ಅನಾವಶ್ಯಕವಾಗಿ ನಮ್ಮ ಬ್ರಾಜ್ಮಣ ಜಾತಿ ಜೊತೆ ಸೇರಿಸಿರುವ ಉಪಜಾತಿಗಳ ಎಂಟ್ರಿಗಳನ್ನು ತೆಗೆದುಹಾಕಬೇಕು, ಕ್ರಮ ಸಂಖ್ಯೆ 209ರಲ್ಲಿ “ಬ್ರಾಹ್ಮಣ ಕ್ರಿಶ್ಚಿಯನ್” ಹಾಗೂ ಕ್ರಮ ಸಂಖ್ಯೆ 883 ಮತ್ತು 1384ರಲ್ಲಿ “ಬ್ರಾಹ್ಮಣ ಮುಜಾವರ ಮುಸ್ಲಿಂ” ಎಂಬ ಉಲ್ಲೇಖ ಮಾಡಿರುವುದು ಸರಿಯಲ್ಲ. ನಮ್ಮ ಸಮುದಾಯದಲ್ಲಿ ಈ ರೀತಿಯ ಯಾವುದೇ ಉಪಜಾತಿ ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಕೂಡಲೇ ನಮೂದಿಸಿರುವ ಎಂಟ್ರಿಯನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಇಲ್ಲವಾದರೆ ಸಮುದಾಯಕ್ಕೆ ಅನ್ಯಾಯವಾಗುವ ಸಂಭವವಿದೆ. ಮುಂದೆ ನಮ್ಮ ಸಮುದಾಯ ಬಾಂಧವರೆಲ್ಲಾ ಸೇರಿ ಉಗ್ರರೀತಿಯಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕನ್ನಡಪ್ರಭ ವಾರ್ತೆ ಬೇಲೂರು
ಬ್ರಾಹ್ಮಣ ಕ್ರಿಶ್ಚಿಯನ್, ಮುಜಾವರ ಮುಸ್ಲಿಂ ಎಂಬ ತಪ್ಪು ಉಲ್ಲೇಖ ಖಂಡಿಸಿ ಬೇಲೂರು ಬ್ರಾಹ್ಮಣ ಮಹಾಸಭೆ ವತಿಯಿಂದ ಪಟ್ಟಣದ ತಾಲೂಕು ಕಚೇರಿಗೆ ತೆರಳಿ ತಾಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ರಾಜ್ಯದ ಎಲ್ಲಾ ಜಾತಿ–ಉಪಜಾತಿಗಳ ಸಮೀಕ್ಷೆ ಕೈಗೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಜಾತಿ ಪಟ್ಟಿಯಲ್ಲಿನ ಕೆಲವು ಲೋಪದೋಷಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದ ನಂತರ ಬ್ರಾಹ್ಮಣ ಮಹಾಸಭೆಯ ಅಧ್ಯಕ್ಷ ವಿಜಯಕೇಶವ ಮಾತನಾಡಿದರು. ಸಮಾಜದಲ್ಲಿ ಇಲ್ಲದ ಉಪಜಾತಿಗಳನ್ನು ಪಟ್ಟಿಯಲ್ಲಿ ಸೇರಿಸುವುದು ಗಂಭೀರ ತಪ್ಪಾಗಿದೆ. ಇಂತಹ ತಪ್ಪುಗಳು ಮುಂದುವರಿದರೆ ಸಮುದಾಯದ ಗುರುತಿಗೆ ಧಕ್ಕೆಯಾಗಬಹುದು. ಆದ್ದರಿಂದ ಆಯೋಗವು ಶೀಘ್ರ ಕ್ರಮ ಕೈಗೊಂಡು ಅನಾವಶ್ಯಕವಾಗಿ ನಮ್ಮ ಬ್ರಾಜ್ಮಣ ಜಾತಿ ಜೊತೆ ಸೇರಿಸಿರುವ ಉಪಜಾತಿಗಳ ಎಂಟ್ರಿಗಳನ್ನು ತೆಗೆದುಹಾಕಬೇಕು, ಕ್ರಮ ಸಂಖ್ಯೆ 209ರಲ್ಲಿ “ಬ್ರಾಹ್ಮಣ ಕ್ರಿಶ್ಚಿಯನ್” ಹಾಗೂ ಕ್ರಮ ಸಂಖ್ಯೆ 883 ಮತ್ತು 1384ರಲ್ಲಿ “ಬ್ರಾಹ್ಮಣ ಮುಜಾವರ ಮುಸ್ಲಿಂ” ಎಂಬ ಉಲ್ಲೇಖ ಮಾಡಿರುವುದು ಸರಿಯಲ್ಲ. ನಮ್ಮ ಸಮುದಾಯದಲ್ಲಿ ಈ ರೀತಿಯ ಯಾವುದೇ ಉಪಜಾತಿ ಅಸ್ತಿತ್ವದಲ್ಲಿಲ್ಲ. ಆದ್ದರಿಂದ ಕೂಡಲೇ ನಮೂದಿಸಿರುವ ಎಂಟ್ರಿಯನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಇಲ್ಲವಾದರೆ ಸಮುದಾಯಕ್ಕೆ ಅನ್ಯಾಯವಾಗುವ ಸಂಭವವಿದೆ. ಮುಂದೆ ನಮ್ಮ ಸಮುದಾಯ ಬಾಂಧವರೆಲ್ಲಾ ಸೇರಿ ಉಗ್ರರೀತಿಯಲ್ಲಿ ಪ್ರತಿಭಟಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಶೃಂಗೇರಿ ಶಾರದಾ ಮಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಮಾತನಾಡಿ, ಶತಮಾನಗಳಿಂದ ಬ್ರಾಹ್ಮಣ ಸಮುದಾಯವು ವೇದ,ಶಾಸ್ತ್ರಗಳ ಅಧ್ಯಯನ, ಧಾರ್ಮಿಕ ಆಚರಣೆ ಮತ್ತು ಸಮಾಜ ಸೇವೆಯಲ್ಲಿ ತೊಡಗಿಕೊಂಡಿದೆ. ನಮ್ಮ ಪರಂಪರೆಯಲ್ಲಿ ‘ಬ್ರಾಹ್ಮಣ ಕ್ರಿಶ್ಚಿಯನ್’ ಅಥವಾ ‘ಬ್ರಾಹ್ಮಣ ಮುಜಾವರ ಮುಸ್ಲಿಂ’ ಎಂಬಂತಹ ಯಾವುದೇ ಉಪಜಾತಿ ಎಂದಿಗೂ ಇರಲಿಲ್ಲ. ಹೀಗಾಗಿ ಇಂತಹ ಉಲ್ಲೇಖವು ತಿದ್ದುಪಡಿ ಅಗತ್ಯವಾಗಿರುವ ಗಂಭೀರ ವಿಷಯವಾಗಿದೆ. ಶೃಂಗೇರಿ ಶಾರದ ಮಠವು ಸದಾ ಸತ್ಯ, ಸಂಪ್ರದಾಯ ಮತ್ತು ಸಾಮಾಜಿಕ ಸಮರಸ್ಯವನ್ನು ಕಾಪಾಡುವ ಕೆಲಸ ಮಾಡುತ್ತದೆ ಎಂದರು.ಈ ಕುರಿತು ಪ್ರತಿಕ್ರಿಯಿಸಿದ ತಹಸೀಲ್ದಾರ್ ಶ್ರೀಧರ್ ಕಂಕನವಾಡಿ ಅವರು, “ಬ್ರಾಹ್ಮಣ ಮಹಾಸಭೆಯಿಂದ ಬಂದ ಆಕ್ಷೇಪಣಾ ಪತ್ರವನ್ನು ದಾಖಲಿಸಲಾಗಿದೆ. ಸಮುದಾಯದ ಚಿಂತೆಗಳನ್ನು ರಾಜ್ಯ ಆಯೋಗದ ಗಮನಕ್ಕೆ ತಲುಪಿಸುವ ಕೆಲಸವನ್ನು ಮಾಡುತ್ತೇವೆ. ಅಂತಿಮ ಪಟ್ಟಿ ಹೊರಬರುವ ಮುನ್ನ ತಿದ್ದುಪಡಿ ಮಾಡಲು ಕ್ರಮ ವಹಿಸಲಾಗುವುದು” ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಬ್ರಾಹ್ಮಣ ಮಹಾಸಭಾದ ತೊ ಚ ಅನಂತ ಸುಬ್ಬರಾಯ, ವೇದಬ್ರಹ್ಮ ಕೆ ಆರ್ ಮಂಜುನಾಥ್, ರಮೇಶ್, ಮೂರ್ತಿ, ಗಣೇಶ್, ನಾಗರಾಜ್, ಕುಮಾರ್, ಸುರೇಶ್, ಶ್ರೀ ವತ್ಸ ಎಸ್ ವಟಿ , ಚಂದ್ರಶೇಖರ ಜಗದೀಶ್, ಸತೀಶ್ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.