ಜ್ಞಾನಾರ್ಜನೆಗೆ ಪುಸ್ತಕ ಉತ್ತಮ ಪರಿಕರ: ಪ್ರೊ.ಎಸ್.ಜಿ. ಸಿದ್ದರಾಮಯ್ಯ

KannadaprabhaNewsNetwork | Published : Nov 18, 2024 12:02 AM

ಸಾರಾಂಶ

ಅರಿವು ಓದಿನ ಮರೆವಾಗದೆ, ಕ್ರಿಯೆಯ ರೂಪವನ್ನು ಹೊಂದಿ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳುವ ಪ್ರಜ್ಞೆಯಾಗಬೇಕು.

ಸಂಡೂರು: ಜಗತ್ತಿನ ಬದಲಾವಣೆಯು ಪುಸ್ತಕದಿಂದ ಸಾಧ್ಯವಾಗಿದೆ. ಅಕ್ಷರದ ಅರಿವು ಬಿತ್ತುವ ಸಾಧನಗಳು ಪುಸ್ತಕಗಳಾಗಿವೆ ಎಂದು ಸಾಹಿತಿ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಯು.ಭೂಪತಿ ಸ್ಮಾರಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಗ್ರಂಥಾಲಯಕ್ಕೆ ಪುಸ್ತಕಗಳ ಕೊಡುಗೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅರಿವು ಓದಿನ ಮರೆವಾಗದೆ, ಕ್ರಿಯೆಯ ರೂಪವನ್ನು ಹೊಂದಿ ಬದುಕನ್ನು ಉತ್ತಮವಾಗಿ ಕಟ್ಟಿಕೊಳ್ಳುವ ಪ್ರಜ್ಞೆಯಾಗಬೇಕು. ಇದಕ್ಕೆ ಪೂರಕ ವಾತಾವರಣವನ್ನು ಪುಸ್ಕಕಗಳು ನಿರ್ಮಿಸುವುದರಿಂದ ಪ್ರತಿಯೊಬ್ಬರೂ ಓದಿನ ಹವ್ಯಾಸವನ್ನು ರೂಢಿಸಿಕೊಳ್ಳಬೇಕು ಎಂದರು.

ಯು. ಭೂಪತಿ ಸ್ಮಾರಕ ಟ್ರಸ್ಟ್ನ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ತಮ್ಮ ಪ್ರಸ್ತಾವಿಕ ನುಡಿಗಳಲ್ಲಿ, ಪುಸ್ತಕಗಳು ವ್ಯಕ್ತಿತ್ವ ವಿಕಸನದ ಸಾಧನಗಳಾಗಿವೆ. ಶಾಲಾ ಕಾಲೇಜುಗಳಿಗೆ ಪುಸ್ತಕಗಳನ್ನು ನೀಡುವುದರ ಮೂಲಕ ವಿದ್ಯಾರ್ಥಿಗಳಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಸದುದ್ದೇಶವನ್ನು ನಮ್ಮ ಟ್ರಸ್ಟ್ ಹೊಂದಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಚ್.ಬಿ. ಚಂದ್ರಪ್ಪ ಮಾತನಾಡಿ, ಪುಸ್ತಕಗಳು ಮನುಕುಲದ ಆಸ್ತಿಯಾಗಿದ್ದು, ಜ್ಞಾನವನ್ನು ಕೊಡುವ ದೀಪದಂತಿವೆ. ಇಂತಹ ಪುಸ್ತಕಗಳನ್ನು ನೀಡಿದ ಯು. ಭೂಪತಿ ಸ್ಮಾರಕ ಟ್ರಸ್ಟ್ನ ಕಾರ್ಯ ಅನುಕರಣೀಯವಾದದ್ದು ಎಂದರು.

ಮಕ್ಕಳ ದಿನಾಚರಣೆಯ ಅಂಗವಾಗಿ ಏರ್ಪಡಿಸಿದ್ದ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ವಿತರಿಸಲಾಯಿತು.

ಸಾಹಿತಿಗಳಾದ ಬಸವರಾಜ ಮಸೂತಿ, ಕಸಾಪ ಅಧ್ಯಕ್ಷ ಬಿ. ನಾಗನಗೌಡ, ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ದಿನೇಶ್ ದೇಶಮುಖ್, ಸದಸ್ಯರಾದ ಜಿ. ವೀರೇಶ್, ಡಾ. ತಿಪ್ಪೇರುದ್ರ ಸಂಡೂರು, ಉಪನ್ಯಾಸಕರಾದ ಕೆ.ಆರ್. ನಾಗರತ್ನ, ಬಸವಣ್ಣೆಮ್ಮ, ಪರ್ವಿನ್‌ಬಾನು, ಸಂಧ್ಯಾರಾಣಿ, ಸಂಪತ್‌ಕುಮಾರ್, ಸಿದ್ದೇಶ್ ಸೇರಿದಂತೆ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸಂಡೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಯು. ಭೂಪತಿ ಸ್ಮಾರಕ ಟ್ರಸ್ಟ್ ವತಿಯಿಂದ ಕಾಲೇಜಿನ ಗ್ರಂಥಾಲಯಕ್ಕೆ ಪುಸ್ತಕಗಳನ್ನು ಕೊಡುಗೆಯಾಗಿ ನೀಡಲಾಯಿತು.

Share this article