ಲಕ್ಷ್ಮೇಶ್ವರ: ತುರ್ತು ಸಂದರ್ಭಗಳಲ್ಲಿ ಜೀವ ಉಳಿಸುವ ರಕ್ತ ಅಮೂಲ್ಯವಾಗಿದೆ. ಹಲವು ಜೀವ ಉಳಿಸಿವ ಶಕ್ತಿ ರಕ್ತಕ್ಕಿದೆ. ರಕ್ತ ದಾನ ಶಿಬಿರವನ್ನು ಲಕ್ಷ್ಮೇಶ್ವರ ತಾಲೂಕಿನ ಪತ್ರಕರ್ತರ ಸಂಘದ ವತಿಯಿಂದ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಶಾಸಕ ಡಾ. ಚಂದ್ರು ಲಮಾಣಿ ಹೇಳಿದರು.
ಪತ್ರಕರ್ತರು ಸಮಾಜಮುಖಿ ಸುದ್ದಿಗಳಿಗೆ ಹೆಚ್ಚು ಒತ್ತು ನೀಡಬೇಕು. ಸಮಾಜದಲ್ಲಿ ನಡೆಯುವ ಅನಾಚಾರಗಳನ್ನು ತಡೆಯುವ ಶಕ್ತಿ ಅವರ ಲೇಖನಗಳಿಗೆ ಇದೆ. ಪತ್ರಕರ್ತರು ಜನಪ್ರತಿನಿಧಿಗಳ ತಪ್ಪು ಹುಡುಕುವ ಕಾರ್ಯದ ಜೊತೆಯಲ್ಲಿ ಅವರು ಮಾಡುವ ಉತ್ತಮ ಕೆಲಸಗಳಿಗೆ ಬೆಂಬಲ ನೀಡಿದಲ್ಲಿ ಇನ್ನಷ್ಟು ಕೆಲಸ ಮಾಡುವ ಉತ್ಸಾಹ ಹೆಚ್ಚಾಗುತ್ತದೆ. ಸಮಾಜದ ಓರೆಕೋರೆಗಳನ್ನು ತಿದ್ದುವ ಗುರುತರ ಜವಾಬ್ದಾರಿ ಪತ್ರಕರ್ತರ ಮೇಲೆ ಇದೆ. ಪತ್ರಿಕೆ ಹಾಗೂ ಪತ್ರಕರ್ತರ ಮೇಲೆ ಸಮಾಜದಲ್ಲಿ ಗೌರವವಿದೆ. ಸತ್ಯ ಹಾಗೂ ನೊಂದವರ ಮೇಲೆ ಬೆಳಕು ಚೆಲ್ಲುವ ವರದಿಗಳು ನಿಮ್ಮಿಂದ ಬರಲಿ ಎಂದು ಹೇಳಿದರು.
ಈ ವೇಳೆ ಲಕ್ಷ್ಮೇಶ್ವರ ತಾಲೂಕು ವೈದ್ಯರ ಸಂಘದ ಅಧ್ಯಕ್ಷ ಡಾ.ಎಸ್.ಸಿ. ಮಲ್ಲಾಡದ, ಲಕ್ಷ್ಮೇಶ್ವರ ತಾಲೂಕು ಐಎಂಎ ಅಧ್ಯಕ್ಷ ಡಾ.ಪಿ.ಡಿ. ತೋಟದ, ಗದಗ ಜಿಮ್ಸನ ರಕ್ತ ಭಂಡಾರದ ವೈದ್ಯಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಮಾತನಾಡಿದರು.ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಕಳಸಾಪೂರ ಅಧ್ಯಕ್ಷತೆವಹಿಸಿ ಮಾತನಾಡಿದರು.
ಹಿರಿಯ ಪತ್ರಕರ್ತ ರಮೇಶ ನಾಡಿಗೇರ ಪತ್ರಕರ್ತರು ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ಹಣಗಿ ಕಾರ್ಯಕ್ರಮ ನಿರ್ವಹಿಸಿದರು. ದಿಗಂಬರ ಪೂಜಾರ ಸ್ವಾಗತಿಸಿದರು. ಸೋಮಣ್ಣ ಯತ್ತಿನಹಳ್ಳಿ ವಂದಿಸಿದರು.
ಸಮಾರಂಭದಲ್ಲಿ ಚಂಬಣ್ಣ ಬಾಳಿಕಾಯಿ, ತಾಪಂ ಇಓ ಕೃಷ್ಣಪ್ಪ ಧರ್ಮರ, ಪುರಸಭೆಯ ಉಪಾಧ್ಯಕ್ಷ ಫಿರ್ಧೋಶ ಆಡೂರ, ಲಕ್ಷ್ಮೇಶ್ವರ ತಾಲೂಕು ರಾಜ್ಯ ನೌಕರರ ಸಂಘದ ಅಧ್ಯಕ್ಷ ಗುರುರಾಜ ಹವಳದ, ವೀರಣ್ಣ ಪವಾಡದ, ಜಾನು ಲಮಾಣಿ, ಕರವೇ ಸ್ವಾಭಿಮಾನಿ ಸೇನೆಯ ಜಿಲ್ಲಾ ಅಧ್ಯಕ್ಷ ಶರಣು ಗೋಡಿ, ಇಸ್ಮಾಯಿಲ್ ಆಡೂರ, ಶಿವಯ್ಯ ಕುಲಕರ್ಣಿ, ಬಿ.ಎಂ.ಕುಂಬಾರ, ಎಸ್.ಬಿ. ಅಣ್ಣಿಗೇರಿ ಸೇರಿದಂತೆ ಅನೇಕರು ಇದ್ದರು.