾಗ ರಕ್ತ ಅಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದರು.ರಕ್ತವನ್ನು ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ರಕ್ತವೇ ದೇಹದ ಜೀವನಾಡಿಯಾಗಿದ್ದು, ರಕ್ತಕ್ಕೆ ಪರ್ಯಾಯವಾದ ವಸ್ತು ಇಲ್ಲದೆ ಇರುವುದರಿಂದ ಇನ್ನೊಬ್ಬ ವ್ಯಕ್ತಿಯ ರಕ್ತದಾನದ ಮೂಲಕ ಮಾತ್ರ ರಕ್ತ ಪಡೆಯಬಹುದಾಗಿದೆ. ರಕ್ತದಾನ ಮಾಡುವ ಮೂಲಕ ದಾನಿಗಳು ತಮ್ಮ ಆರೋಗ್ಯ ಉಲ್ಲಾಸಮಯವಾಗಿಸಿಟ್ಟುಕೊಳ್ಳುವುದರ ಜೊತೆಗೆ ಇನ್ನೊಬ್ಬರ ಜೀವ ಉಳಿಸಲು ಮುಂದೆ ಬರಬೇಕೆಂದು ವಿನಂತಿಸಿದರು.ಈ ಸಂದರ್ಭ ದೇವಿನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಸುಧಾರಾಣಿ, ಬ್ಲಡ್‌ಬ್ಯಾಂಕ್ ವೈದ್ಯರಾದ ಡಾ. ಪ್ರಕಾಶ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಎಚ್. ದಾಸಪ್ಪನವರ, ಯೋಗ ಕೇಂದ್ರದ ಪ್ರಕಾಶ, ಮಹಿಳಾ ಮುಖಂಡರಾದ ಸುಮಾರೆಡ್ಡಿ, ರತ್ನ, ಸಿಬ್ಬಂದಿ ಶ್ವೇತಾ, ರಾಮಕೃಷ್ಣ, ಪ್ರಶಾಂತ್, ಕೇಶವ, ಅಂಬರೀಶ್ ಸೇರಿದಂತೆ ಆಶಾ ಕಾರ್ಯಕರ್ತೆಯರು, ದಾನಿಗಳು ಉಪಸ್ಥಿತರಿದ್ದರು.