ಬಸವಕಲ್ಯಾಣ: ಮಾನವನ ದೇಹದ ಜೀವಸೆಲೆಯಾದ ರಕ್ತವನ್ನು ದಾನಮಾಡಿ ಇನ್ನೊಂದು ಜೀವವನ್ನು ಉಳಿಸುವದು ಮಹತ್ಕಾರ್ಯವಾಗಿದ್ದು, ಅದು ನಿಜವಾದ ಜೀವದಾನದ ಸಂಭ್ರಮವಾಗಿದೆ ಎಂದು ಪ್ರೊ.ವಿಜಯಕುಮಾರ ರಾಯಪಳ್ಳೆ ನುಡಿದರು.
ಉಪನ್ಯಾಸಕ ನಾಗರಾಜ ಅವರು ಮಾತನಾಡಿ, ರಕ್ತ ದಾನವು ಕ್ಯಾನ್ಸರ್ ಅಪಾಯವನ್ನು ತಗ್ಗಿಸುತ್ತದೆ, ರಕ್ತದಾನ ಮಾಡಿದಾಗ ನಮ್ಮ ದೇಹ ಹೊಸ ರಕ್ತ ಪಡೆಯುವ ಅವಕಾಶ ಸಿಗುತ್ತದೆ. ರಕ್ತದಾನದಿಂದ ನಮಗೇನೂ ನಷ್ಟವಾಗುವುದಿಲ್ಲ. ಆದರೆ ನಮ್ಮ ಆರೋಗ್ಯ ಮತ್ತು ಸಮುದಾಯದ ಆರೋಗ್ಯದ ಅನುಕೂಲಗಳಿಗೆ ಬೆಲೆ ಕಟ್ಟಲಾಗದು ಎಂದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಶ್ರೀಧರ ಛಲವಾದಿ ಮಾತನಾಡಿ, ರಕ್ತದಾನ ನಿಜಕ್ಕೂ ದೈವಿಕ ಕ್ರಿಯೆ. ಇದು ಸಾಯುತ್ತಿರುವ ವ್ಯಕ್ತಿಯನ್ನು ಉಳಿಸುತ್ತದೆ. ಸಾಯುತ್ತಿರುವವರನ್ನು ರಕ್ಷಿಸಲು ರಕ್ತದಾನ ಮಾಡುವವರು ನಿಜವಾಗಿಯೂ ಧನ್ಯರು. ರಕ್ತದಾನದ ಮಹತ್ವದ ಬಗ್ಗೆ ಜಾಗೃತಿ ಮೂಡಿಸಲು ಪ್ರಪಂಚದಾದ್ಯಂತ ರಕ್ತದಾನ ಶಿಬಿರಗಳನ್ನು ನಡೆಸಲಾಗುತ್ತಿದೆ. ಇದರಿಂದಾಗಿ ಹೆಚ್ಚಿನ ಜನರು ಜೀವ ಉಳಿಸುವ ಪ್ರಕ್ರಿಯೆಗೆ ಕೊಡುಗೆ ನೀಡಬಹುದು ಎಂದರು.ಕಾರ್ಯಕ್ರಮದಲ್ಲಿ ಪ್ರಾರ್ಥನೆ ಗೀತೆಯನ್ನು ಧನಾಶ್ರೀ ಸ್ವಾಗತ ಗೀತೆಯನ್ನು ಭೂಮಿಕಾ ಪ್ರಸ್ತುತಪಡಿಸಿದರೆ ವಿಕಾಸ ನಿರೂಪಿಸಿ ಶಿವಪುತ್ರ ವಂದಿಸಿದರು.