ಭಟ್ಕಳ: ಕೇಂದ್ರದಲ್ಲಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ದೇಶದೆಲ್ಲೆಡೆ ಬಾಂಬ್ ಸ್ಫೋಟದ ಸದ್ದಡಗಿಸಿದೆ. ಇದಕ್ಕೆ ನರೇಂದ್ರ ಮೋದಿ ಅವರನ್ನು ಅಭಿನಂದಿಸುತ್ತೇನೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.
ತಮಗೆ ರಕ್ಷಣೆಯಿದೆ ಎಂತಾದರೆ ಅವರು ಬಾಂಬ್ ಬ್ಲಾಸ್ಟ್ ಮಾಡಿ, ಇಲ್ಲಿದ್ದರೆ ನನ್ನನ್ನು ಉಳಿಸುವವರು ಬೇಕಾದಷ್ಟು ಜನರಿದ್ದಾರೆ ಎಂಬ ಧೈರ್ಯದಿಂದ ಮತ್ತಷ್ಟು ಕೃತ್ಯ ಎಸಗುತ್ತಾರೆ. ಬೆಂಗಳೂರಿನ ಬಾಂಬ್ ಸ್ಫೋಟ ಪ್ರಕರಣವನ್ನು ಎನ್ಐಎ ಕೈಗೆತ್ತಿಕೊಂಡ ಕೆಲವೇ ದಿನಗಳಲ್ಲಿ ಪಶ್ಚಿಮ ಬಂಗಾಳಕ್ಕೆ ತೆರಳಿ ಆರೋಪಿಯನ್ನು ಬಂಧಿಸಿದೆ. ಇದು ಹೊಸ ಭಾರತ. ಇಲ್ಲಿ ಬಾಂಬ್ ಸ್ಫೋಟಿಸಿದವರು ತಪ್ಪಿಸಿಕೊಂಡು ಹೋಗಲು ಸಾಧ್ಯವಿಲ್ಲ ಎಂದರು.
ಗಲಾಟೆ ನಡೆಸುವುದು ಸ್ವಾತಂತ್ರ್ಯ ಬಂದ ಹೊತ್ತಿನಿಂದಲೂ ಇಡೀ ಭಾರತದಲ್ಲಿ ನಡೆಯುತ್ತಿತ್ತು. ಅದು ಬಳಿಕ ಎಲ್ಲಿ ಬಂದು ನಿಂತಿತು ಅಂದರೆ, ಹಿಂದೂಗಳಿಗೆ ಪ್ರತ್ಯೇಕ ಹಿಂದೂಸ್ತಾನ, ಮುಸ್ಲಿಮರಿಗೆ ಪಾಕಿಸ್ತಾನ ಎನ್ನುವ ತನಕ ಹೋಯಿತು. ಆ ವೇಳೆ ಮಹಾತ್ಮ ಗಾಂಧಿ ಹಾಗೂ ಜವಾಹರಲಾಲ್ ನೆಹರು ಮುಸ್ಲಿಮರಿಗೆ ಪ್ರತ್ಯೇಕ ಪಾಕಿಸ್ತಾನ ಇರಬಹುದು. ಆದರೆ ಹಿಂದೂಗಳಿಗೆ ಪ್ರತ್ಯೇಕ ಅಂತ ಬೇಡ, ಯಾವ ಯಾವ ಮುಸ್ಲಿಮರಿಗೆ ಭಾರತ ಅಂದರೆ ಪ್ರೀತಿ ಇದೆಯೋ ಅವರು ಇಲ್ಲಿಯೇ ಇರಬಹುದು ಎಂದರು. ಆದರೆ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಇದನ್ನು ವಿರೋಧಿಸಿದ್ದರೂ ನಿರುಪಾಯರಾಗಿ ಒಪ್ಪಬೇಕಾಯಿತು. ಅಂಬೇಡ್ಕರ್ ಮುಸ್ಲಿಮರನ್ನು ದೇಶದಲ್ಲಿ ಇಟ್ಟುಕೊಳ್ಳುವುದು ಒಳಿತಿನ ಸಂಗತಿಯಲ್ಲ ಎಂದು ಹೇಳಿದ್ದರು. ಮುಸ್ಲಿಮರಿಗೆ ಪ್ರತ್ಯೇಕ ದೇಶ ಎಂದು ಕೊಟ್ಟ ಮೇಲೆ ಅವರನ್ನು ಅಲ್ಲಿಗೆ ಕಳುಹಿಸಿ ಅಲ್ಲಿದ್ದ ಹಿಂದೂಗಳನ್ನು ಇಲ್ಲಿಗೆ ಕರೆತರಬೇಕೆಂದಿದ್ದರು ಎಂದು ಸ್ಮರಿಸಿದರು.