ಕನ್ನಡಪ್ರಭ ವಾರ್ತೆ ಇಳಕಲ್ಲ
ರಕ್ತದಾನ ಶ್ರೇಷ್ಠ ದಾನ. ಇನ್ನೊಬ್ಬರ ಜೀವ ಉಳಿಸುವ ಪುಣ್ಯದ ಕೆಲಸ ಎಂದು ಛತ್ತೀಸಗಢ ರಾಜ್ಯದ ರಾಯಪುರದ ಕಾಜಲ್ ಸಚದೇವ ತಿಳಿಸಿದರು.ನಗರದ ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯಲ್ಲಿ ಭಾನುವಾರ ನಡೆದ 7ನೇ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಏಳು ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಾ ಬಂದಿರುವ ಇಳಕಲ್ಲ ನಗರದ ರಾಮಾನುಜಾಚಾರ್ಯ ಫೌಂಡೇಶನ್ ಕಾರ್ಯ ಶ್ಲಾಘನೀಯವಾಗಿದೆ. ಇಂದು ಸಂಗ್ರಹಿಸಿದ ೪೦೮ ಬಾಟಲ್ ರಕ್ತವನ್ನು ಚಿಕ್ಕಮಕ್ಕಳಿಗೆ ಬರುವ ಮಾರಣಾಂತಕ ಥಲೆಸ್ಸೆಮಿಯಾ ರೋಗದಿಂದ ಬಳಲುವ ಮಕ್ಕಳಿಗಾಗಿ ಉಪಯೋಗ ಮಾಡಲಾಗುತಿರುವುದು ಸಂತಸದ ಸಂಗತಿ. ಈ ರೋಗ ಬಂದ ಮಕ್ಕಳಿಗೆ ಪ್ರತಿ ೨೦ ದಿನಕ್ಕೊಮ್ಮೆ ರಕ್ತ ಹಾಕಲೇಬೇಕು, ಇಲ್ಲದಿದ್ದರೆ ಆ ಮಗು ಸಾವಿಗೀಡಾಗುತ್ತದೆ. ಅಂತಹ ಮಕ್ಕಳ ಜೀವ ರಕ್ಷಣೆಗಾಗಿ ನೀವು ಕೊಡುವ ರಕ್ತ ಬಳಕೆ ಆಗುತ್ತದೆ ಎಂದರೆ ನಿಮಗೆ ಒಂದು ಮಗುವಿನ ಜೀವ ಉಳಿಸಿದ ಪುಣ್ಯ ಬರುತ್ತದೆ. ಅಂತಹ ಮಹಾನ್ ಕಾರ್ಯ ಮಾಡುತ್ತಿರುವ ಡಾ.ಪವನ ದರಕ ಹಾಗೂ ಆವರ ಗೆಳೆಯರ ತಂಡಕ್ಕೆ ಜನರ ಪರವಾಗಿ ನಾನು ಅಭಿನಂದಿಸುವೆ ಎಂದು ತಿಳಿಸಿದರು.
ಅತಿಥಿಗಳಾಗಿ ಆಗಮಿಸಿದ ವಿಜಯಪುರದ ಮಹಾವೀರ ಪಾರೀಖ್ ಮತ್ತು ನಿತಿನ್ ರಣವಾಲ ಮಾತನಾಡಿದರು. ರಾಮಾನುಜಾಚಾರ್ಯ ಫೌಂಡೇಶನ್ ಅಧ್ಯಕ್ಷ ಯತಿರಾಜ ದರಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಡಾ.ಪವನಕುಮಾರ ದರಕ ಥಲಸ್ಸೆಮಿಯಾ ರೋಗದ ಬಗ್ಗೆ ಮಾಹಿತಿ ನೀಡಿದರು. ಮಹೇಶ್ವರಿ ಶಾಲಾ ಮಕ್ಕಳು ಪ್ರಾರ್ಥಿಸಿದರು. ಪ್ರಾಚಾರ್ಯ ಆರ್. ದತ್ತಾತ್ರೇಯ ಸ್ವಾಗತಿಸಿದರು. ನವೀನ ಮೇಹತಾ, ಶ್ರೀರಾಮ ತಾಪಡಿಯಾ, ಪಂಕಜ ಕರವಾ, ಡಾ.ಪ್ರಭು ಮದಭಾವಿ ಪರಿಚಯಿಸಿದರು ಸಂದೀಪ ಮೇಹತಾ ವಂದಿಸಿದರು. ವಿಜಯಕುಮಾರ ಕುಲಕರ್ಣಿ ನಿರುಪಿಸಿದರು. ನಗರದ ೪೦೮ ಜನ ಯುವಕರು ರಕ್ತದಾನ ಮಾಡಿದರು. ೩೪ನೇ ಬಾರಿಗೆ ರಕ್ತದಾನ ಮಾಡಿದ ಯುವಕ ಪವಾರನಿಗೆ ಡಾ. ಪವನ ದರಕ ಗೌರವಿಸಿ ಸತ್ಕರಿಸಿದರು.