ಮದುವೆಗೆ ಮುನ್ನ ಪರೀಕ್ಷೆ ಬರೆದ ವಧು

KannadaprabhaNewsNetwork |  
Published : May 30, 2025, 12:14 AM IST
ನಂತರ ಶಾದಿ ಮಹಲ್‌ಗೆ ತೆರಳಿ, ಮಾಂಗಲ್ಯ ಧಾರಣೆ ಮಾಡಿಸಿಕೊಂಡು ವೈವಾಹಿಕ ಜೀವನಕ್ಕೆ ಅಡಿ ಇಟ್ಟು ಹಿರಿಯರಿಂದ ಆಶೀರ್ವಾದ ಪಡೆದರು | Kannada Prabha

ಸಾರಾಂಶ

ಸ್ಥಳೀಯ ನಗರಸಭೆ ಮಾಜಿ ಸದಸ್ಯ ಸಿ.ಯೂನಸ್ ಸಾಬ್ ಹಾಗೂ ಹಾಲಿ ಸದಸ್ಯೆ ರೇಷ್ಮಾ ಬಾನು ದಂಪತಿ ಪುತ್ರಿ ಆಲ್ಫಿಯಾ ಬಾನು ಮತ್ತು ರುಹಿತ್‌ಪಾಷ ನಡುವೆ ಇಂದು ಮದುವೆ ನಿಗದಿಯಾಗಿತ್ತು. ಆದರೆ ಇದೇ ದಿನ ವಧುವಿಗೆ ವಾರ್ಷಿಕ ಪರೀಕ್ಷೆಯೂ ನಿಗದಿಯಾಗಿತ್ತು. ಆಲ್ಫಿಯಾ ಬಾನು ನಗರದ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಕಾರ್ಮಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ಓದುತ್ತಿದ್ದು, ೬ನೇ ಸೆಮಿಸ್ಟರ್ ಪರೀಕ್ಷೆ ಗುರುವಾರವೇ ಇತ್ತು. ಮದುವೆ ಕಾರಣಕ್ಕೆ ಪರೀಕ್ಷೆಗೆ ತಪ್ಪಿಸಿಕೊಳ್ಳದ ವಧು, ನಿಖಾಗೂ ಮುನ್ನವೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಳು. ನಂತರ ಶಾದಿ ಮಹಲ್‌ಗೆ ತೆರಳಿ, ಮಾಂಗಲ್ಯ ಧಾರಣೆ ಮಾಡಿಸಿಕೊಂಡು ವೈವಾಹಿಕ ಜೀವನಕ್ಕೆ ಅಡಿ ಇಟ್ಟಳು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ಮದುವೆ ಮನೆ ಎಂದರೆ ನೆಂಟರಿಷ್ಟರು ಹೊರತು ಪಡಿಸಿ ವಧು-ವರನ ಕಡೆಯವರು ಸಖತ್ ಬ್ಯುಸಿಯಾಗಿರುತ್ತಾರೆ. ಅದರಲ್ಲೂ ಹುಡುಗ-ಹುಡುಗಿಗೆ ಅಲಂಕಾರ, ಮೇಕಪ್ ಹೀಗೆ ಬಿಡುವೇ ಇರುವುದಿಲ್ಲ. ವಿವಾಹದ ಗುಂಗು ಹೊರತು ಪಡಿಸಿ ಉಳಿದೆಲ್ಲವನ್ನೂ ಮರೆತು ಬಿಡುತ್ತಾರೆ. ಆದರೆ ನಗರದ ಯುವತಿಯೊಬ್ಬಳು ಇಂದು ಮದುವೆ ಇದ್ದರೂ, ಅದಕ್ಕೂ ಮುನ್ನವೇ ಬಿಬಿಎ ಎಕ್ಸಾಂ ಬರೆಯುವ ಮೂಲಕ ಗಮನ ಸೆಳೆದಳು. ಮನೆಯವರೂ ಸಹ ಮಗಳ ಆಸೆಯನ್ನು ಈಡೇರಿಸಿ ನಂತರ ಮದುವೆ ಕಾರ್ಯ ಮುಂದುವರಿಸಿದರು.ಸ್ಥಳೀಯ ನಗರಸಭೆ ಮಾಜಿ ಸದಸ್ಯ ಸಿ.ಯೂನಸ್ ಸಾಬ್ ಹಾಗೂ ಹಾಲಿ ಸದಸ್ಯೆ ರೇಷ್ಮಾ ಬಾನು ದಂಪತಿ ಪುತ್ರಿ ಆಲ್ಫಿಯಾ ಬಾನು ಮತ್ತು ರುಹಿತ್‌ಪಾಷ ನಡುವೆ ಇಂದು ಮದುವೆ ನಿಗದಿಯಾಗಿತ್ತು. ಆದರೆ ಇದೇ ದಿನ ವಧುವಿಗೆ ವಾರ್ಷಿಕ ಪರೀಕ್ಷೆಯೂ ನಿಗದಿಯಾಗಿತ್ತು. ಆಲ್ಫಿಯಾ ಬಾನು ನಗರದ ರಾಯಲ್ ಇನ್ಸ್ಟಿಟ್ಯೂಟ್ ಆಫ್ ಕಾರ್ಮಸ್ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಬಿಎ ಓದುತ್ತಿದ್ದು, ೬ನೇ ಸೆಮಿಸ್ಟರ್ ಪರೀಕ್ಷೆ ಗುರುವಾರವೇ ಇತ್ತು.ಮದುವೆ ಕಾರಣಕ್ಕೆ ಪರೀಕ್ಷೆಗೆ ತಪ್ಪಿಸಿಕೊಳ್ಳದ ವಧು, ನಿಖಾಗೂ ಮುನ್ನವೇ ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿ ಪರೀಕ್ಷೆ ಬರೆದಳು. ನಂತರ ಶಾದಿ ಮಹಲ್‌ಗೆ ತೆರಳಿ, ಮಾಂಗಲ್ಯ ಧಾರಣೆ ಮಾಡಿಸಿಕೊಂಡು ವೈವಾಹಿಕ ಜೀವನಕ್ಕೆ ಅಡಿ ಇಟ್ಟಳು.ಈ ಕುರಿತು ಮಾತನಾಡಿದ ಯೂನಸ್‌ ಸಾಬ್, ಮದುವೆ ಹಿನ್ನೆಲೆಯಲ್ಲಿ ಮಗಳ ಶಿಕ್ಷಣಕ್ಕೆ ಯಾವುದೇ ಅಡೆತಡೆ ಆಗಬಾರದು ಎಂದು ಪರೀಕ್ಷೆ ಬರೆಯಲು ಅವಕಾಶ ಮಾಡಿಕೊಡಲಾಗಿದೆ ಎಂದರು. ನಮಗೆ ಮಕ್ಕಳನ್ನು ಮದುವೆ ಮಾಡಿದರೆ ದೊಡ್ಡ ಜವಾಬ್ದಾರಿ ತಪ್ಪಲಿದೆ ಅಂದುಕೊಳ್ಳುತ್ತೇವೆ, ಆದರೆ ಅವರಿಗೆ ಚೆನ್ನಾಗಿ ಓದಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬ ಕನಸಿರುತ್ತದೆ. ಹಾಗಾಗಿ ಮದುವೆ-ಪರೀಕ್ಷೆ ಒಂದೇ ದಿನ ನಿಗದಿಯಾದರೂ, ಎರಡಕ್ಕೂ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.ಆಲ್ಫಿಯಾ ಬಾನು ಓದುತ್ತಿರುವ ಕಾಲೇಜಿನ ಪ್ರಾಂಶುಪಾಲರು ಮಾತನಾಡಿ, ಯುವತಿ ತುಂಬಾ ಚೆನ್ನಾಗಿ ಓದುತ್ತಾಳೆ. ಕಳೆದ ಐದು ಸೆಮಿಸ್ಟರ್‌ನಲ್ಲಿ ಶೇ.೮೫ಕ್ಕಿಂತಲೂ ಹೆಚ್ಚು ಅಂಕ ಪಡೆದಿದ್ದಾಳೆ. ಹೆಣ್ಣುಮಕ್ಕಳ ಜೀವನದಲ್ಲಿ ಮದುವೆ ಮುಖ್ಯ, ಹಾಗೆಯೇ ಶಿಕ್ಷಣವೂ ಅಷ್ಟೇ ಮುಖ್ಯವಾಗಿದೆ. ಈ ವಿಷಯದಲ್ಲಿ ಆಲ್ಫಿಯಾ ಬಾನು ತಂದೆ-ತಾಯಿಗೆ ಧನ್ಯವಾದ ಹೇಳಬೇಕು. ಎಲ್ಲ ಪೋಷಕರು ಹೆಣ್ಣು ಮಕ್ಕಳಿಗೂ ಇದೇ ರೀತಿಯ ಉತ್ತೇಜನ ನೀಡಿದರೆ ಅವರೂ ಶಿಕ್ಷಿತರಾಗಿ, ಎಲ್ಲ ರೀತಿಯಲ್ಲೂ ಸಬಲೀಕರಣ ಹೊಂದಲು ಅನುಕೂಲ ಆಗಲಿದೆ ಎಂದರು. ಯುವತಿಯ ಮುಂದಿನ ಜೀವನ ಸುಖಮಯವಾಗಿರಲಿ ಎಂದು ಹರಸಿದರು.

ಈ ಕುರಿತು ತನ್ನ ಅನಿಸಿಕೆ ಹಂಚಿಕೊಂಡ ಆಲ್ಫಿಯಾಬಾನು ನನ್ನ ಮದುವೆ ನಿಗದಿ ಆದ ಬಳಿಕ, ಪರೀಕ್ಷಾ ದಿನಾಂಕ ಪ್ರಕಟ ಆಯಿತು. ನಾನು ಪರೀಕ್ಷೆ ಬರೆಯುತ್ತೇನೆ ಎಂದು ನನ್ನ ಪೋಷಕರು ಹಾಗೂ ಭಾವಿ ಪತಿಯವರ ಮನೆಯವರಿಗೆ ತಿಳಿಸಿದೆ. ಪರೀಕ್ಷೆ ಬರೆಯಲು ಎಲ್ಲರೂ ಒಪ್ಪಿ, ಸಮ್ಮತಿ ಸೂಚಿಸಿದರು. ಎಲ್ಲರ ಸಹಕಾರದಿಂದ ಪರೀಕ್ಷೆ ಬರೆದಿದ್ದು ಖುಷಿಯಾಗಿದೆ. ಪರೀಕ್ಷೆಯಲ್ಲೂ ಪಾಸ್ ಆಗುತ್ತೇನೆ, ಜೀವನದಲ್ಲೂ ಸಕ್ಸಸ್ ಕಾಣುವೆ ಎಂದು ವಿಶ್ವಾಸದಿಂದ ನುಡಿದಳು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

400 ಕೋಟಿ ರು. ದರೋಡೆ ಪ್ರಮುಖ ಆರೋಪಿ ಬಂಧನ
ಕಾಂಗ್ರೆಸ್‌ನವರಿಗೆ ಬಜೆಟ್ ಅರ್ಥವಾಗಲ್ಲ: ಜೋಶಿ ಚಾಟಿ