ಕನ್ನಡಪ್ರಭ ವಾರ್ತೆ ಹಾಸನ
ನಗರದ ಸುತ್ತಮುತ್ತ ಮೂರು ಕಡೆ ಇರುವ ವಿದ್ಯಾಸೌಧ ಶಿಕ್ಷಣ ಸಂಸ್ಥೆಗಳಿಗೆ ಬಾಂಬ್ ಇಟ್ಟಿರುವುದಾಗಿ ಭಾನುವಾರ ರಾತ್ರಿ ಇ-ಮೇಲ್ ಮೂಲಕ ಬೆದರಿಕೆ ಬಂದಿರುವ ಹಿನ್ನೆಲೆಯಲ್ಲಿ ಸೋಮವಾರದಂದು ಪಾಠ ಕೇಳುತ್ತಿದ್ದ ಮಕ್ಕಳನ್ನು ಪೋಷಕರು ದಿಢೀರನೇ ವಾಪಸ್ ಮನೆಗೆ ಕರೆದುಕೊಂಡು ಹೋದ ಪ್ರಸಂಗ ನಡೆದಿದೆ. ಮಂಜೇಗೌಡ ಎಂಬುವವರಿಗೆ ಸೇರಿದ ಮಾಲೀಕತ್ವದ ಕೈಗಾರಿಕೆ ಪ್ರದೇಶದಲ್ಲಿರುವ ವಿದ್ಯಾಸೌಧ ಶಾಲೆ, ಕೆ.ಆರ್. ಪುರಂನಲ್ಲಿರುವ ವಿದ್ಯಾಸೌಧ ಪಬ್ಲಿಕ್ ಸ್ಕೂಲ್ ಹಾಗೂ ವಿದ್ಯಾಸೌಧ ಕಿಡ್ಸ್ ಹಾಗೂ ಕಾಲೇಜಿಗೆ ಸೋಮವಾರ ೧ ಗಂಟೆಗೆ ಬಾಂಬ್ ಹಾಕಿ ಸ್ಫೋಟಿಸುವುದಾಗಿ ಯಾರೋ ಅಪರಿಚಿತರು ಶಿಕ್ಷಣ ಸಂಸ್ಥೆಗೆ ಬೆದರಿಕೆಯ ಇ-ಮೇಲ್ ತಲುಪಿಸಿದ್ದಾರೆ. ವಿಷಯ ತಿಳಿದ ಶಾಲೆಯ ಪ್ರಾಂಶುಪಾಲರು ತಕ್ಷಣ ನಗರ ಹಾಗೂ ಗ್ರಾಮಾಂತರ ಪೊಲೀಸ್ ಠಾಣೆಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಪೊಲೀಸ್ ಅಧಿಕಾರಿಗಳು, ಪೊಲೀಸರು ಹಾಗೂ ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿಗಳು ತಡರಾತ್ರಿಯೇ ಶಾಲಾ ಕಟ್ಟಡಗಳಿಗೆ ಆಗಮಿಸಿ ಪೂರ್ಣ ಪರಿಶೀಲಿಸಿದರು. ಮೂರು ಕಡೆಯೂ ತೆರಳಿ ಪರಿಶೀಲಿಸಿದರೂ ಕೂಡ ಬಾಂಬ್ ಇರುವ ಬಗ್ಗೆ ಯಾವ ವಸ್ತುಗಳು ಪತ್ತೆ ಆಗಲಿಲ್ಲ. ಬಾಂಬ್ ಬೆದರಿಕೆ ವಿಚಾರವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ತೆಗೆದುಕೊಂಡು ಇ-ಮೇಲ್ ಕಳುಹಿಸಿದವರು ಯಾರು? ಎಲ್ಲಿಂದ ಕಳುಹಿಸಲಾಗಿದೆ ಎನ್ನುವ ಬಗ್ಗೆ ತನಿಖಾ ದಳ ತಮ್ಮ ಕಾರ್ಯಚರಣೆ ಆರಂಭಿಸಿದೆ. ಎಂದಿನಂತೆ ಪೋಷಕರು ವಿದ್ಯಾಸೌಧ ಶಾಲೆಗೆ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿದ್ದರು. ಆದರೆ ಬಾಂಬ್ ವಿಚಾರ ತಿಳಿಯುತ್ತಿದ್ದಂತೆ ಬಹುತೇಕ ಪೋಷಕರು ಗಾಬರಿಯಲ್ಲಿ ತಮ್ಮ ತಮ್ಮ ವಾಹನದಲ್ಲಿ ಬಂದು ತಮ್ಮ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋಗುತ್ತಿದ್ದರು. ಇನ್ನು ಸೋಮವಾರ ೧ ಗಂಟೆಗೆ ಬಾಂಬ್ ಹಾಕುವ ಸಮಯವನ್ನು ಯಾರೋ ಅಪರಿಚಿತರು ಇಮೇಲೆ ಮಾಡಿದ ಬಗ್ಗೆ ವಿಷಯ ಹರಡುತ್ತಿದ್ದಂತೆ ಪೋಷಕರು ಸರದಿ ಸಾಲಿನಲ್ಲಿ ಎಂಬಂತೆ ಶಾಲೆಯತ್ತ ಧಾವಿಸಿದರು. ಈ ವೇಳೆ ಶಾಲೆಯ ಆಡಳಿತ ಮಂಡಳಿ ಮನವರಿಕೆ ಮಾಡಿದರೂ ಕೂಡ ಅನೇಕರು ಒಪ್ಪದೇ ತಮ್ಮ ಮಕ್ಕಳನ್ನು ವಾಪಸ್ ಕರೆದುಕೊಂಡು ಹೋದರು.ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿತ್ತು.