ಕನ್ನಡಪ್ರಭ ವಾರ್ತೆ ಮಂಗಳೂರು ಚಂಪಾ.ಪಿ. ಶೆಟ್ಟಿ ನಿರ್ದೇಶನದ ‘ಕೋಳಿ ಎಸ್ರು’ ಹಾಗೂ ಪೃಥ್ವಿ ಕೊಣನೂರು ನಿರ್ದೇಶಿಸಿರುವ ‘ಹದಿನೇಳೆಂಟು’ ಚಿತ್ರಗಳು ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡಕ್ಕೆ ಹೆಸರು ತಂದು ಕೊಟ್ಟಿದೆ. ಜ.26 ರಂದು ಈ ಎರಡೂ ಚಿತ್ರಗಳು ಕರ್ನಾಟಕದಾದ್ಯಂತ ಎಲ್ಲ ಮಲ್ಟಿಪ್ಲೆಕ್ಸ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಚಂಪಾ ಶೆಟ್ಟಿ ಮತ್ತು ಪೃಥ್ವಿ ಕೊಣನೂರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಕೋಳಿ ಎಸ್ರು’ ಮತ್ತು ‘ಹದಿನೇಳೆಂಟು’ ಚಲನಚಿತ್ರಗಳು, ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ,, MAMI, ಹಾಂಗ್ಕಾಂಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ಕೇರಳದ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, TIFF ಕಿಡ್ಸ್, Zlin ಚಲನಚಿತ್ರೋತ್ಸವ, ಮೆಲ್ಬೋರ್ನ್ ಫಿಲ್ಮ್ ಫೆಸ್ಟಿವಲ್, IFFI ಗೋವಾ, ಪ್ರೇಗ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ, ನ್ಯೂಯಾರ್ಕ್ ಇಂಡಿಯನ್ ಫಿಲ್ಮ್ ಫೆಸ್ಟಿವಲ್, ಒಟ್ಟಾವ ಇಂಡಿಯನ್ ಫಿಲ್ಮ್ ಫೆಸ್ಟಿವಲ್ ಮುಂತಾದ ಹಲವು ಪ್ರತಿಷ್ಠಿತ ಚಿತ್ರೋತ್ಸವಗಳಿಗೆ ಆಯ್ಕೆ ಆಗಿದೆ. ಮಾತ್ರವಲ್ಲ ಸುಮಾರು 40 ಕ್ಕೂ ಹೆಚ್ಚು ಪ್ರಶಸ್ತಿಗಳಿಗೆ ನಾಮ ನಿರ್ದೇಶನಗೊಂಡು ಸುಮಾರು 24ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಗಳಿಸಿ ಪ್ರೇಕ್ಷಕರಿಂದ ಹಾಗೂ ವಿಮರ್ಶಕರಿಂದ ಅಪಾರ ಮೆಚ್ಚುಗೆ ಪಡೆದಿವೆ ಎಂದವರು ತಿಳಿಸಿದರು.
ಕಾ.ತ. ಚಿಕ್ಕಣ್ಣನವರ ಕತೆಯಾಧಾರಿತ ‘ಕೋಳಿ ಎಸ್ರು’ ಚಿತ್ರದ ಕತೆ ಮೈಸೂರಿನ ಗ್ರಾಮೀಣ ಭಾಗದ್ದಾಗಿದ್ದು, ಚಿತ್ರದ ಶೂಟಿಂಗ್ ಕೂಡಾ ಟಿ. ನರಸೀಪುರ ಸುತ್ತಮುತ್ತಲೇ ಆಗಿದೆ. ಚಿತ್ರದಲ್ಲಿ ಟಿ. ನರಸೀಪುರ, ಚಾಮರಾಜನಗರ ಭಾಷೆಯನ್ನು ಬಳಸಲಾಗಿದೆ. ನೂರಕ್ಕೆ ನೂರು ಭಾಗ ಕಲಾವಿದರು ಮೈಸೂರು ,ಮಂಡ್ಯದ ಗ್ರಾಮೀಣ ಕಲಾವಿದರೇ ಎಂಬುದು ವಿಶೇಷ.‘ಹದಿನೇಳೆಂಟು’ ಚಿತ್ರ ಕಾಲೇಜಿನಲ್ಲಿ ನಡೆಯುವ ಒಂದು ವಿಡಿಯೋ ವೈರಲ್ ಹಾಗೂ ಅದರ ಸುತ್ತ ನಡೆಯುವ ಘಟನೆಗಳನ್ನು ಆಧರಿಸಿದ ಸಿನೆಮಾ. ಇಂದಿನ ಮಕ್ಕಳು ಹಾಗೂ ಪೋಷಕರು ನೋಡಲೇ ಬೇಕಾದ ಚಿತ್ರವಾಗಿದೆ.
ಈ ಎರಡೂ ಚಿತ್ರಗಳೂ ಕೇವಲ ಚಿತ್ರೋತ್ಸವಕ್ಕೆ ಸೀಮಿತವಾಗದೆ, ಸಾಮಾನ್ಯ ಪ್ರೇಕ್ಷಕರಿಗೂ ತಲುಪಬೇಕು ಎಂಬ ಉದ್ದೇಶದಿಂದ ಎರಡೂ ತಂಡ ಒಟ್ಟಾಗಿ ಸೇರಿ ತಮ್ಮ ಚಿತ್ರಗಳ ಬಿಡುಗಡೆಗೆ ಹೊಸ ಯೋಜನೆ ಹಾಕಿಕೊಂಡಿದೆ.
ಗೀತಾ ಸುರತ್ಕಲ್, ಅಕ್ಷತಾ ಪಾಂಡವಪುರ, ಪ್ರಕಾಶ್ ಪಿ ಶೆಟ್ಟಿ, ವೇಣುಗೋಪಾಲ್ ಇದ್ದರು.