ಪೋಕ್ಸೋ ಪ್ರಕರಣ : ಯಾದಗಿರಿ ಗ್ರಾಮದಲ್ಲಿ ಸವರ್ಣೀಯ ಮುಖಂಡರು ದಲಿತರ ಮೇಲೆ ಹೇರಿದ್ದ ಬಹಿಷ್ಕಾರ ರದ್ದು

KannadaprabhaNewsNetwork | Updated : Sep 14 2024, 09:07 AM IST

ಸಾರಾಂಶ

  ಯಾದಗಿರಿಯ ಬಪ್ಪರಗಾ ಗ್ರಾಮದ ಸವರ್ಣೀಯ ಮುಖಂಡರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ತೆರಳಿ ಶಾಂತಿ ಸಭೆ ನಡೆಸಿದರು.

ಬಸವರಾಜ್‌ ಕಟ್ಟೀಮನಿ

 ಹುಣಸಗಿ (ಯಾದಗಿರಿ) : ಪೋಕ್ಸೋ ಪ್ರಕರಣದಲ್ಲಿ ರಾಜೀ ಪಂಚಾಯ್ತಿಗೊಪ್ಪದೆ ಪೋಕ್ಸೋ ಕಾಯ್ದೆಯಡಿ ದೂರು ದಾಖಲಿಸಿದ್ದರಿಂದ ಆಕ್ರೋಶಗೊಂಡ ಯಾದಗಿರಿಯ ಬಪ್ಪರಗಾ ಗ್ರಾಮದ ಸವರ್ಣೀಯ ಮುಖಂಡರು ದಲಿತರಿಗೆ ಸಾಮಾಜಿಕ ಬಹಿಷ್ಕಾರ ಹಾಕಿದ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಎಚ್ಚೆತ್ತುಕೊಂಡ ಅಧಿಕಾರಿಗಳು ಶುಕ್ರವಾರ ಗ್ರಾಮಕ್ಕೆ ತೆರಳಿ ಶಾಂತಿ ಸಭೆ ನಡೆಸಿದರು. ರಾತ್ರಿವರೆಗೂ ಗ್ರಾಮಸ್ಥರೊಂದಿಗೆ ಸಭೆ ನಡೆಸಿದ ಅಧಿಕಾರಿಗಳು ಬಹಿಷ್ಕಾರ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಯಶಸ್ವಿಯಾದರು.

ಸವರ್ಣೀಯರ ಯುವಕನೊಬ್ಬ 15 ವರ್ಷದ ದಲಿತ ಬಾಲಕಿಯೊಬ್ಬಳನ್ನು ಪುಸಲಾಯಿಸಿ ದೈಹಿಕ ಸಂಪರ್ಕ ಬೆಳೆಸಿದ್ದ. ಆಕೆ ಗರ್ಭಿಣಿಯಾಗುತ್ತಿದ್ದಂತೆ ಕೈಕೊಟ್ಟಿದ್ದ. ಈ ಸಂಬಂಧ ಬಾಲಕಿ ಕುಟುಂಬಸ್ಥರು ಕಳೆದ ತಿಂಗಳು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿದ್ದರು. ಪ್ರಕರಣದಲ್ಲಿ ರಾಜೀ ಪಂಚಾಯ್ತಿಗೆ ಬರುವ ಬದಲು ನೇರವಾಗಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದರಿಂದ ಸಿಟ್ಟಿಗೆದ್ದ ಸವರ್ಣೀಯ ಮುಖಂಡರು ಗ್ರಾಮದ ದಲಿತರಿಗೆ ಅಂಗಡಿಗಳಲ್ಲಿ ದಿನಸಿ ಸೇರಿ ಯಾವುದೇ ವಸ್ತು ಮಾರಾಟ ಮಾಡದಂತೆ ಬಹಿಷ್ಕಾರ ಹಾಕಿದ್ದು, ಈ ಕುರಿತ ಆಡಿಯೋ ಕೂಡ ವೈರಲ್‌ ಆಗಿತ್ತು.

‘ಬಾಲಕಿ ಮೇಲೆ ರೇಪ್‌: ಕೇಸ್‌ ಹಾಕಿದ್ದಕ್ಕೆ ದಲಿತರಿಗೆ ಬಹಿಷ್ಕಾರ!’ ಶೀರ್ಷಿಕೆಯಡಿ ಶುಕ್ರವಾರ (ಸೆ.13) ‘ಕನ್ನಡಪ್ರಭ’ ಈ ಕುರಿತು ಮುಖಪುಟದಲ್ಲಿ ವರದಿ ಪ್ರಕಟಿಸಿತ್ತು. ಈ ವರದಿ ನೋಡಿ ಕಾರ್ಯಪ್ರವೃತ್ತವಾದ ಜಿಲ್ಲಾಡಳಿತ ಘಟನೆ ಕುರಿತು ಮಾಹಿತಿ ಸಂಗ್ರಹಿಸಿತು. ನಂತರ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರ ಸೂಚನೆಯಂತೆ ಎಸ್ಪಿ ಸೇರಿ ವಿವಿಧ ಅಧಿಕಾರಿಗಳು ಹುಣಸಗಿ ತಾಲೂಕಿನ ಬಪ್ಪರಗಾ ಗ್ರಾಮಕ್ಕೆ ದೌಡಾಯಿಸಿ ಸಂತ್ರಸ್ತ ಬಾಲಕಿ, ಆಕೆಯ ಕುಟುಂಬ ಸೇರಿ ಸ್ಥಳೀಯರನ್ನು ಭೇಟಿಯಾಗಿ ಶಾಂತಿ ಸಭೆ ನಡೆಸಿದ್ದಲ್ಲದೆ, ಎಲ್ಲರ ಮನವೊಲಿಸಿ ಸೌಹಾರ್ದತಯುತವಾಗಿ ಬಹಿಷ್ಕಾರ ಸಮಸ್ಯೆಯನ್ನು ಬಗೆಹರಿಸಿದರು.

ಇದಕ್ಕೂ ಮೊದಲು ತಹಸೀಲ್ದಾರ್‌, ಸಮಾಜ ಕಲ್ಯಾಣ ಇಲಾಖೆ ಮತ್ತಿತರ ಅಧಿಕಾರಿಗಳು ಸಂತ್ರಸ್ತ ಬಾಲಕಿ, ಆಕೆಯ ಕುಟುಂಬಸ್ಥರು ಹಾಗೂ ಅಲ್ಲಿನ ಜನರೊಡನೆ ಮಾತುಕತೆ ನಡೆಸಿ ಘಟನೆ ಕುರಿತು ಮಾಹಿತಿ ಪಡೆದರು. ಸಂಜೆ ವೇಳೆಗೆ ಎಸ್ಪಿ ಸಂಗೀತಾ ಅವರು ಗ್ರಾಮಕ್ಕೆ ತೆರಳಿ ಸಂಧಾನಕ್ಕೆ ಪ್ರಯತ್ನಿಸಿದರು, ಬಹಿಷ್ಕಾರದಂಥ ಕಾನೂನುಬಾಹಿರ ಕೃತ್ಯಗಳಿಗೆ ಯಾರಾದರೂ ಮುಂದಾದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ಸಂದೇಶವನ್ನೂ ನೀಡಿದರು.

ಈ ವೇಳೆ ದಲಿತರು ಬಹಿಷ್ಕಾರದಿಂದಾಗುತ್ತಿರುವ ಸಮಸ್ಯೆ ಕುರಿತು ನೋವು ತೋಡಿಕೊಂಡರು. ಜತೆಗೆ ತಮಗೆ ರಕ್ಷಣೆ ನೀಡುವಂತೆ ಮನವಿ ಮಾಡಿದರು. ಬಹಿಷ್ಕಾರ ಹಾಕುವಂತೆ ಅಧಿಕಾರಿಗಳನ್ನು ಮನವಿ ಮಾಡಿದರು.

ಆ ಸಂದರ್ಭದಲ್ಲಿ ಎಸ್ಪಿ ಸಂಗೀತಾ ಹಾಗೂ ಸಹಾಯಕ ಆಯುಕ್ತ ಡಾ.ಹಂಪಣ್ಣ ಸಜ್ಜನ ಅವರು ರಾತ್ರಿವರೆಗೂ ಗ್ರಾಮಸ್ಥರ ಸಭೆ ನಡೆಸಿ ಬಹಿಷ್ಕಾರ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸುವಲ್ಲಿ ಯಶಸ್ವಿಯಾದರು. ದಲಿತರು ಮತ್ತು ಸವರ್ಣೀಯ ಮುಖಂಡರನ್ನು ಪರಸ್ಪರ ಹಸ್ತಲಾಘವ ಮಾಡಿಸಿ ಇನ್ನು ಮುಂದೆ ಬಹಿಷ್ಕಾರದಂಥ ಘಟನೆ ಪುನರಾವರ್ತನೆಯಾಗದಂತೆ ನೋಡಿಕೊಳ್ಳಬೇಕೆಂದು ಬುದ್ಧಿಮಾತು ಹೇಳಿದರು.

ತಹಸೀಲ್ದಾರ್‌ ಬಸಲಿಂಗಪ್ಪ ನಾಯ್ಕೋಡಿ, ಡಿವೈಎಸ್ಪಿ ಜಾವೀದ್‌ ಇನಾಂದಾರ್, ಸಮಾಜ ಕಲ್ಯಾಣ ಅಧಿಕಾರಿ ಮೊಹ್ಮದ್‌ ಅಲಿ, ಹುಣಸಗಿ ಸಿಪಿಐ ಸಚಿನ್‌ ಚೆಲವಾದಿ, ನಾರಾಯಣಪುರ ಪಿಎಸ್ಸೈ ರಾಜಶೇಖರ ರಾಠೋಡ್, ಕೊಡೇಕಲ್‌ ಪಿಎಸ್ಸೈ ಅಯ್ಯಪ್ಪ, ಸಿಡಿಪಿಓ ಅನಿಲ್‌ ಕುಮಾರ್‌ ಕಾಂಬ್ಳೆ ಮತ್ತಿತರ ಅಧಿಕಾರಿಗಳು ಈ ವೇಳೆ ಉಪಸ್ಥಿತರಿದ್ದರು.

 17ಕ್ಕೆ ಗ್ರಾಮಕ್ಕೆ ಛಲವಾದಿನಾರಾಯಣಸ್ವಾಮಿ ಭೇಟಿ

ಯಾದಗಿರಿ: ಬಪ್ಪರಗಾ ಗ್ರಾಮದಲ್ಲಿ ದಲಿತರಿಗೆ ಬಹಿಷ್ಕಾರ ಹಾಕಿರುವ ಪ್ರಕರಣವನ್ನು ತೀವ್ರವಾಗಿ ಖಂಡಿಸಿರುವ ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ಟಿ.ನಾರಾಯಣಸ್ವಾಮಿ ಅವರು ಸೆ.17ರಂದು ಗ್ರಾಮಕ್ಕೆ ಭೇಟಿ ನೀಡುವುದಾಗಿ ತಿಳಿಸಿದ್ದಾರೆ.ರಾಜ್ಯದಲ್ಲಿ ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿರುವುದು ಕಳವಳ ಮೂಡಿಸಿದೆ ಎಂದಿರುವ ಅವರು, ದಲಿತರ ಬಗ್ಗೆ ರಾಜ್ಯ ಸರ್ಕಾರ ನಿರ್ಲಕ್ಷ್ಯ ತೋರಿದೆ. ದಲಿತರ ಮಕ್ಕಳಿಗೆ ಪೆನ್ನು, ಪುಸ್ತಕ ನೀಡಲೂ ಬಹಿಷ್ಕಾರ ಹಾಕಿರುವುದು ಅಮಾನವೀಯ ಎಂದಿರುವ ಅವರು, ಈ ಕುರಿತು ಕ್ರಮಕ್ಕೆ ಆಗ್ರಹಿಸಿದ್ದಾರೆ. ಜತೆಗೆ, ಸೆ.17ರಂದು ಗ್ರಾಮಕ್ಕೆ ಭೇಟಿ ನೀಡಿ, ಸಂತ್ರಸ್ತೆ ಕುಟುಂಬಕ್ಕೆ ಸಾಂತ್ವನ ಹೇಳುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

Share this article