ಕನ್ನಡಪ್ರಭ ವಾರ್ತೆ ಯಾದಗಿರಿ
ಇಂತಹ "ರೆಡ್ಡಿ ಸಾಬ್ " ಅವರ ಮೇಲಿನ ಪ್ರೀತಿ, ಅಭಿಮಾನದ ದ್ಯೋತಕವಾಗಿ, ಅಭಿಮಾನಿಗಳೇ ಎದುರು ನಿಂತು ಮಾಡಿಸಿರುವ ಕಂಚಿನ ಪುತ್ಥಳಿ ಅನಾವರಣ ಸಮಾರಂಭ ಶುಕ್ರವಾರ ಫೆ.23ರಂದು ಬೆಳಗ್ಗೆ 10 ಗಂಟೆಗೆ ಅನಾವರಣಗೊಳ್ಳಲಿದೆ.
ಯಾದಗಿರಿಯ ಮುದ್ನಾಳ್ ಕ್ರಾಸ್ನ ಲಿಂ.ವಿಶ್ವನಾಥರೆಡ್ಡಿ ಮುದ್ನಾಳ್ ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿರುವ ಲಿಂ.ವಿಶ್ವನಾಥರಡ್ಡಿ ಮುದ್ನಾಳ್ ಅವರ ಕಂಚಿನ ಪ್ರತಿಮೆಯನ್ನು ಶ್ರೀಮದ್ ರಂಭಾಪುರಿ ಜಗದ್ಗುರುಗಳಾದ ಬಾಳೆಹೊನ್ನೂರಿನ ಡಾ. ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಅನಾವರಣಗೊಳಿಸಲಿದ್ದಾರೆ.ನಾಲವಾರದ ಡಾ. ಸಿದ್ಧತೋಟೇಂದ್ರ ಶಿವಾಚಾರ್ಯರು, ಅಬ್ಬೆತುಮಕೂರಿನ ಡಾ. ಗಂಗಾಧರ ಶಿವಾಚಾರ್ಯರು ಸೇರಿ ವಿವಿಧ ಮಠಾಧೀಶರುಗಳು, ಹಿರಿಯ ರಾಜಕೀಯ ಮುತ್ಸದ್ದಿ, ಮಾಜಿ ಸಚಿವರು ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಗೌರವಾಧ್ಯಕ್ಷ ಡಾ. ಭೀಮಣ್ಣ ಖಂಡ್ರೆ, ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯಾಧ್ಯಕ್ಷ ಎನ್. ತಿಪ್ಪಣ್ಣ, ಬಸವ ಸಮಿತಿ ಅಧ್ಯಕ್ಷರು ಹಾಗೂ ಭಾರತದ ಮಾಜಿ ಉಪರಾಷ್ಟ್ರಪತಿ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳೂ ಆಗಿದ್ದ ಬಸಪ್ಪ ದಾನಪ್ಪ ಜತ್ತಿ (ಬಿ. ಡಿ. ಜತ್ತಿ) ಅವರ ಪುತ್ರ ಅರವಿಂದ ಜತ್ತಿ ಸೇರಿ ವಿವಿಧ ಗಣ್ಯಮಾನ್ಯರು ಪುತ್ಥಳಿ ಅನಾವರಣ ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
ನೇರ ನಿಷ್ಠುರವಾದಿ ಮುದ್ನಾಳ್ "ರೆಡ್ಡಿ ಸಾಬ್ "
ಬ್ರಿಟಿಷರ ದಾಸ್ಯದ ಜೊತೆಗೆ, ಈ ಭಾಗ ಹೈದರಾಬಾದ್ ನಿಜಾಮ್ ಪ್ರಾಂತ್ಯದಲ್ಲಿ ಬರುತ್ತಿದ್ದರಿಂದ ಉರ್ದು ಭಾಷೆಯಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದ ಮುದ್ನಾಳರು, ಮಾತೃಭಾಷೆ ಕನ್ನಡ, ಉರ್ದು ಹಾಗೂ ಆಂಗ್ಲ ಭಾಷೆಯಲ್ಲಿ ಪ್ರಭುತ್ವ ಹೊಂದಿದ್ದರಲ್ಲದೆ, ಹೈದರಾಬಾದ್ನ ಉಸ್ಮಾನಿಯಾ ವಿಶ್ವ ವಿದ್ಯಾಲಯದಿಂದ ಬಿಎಎಲ್ಎಲ್ಬಿ ಪದವಿ ಪೂರೈಸಿದ್ದರು. ಹೈದರಾಬಾದ್ ನಿಜಾಂ ದುರಾಡಳಿತದ ವಿರುದ್ಧ, ಹೈದರಾಬಾದ್ ಕರ್ನಾಟಕ ವಿಮೋಚನೆ ಹಾಗೂ ನಂತರದಲ್ಲಿ ಕರ್ನಾಟಕ ಏಕೀಕರಣದ ಹೋರಾಟ ಚಳವಳಿಯ ಮುಂಚೂಣಿ ನಾಯಕರಾಗಿದ್ದರು.
ಮಹಾತ್ಮಾಗಾಂಧೀಜಿಯವರ ಅಹಿಂಸೆಯ ದಾರಿ ಹಾಗೂ ನೇತಾಜಿ ಸುಭಾಶ್ಚಂದ್ರ ಭೋಸ್ರ ಹೋರಾಟದ ಕಿಚ್ಚನ್ನು ಅಳವಡಿಸಿಕೊಂಡಿದ್ದರು. ಯಾದಗಿರಿಯಲ್ಲಿ ನೇತಾಜಿ ಪ್ರತಿಮೆ ಸ್ಥಾಪನೆಯ ರೂವಾರಿಗಳು. ಅಸ್ಪೃಷ್ಯತೆ ಹಾಗೂ ವರದಕ್ಷಿಣೆ ಪಿಡಗಿನ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಐದು ವರ್ಷಗಳೊಳಗೆ ಕನಿಷ್ಠ ಯಾದಗಿರಿ ತಾಲೂಕಿನಲ್ಲಿ ಅಸ್ಪೃಷ್ಯತಾ ತೊಲಗಿಸುವುದಾಗಿ, ಅಲ್ಲಿವರೆಗೂ ಕಂತಿಭಿಕ್ಷಯೆ ಊಟವನ್ನು ಮಾಡುವುದಾಗಿ ಪಣ ತೊಟ್ಟಿದ್ದ ಮುದ್ನಾಳರು, ಸಾಧ್ಯವಾಗದಿದ್ದರೆ ಯಾದಗಿರಿಯಲ್ಲಿ ನಿರಂತರ ಊಟ ತ್ಯಜಿಸಿ, ಕೇವಲ ಹಣ್ಣು ಹಂಪಲುಗಳ ಮೇಲೆ ಜೀವಿಸುವುದಾಗಿ ಪಟ್ಟು ಹಿಡಿದವರು. ಇದು ಪರಿಶಿಷ್ಟ ಜಾತಿ ತರುಣರ ಮನರೆದ್ದು, ಇವರ ದಿನಾಚರಣೆಯನ್ನು ಅಸ್ಪೃಷ್ಯತಾ ದಿನವನ್ನಾಗಿ ಆಚರಿಸಿದರು.
- ಏಕೀಕರಣ ಪ್ರಶಸ್ತಿಯನ್ನೇ ನಿರಾಕರಿಸಿದ್ದರು..!
ಹಿನ್ನೀರಿನಲ್ಲಿ ಕೂಡಲ ಸಂಗಮ ಮುಳುಗವ ಆತಂಕ ಎದುರಾದಾಗ, ದಿ. ಹೆಗಡೆಯವರ ಸರ್ಕಾರವಧಿಯಲ್ಲಿ ಮುದ್ನಾಳ್ ಸಮಿತಿ ನೀಡಿದ ವರದಿ ಐತಿಹಾಸಿಕ ದಾಖಲೆಯಾಯಿತು. 1979ರಲ್ಲಿ ಬಸವಕಲ್ಯಾಣದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಸಮ್ಮೇಳನ ಸಿದ್ಧತೆ ಹಿಂದಿನ ದಿನವೇ ಬಸವೇಶ್ವರ ಪ್ರತಿಮೆ ನಾಪತ್ತೆಯಾದಾಗ, ಸರ್ಕಾರದ ವಿರುದ್ಧ ಸಿಡಿದೆದ್ದ ಮುದ್ನಾಳರು, ಸರ್ಕಾರವೇ ಕಂಚಿನ ಪುತ್ಥಳಿ ಮಾಡಿಸಿ ಕೊಡಲಿ ಎಂದು ಪಟ್ಟು ಹಿಡಿದು, ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು 11 ದಿನಗಳ ಕಾಲ ಸತ್ಯಾಗ್ರಹ ನಡೆಸಿದಾಗ, ಮಣದ ಸರ್ಕಾರ ಪ್ರತಿಮೆ ಮಾಡಿಸಿತ್ತು. ಅಭಾವೀ ಮಹಾಸಭಾದ ಹಿರಿಯ ಉಪಾಧ್ಯಕ್ಷರಾಗಿದ್ದರು, ವೀರಶೈವ ವಿದ್ಯಾವರ್ಧಕ ಸಂಘದ ಸ್ಥಾಪಕರು.
ಸಾಮಾಜಿಕ, ರಾಜಕೀಯ, ಧಾರ್ಮಿಕ, ಸಾಹಿತ್ಯ, ಪತ್ರಕರ್ತ, ರಾಜಕೀಯ ಹೀಗೆ ಹಲವಾರು ಕ್ಷೇತ್ರಗಳಲ್ಲಿ ಲಿಂ. ವಿಶ್ವನಾಥರೆಡ್ಡಿ ಮುದ್ನಾಳ್ರ ಕೊಡುಗೆ ಅಪಾರ. ಯಾದಗಿರಿ ಜಿಲ್ಲೆ ರಚನೆಗೆ ಅವರ ಹೋರಾಟ ಸ್ಮರಣೀಯ.
2008 ಡಿ.1ರಂದು ವಿಶ್ವನಾಥರೆಡ್ಡಿ ಮುದ್ನಾಳರು ಇಹಲೋಕ ತ್ಯಜಿಸಿದರು. ಅವರ ಹಿರಿಯ ಪುತ್ರಿ ಇಂದಿರಾ ಸ್ತ್ರೀರೋಗ ತಜ್ಞೆ, ಪುತ್ರ ವೆಂಕಟರೆಡ್ಡಿ ಮುದ್ನಾಳ್ ಈ ಹಿಂದಿನ ಬಿಜೆಪಿ ಸರ್ಕಾರವಧಿಯಲ್ಲಿ ಶಾಸಕರಾಗಿದ್ದವರು. ಮತ್ತೋರ್ವ ಪುತ್ರ ಹಣುಮಂತರೆಡ್ಡಿ ಉದ್ಯಮಿಯಾದರೆ, ವೆಂಕಟರೆಡ್ಡಿ ಅವರ ಪುತ್ರ ಮಹೇಶರೆಡ್ಡಿ ಬಿಜೆಪಿ ಯುವ ಮುಖಂಡರು. ರಾಜಕೀಯ ದಾರಿಯಲ್ಲಿ ಮನೆತನ ಮುಂದುವರೆದಿದೆ.