ಸ್ತನ್ಯಪಾನ ಪ್ರಕ್ರಿಯೆ ಅಮೃತಕ್ಕೆ ಸಮಾನ: ಡಾ.ಪ್ರಶಾಂತ್

KannadaprabhaNewsNetwork | Published : Aug 7, 2024 1:01 AM

ಸಾರಾಂಶ

ಶಿವಮೊಗ್ಗದ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ತಾಯಂದಿರಿಗೆ ಮಾಹಿತಿ ಹಾಗೂ ಕ್ವಿಜ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಅಮೃತಕ್ಕೆ ಸಮಾನವಾದ ಎದೆಹಾಲು ಉಣಿಸುವ ಪ್ರಕ್ರಿಯೆ ಯಾವುದೇ ಅಡೆ ತಡೆಗಳಿದಲ್ಲದೇ ನಿರಂತರವಾಗಿ ನಡೆಯಬೇಕು ಎಂದು ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಪ್ರಶಾಂತ್ ವೀರಯ್ಯ ಹೇಳಿದರು.

ಇಲ್ಲಿನ ಸರ್ಜಿ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಮಂಗಳವಾರ ವಿಶ್ವ ಸ್ತನ್ಯಪಾನ ಸಪ್ತಾಹ ಅಂಗವಾಗಿ ಹಮ್ಮಿಕೊಂಡಿದ್ದ ತಾಯಂದಿರಿಗೆ ಮಾಹಿತಿ ಹಾಗೂ ಕ್ವಿಜ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಈ ಬಾರಿಯ ಥೀಮ್ ಆಗಿರುವ ಎದೆಹಾಲು ಉಣಿಸುವ ಅಡೆ ತಡೆಗಳ ನಿವಾರಣೆ ಕುರಿತು ಮಾಹಿತಿ ನೀಡಿದರು. ತಾಯಿ ಮಗುವಿಗೆ ಎದೆ ಹಾಲು ಕುಡಿಸುವುದರಿಂದ ಮಗು ಮತ್ತು ತಾಯಿಯಲ್ಲಿ ಬಲವಾದ ಭಾವನಾತ್ಮಕ ಸಂಬಂಧ ಬೆಳೆಯುತ್ತದೆ ಎಂದು ಹೇಳಿದರು.

ತಾಯಂದಿರು ಮಗುವಿಗೆ ಎದೆ ಹಾಲು ಉಣಿಸಲು ಕುಟುಂಬದವರೂ ಕೂಡ ತಾಯಿಗೆ ಸಂಪೂರ್ಣ ಸಹಕಾರವನ್ನು ನೀಡಬೇಕು, ಎದೆ ಹಾಲನ್ನು ಉಣಿಸುವ ಬಗ್ಗೆ ತಿಳಿ ಹೇಳಬೇಕು ಹಾಗೂ ಅನಿವಾರ್ಯ ಸಂದರ್ಭ ಸಾರ್ವಜನಿಕ ಸ್ಥಳಗಳಲ್ಲಿ ಎದೆ ಹಾಲು ಉಣಿಸಲು ಮುಜುಗರಪಡಬಾರದು, ಈ ನಿಟ್ಟಿನಲ್ಲಿ ಪ್ರೋತ್ಸಾಹಿಸಬೇಕು, ಸರಕಾರವೂ ಕೂಡ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಎಂದು ತಿಳಿಸಿದರು.

ಡಾ.ಅನಿಲ್ ಕಲ್ಲೇಶ್ ಮಾತನಾಡಿ, ತಾಯಿ ಎದೆ ಹಾಲು ಕುಡಿಸುವುದರಿಂದ ಮಗುವಿನಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ, ಮಗು ಆರೋಗ್ಯ ಪೂರ್ಣವಾಗಿರುತ್ತದೆ, ಮಗುವಿಗೆ ಅಗತ್ಯ ಇರುವ ಎಲ್ಲಾ ರೀತಿಯ ಪೋಷಕಾಂಶವು ದೊರೆಯುತ್ತದೆ, ಎದೆಹಾಲಿನಲ್ಲಿರುವ ಪ್ರೊಟೀನ್, ವಿಟಮಿನ್, ಕ್ಯಾಲ್ಸಿಯಂ, ಅಂಶಗಳು ಮಗುವಿನ ದೈಹಿಕ ಮಾನಸಿಕ ಬೆಳವಣಿಗೆಗೆ ಪೂರಕವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಡಾ. ಬಸವಕುಮಾರ್, ಡಾ.ವಿಜಯ್, ಡಾ.ಸಂತೋಷ್, ಡಾ.ಭಾರತಿ, ಡಾ.ಪ್ರತೀಕ್ಷಾ, ಡಾ.ನಿಯಾಜ್, ಡಾ.ರಗ್ದಾ ಹಾಗೂ ತಾಯಂದಿರು, ನರ್ಸಿಂಗ್ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು. ಕ್ವಿಜ್ ನ್ನು ಡಾ.ವಿದ್ಯಾ ಬಸವಕುಮಾರ್ ಹಾಗೂ ಡಾ.ಅನಿಲ್ ಕಲ್ಲೇಶ್ ಅವರು ಅಚ್ಚು ಕಟ್ಟಾಗಿ ನೆರವೇರಿಸಿಕೊಟ್ಟರು. ರಸಪ್ರಶ್ನೆ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಇದೇ ವೇಳೆ ತಾಯಂದಿರು ಸ್ವಂತ ಅನುಭವ ಹಂಚಿಕೊಂಡು ಕೇಕ್ ಕತ್ತರಿಸಿ, ಸಂಭ್ರಮಿಸಿದರು, ಮೈತ್ರಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು ಕಿರು ನಾಟಕ ಪ್ರದರ್ಶಿಸಿದರು.

Share this article