ಎಂಇಎಸ್ ನಿಷೇಧಿಸಲು ಆಗ್ರಹಿಸಿ ಪೊರಕೆ ಚಳವಳಿ

KannadaprabhaNewsNetwork | Published : Mar 14, 2025 1:31 AM

ಸಾರಾಂಶ

ರಾಮನಗರ: ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪೊರಕೆ ಚಳವಳಿ ನಡೆಸಿದರು.

ರಾಮನಗರ: ಎಂಇಎಸ್ ಸಂಘಟನೆ ನಿಷೇಧಿಸಬೇಕು ಎಂದು ಆಗ್ರಹಿಸಿ ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಗುರುವಾರ ಪೊರಕೆ ಚಳವಳಿ ನಡೆಸಿದರು.

ನಗರದ ಐಜೂರು ವೃತ್ತದಲ್ಲಿ ಹಳೆಯ ಬೆಂಗಳೂರು - ಮೈಸೂರು ಹೆದ್ದಾರಿಯಲ್ಲಿ ಸೇರಿದ ಕಾರ್ಯಕರ್ತರು ಎಂಇಎಸ್ ಸಂಘಟನೆ ವಿರುದ್ಧ ಧಿಕ್ಕಾರದ ಬ್ಯಾನರ್ ಜೊತೆಗೆ ಪೊರಕೆ ಹಿಡಿದು ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಶಿವಸೇನೆ ಮತ್ತು ಎಂಇಎಸ್ ಪುಂಡರನ್ನು ಗಡಿಪಾರು ಮಾಡಬೇಕು. ಬೆಳಗಾವಿ ಜಿಲ್ಲೆಯಲ್ಲಿ ಅಧಿಕಾರದಲ್ಲಿರುವ ಎಲ್ಲಾ ರಾಜಕಾರಣಿಗಳು ರಾಜೀನಾಮೆ ನೀಡಬೇಕು. ಸಾಂಬಾಜಿ ಪ್ರತಿಮೆ ತೆಗೆಯಬೇಕು. ಕನ್ನಡ ಚಾಲಕನ ಮೇಲೆ ಹಲ್ಲೆ ಮಾಡಿದವರಿಗೆ ಕಠಿಣ ಶಿಕ್ಷೆಯಾಗಬೇಕು. ಮಹದಾಯಿ - ಕಳಸಾ ಬಂಡೂರಿ ಹಾಗೂ ಮೇಕೆದಾಟು ಯೋಜನೆ ಕಾರ್ಯಗತವಾಗಲೇಬೇಕು ಎಂದು ಒತ್ತಾಯಿಸಿದರು.

ವಾಟಾಳ್ ನಾಗರಾಜ್ ಮಾತನಾಡಿ, ಮಾ.22ರಂದು ಅಖಂಡ ಕರ್ನಾಟಕ ಬಂದ್ ಗೆ ಕನ್ನಡ ಒಕ್ಕೂಟದ ಮುಖಂಡರಾದ ಸಾ.ರಾ.ಗೋವಿಂದ್, ಪ್ರವೀಣ್ ಕುಮಾರ್ ಶೆಟ್ಟಿ, ಶಿವರಾಮೇಗೌಡ, ದಿನೇಶ್ ಗೌಡ, ಮಂಜುನಾಥ್ ದೇವ್ ಸೇರಿದಂತೆ ಸಾವಿರಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಬೆಳಗಾವಿಯಿಂದ ಚಾಮರಾಜನಗರ, ಮಂಗಳೂರಿನಿಂದ ಕೋಲಾರದವರೆಗೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ ಎಂದು ಹೇಳಿದರು.

ಆಟೋ ಚಾಲಕರ ಸಂಘ, ಏರ್‌ಪೋರ್ಟ್ ಕಾರು ಚಾಲಕರು, ಖಾಸಗಿ ಬಸ್ ಮಾಲೀಕರು, ಸಾರಿಗೆ ಬಸ್ ಸಿಬ್ಬಂದಿ ಸೇರಿದಂತೆ ಅನೇಕರನ್ನು ಭೇಟಿಯಾಗಿ ಬಂದ್ ಕುರಿತು ಚರ್ಚೆ ಮಾಡಿದ್ದು, ಅವರೆಲ್ಲರಿಂದಲೂ ಬೆಂಬಲ ವ್ಯಕ್ತವಾಗಿದೆ. ಇದು ಕನ್ನಡದ ಗೌರವದ ಪ್ರಶ್ನೆ. ಕನ್ನಡಿಗರ ಸ್ವಾಭಿಮಾನದ ಪ್ರಶ್ನೆ. ಆದ್ದರಿಂದ ಆ ದಿನ ಚಾಲಕರು ವಾಹನಗಳನ್ನು ಹತ್ತಬಾರದು ಎಂದು ಮನವಿ ಮಾಡಿದರು.

ಬೆಳಗಾವಿಯಲ್ಲಿ ಮರಾಠಿಗರ ದಾಂಧಲೆ ಹೆಚ್ಚಾಗಿದ್ದು, ಅಲ್ಲಿ ಕನ್ನಡ ಉಳಿಯದೆ ಅಪಾಯದಲ್ಲಿದೆ. ಕರ್ನಾಟಕ ಏಕೀಕರಣ ಆದ ಮೇಲೆ ಬಂದಂತಹ ಸರ್ಕಾರಗಳು ಬೆಳಗಾವಿಯನ್ನು ಕನ್ನಡ ಮಾಡಲು ಆಗುತ್ತಿಲ್ಲ. ಇದಕ್ಕೆ ಕಾರಣ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ರಾಜಕಾರಣಿಗಳಿಗೆ ಮರಾಠಿಗರ ವೋಟು ಬೇಕಾಗಿದೆ. ರಾಜಕೀಯ ಪಕ್ಷಗಳು ಮರಾಠಿಗರ ಏಜೆಂಟ್‌ಗಳಾಗಿದ್ದರೆ, ಕನ್ನಡಪರ ಸಂಘಟನೆಗಳು ಮಾತ್ರ ಬೆಳಗಾವಿಯಲ್ಲಿ ಕನ್ನಡ ಉಳಿಸಲು ಹೋರಾಟ ಮಾಡುತ್ತಿವೆ ಎಂದು ಹೇಳಿದರು.

ಬಿಜೆಪಿಯವರು ಬೆಳಗಾವಿ ಮಹಾನಗರ ಪಾಲಿಕೆ ಗೆದ್ದಿದ್ದಾರೆ. ಆದರೆ, ಅವರೆಲ್ಲರು ಮರಾಠಿಗರು. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಕ್ಷೇತ್ರದಲ್ಲಿ ಸಾಂಬಾಜಿ ಪ್ರತಿಮೆ ಬಂದಿದೆ. ಈ ಕೂಡಲೇ ಮಹಾರಾಷ್ಟ್ರದಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಪ್ರತಿಮೆ ಅನಾವರಣ ಮಾಡಬೇಕು ಎಂದು ಒತ್ತಾಯಿಸಿದರು.

ನಾಡಿನಲ್ಲಿ ಪರಭಾಷೆಯರ ದಬ್ಬಾಳಿಕೆ ನಾಡಿನಲ್ಲಿ ಹೆಚ್ಚಾಗಿದೆ. ಪರಭಾಷಾ ಚಲನಚಿತ್ರಗಳು ಸ್ಥಗಿತಗೊಳಿಸಬೇಕು. ಮೇಕೆದಾಟು ಯೋಜನೆ ವಿಚಾರವಾಗಿ ಭದ್ರವಾದ ನಿಲವು ತಾಳಬೇಕು. ಮೆಟ್ರೋ ದರ ಇಳಿಸಲೇಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಕರುನಾಡ ಸೇನೆ ರಾಜ್ಯ ಉಪಾಧ್ಯಕ್ಷ ಎಂ.ಜಗದೀಶ್ , ಜಿಲ್ಲಾಧ್ಯಕ್ಷ ಸಿ.ಎಸ್ .ಜಯಕುಮಾರ್ , ತಾಲೂಕು ಅಧ್ಯಕ್ಷ ಗಂಗಾಧರ್ , ಯುವಕ ಘಟಕ ಅಧ್ಯಕ್ಷ ಆರ್ .ಜೆ.ಅರ್ಜುನ್ , ದಲಿತ ಘಠಕ ಜಿಲ್ಲಾಧ್ಯಕ್ಷ ಕೆ.ಜಯರಾಮು, ತಾಲೂಕು ಮಹಿಳಾಧ್ಯಕ್ಷೆ ಭಾಗ್ಯಸುಧಾ, ಬಿಡದಿ ಅಧ್ಯಕ್ಷ ಮಂಜುನಾಥ್ , ಉಪಾಧ್ಯಕ್ಷ ಕೃಷ್ಣಮೂರ್ತಿ , ಜಿಲ್ಲಾ ಉಪಾಧ್ಯಕ್ಷ ಕೆಂಪರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್, ನಗರ ಘಟಕ ಅಧ್ಯಕ್ಷ ಪ್ರಸನ್ನ, ಪಾರ್ಥಸಾರಥಿ ಮತ್ತಿತರರು ಭಾಗವಹಿಸಿದ್ದರು.

ಬಾಕ್ಸ್‌-----------

ದಕ್ಷಿಣ ರಾಜ್ಯಗಳ ಸಭೆಗೆ ಸಿಎಂ ಹೋಗಬಾರದು

ರಾಮನಗರ: ಲೋಕಸಭಾ ಕ್ಷೇತ್ರ ಪುನರ್ ವಿಂಗಡಣೆ ಕುರಿತು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕರೆದಿರುವ ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಹೋಗಬಾರದು ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಸಲಹೆ ನೀಡಿದರು.

ಸುದ್ದಿಗಾರರೊಂದಿಗೆ ಮಾತನಾಡಿ, ದಕ್ಷಿಣ ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ನೋಡಿದರೆ ಭಾರತದಲ್ಲಿ ದಕ್ಷಿಣ ರಾಜ್ಯಗಳೇ ಬೇರೆ ಎಂಬುದಾಗಿ ಪ್ರತಿಬಿಂಬಿಸಲು ಹೊರಟಂತಿದೆ. ಆದ್ದರಿಂದ ಕರ್ನಾಟಕದ ಮುಖ್ಯಮಂತ್ರಿ ಆ ಸಭೆಗೆ ಹೋಗಬಾರದು ಎಂದರು.

ಪೆರಿಯರ್ ಕಾಲದಿಂದಲೂ ತಮಿಳುನಾಡಿಗೆ ಈ ದೇಶ ಸರಿಯಾಗಿ ಕಾಣುತ್ತಿಲ್ಲ. ಕೇಂದ್ರದಿಂದ ಕರ್ನಾಟಕಕ್ಕೆ ಅನ್ಯಾಯವಾಗಿದ್ದರೆ ಅದನ್ನು ಪ್ರಶ್ನಿಸಿ ನಾವೇ ಹೋರಾಟ ಮಾಡಿ ಶಕ್ತಿ ಪ್ರದರ್ಶಿಸೋಣ. ಹಾಗೊಂದು ವೇಳೆ ಮುಖ್ಯಮಂತ್ರಿಗಳು ಸಭೆಯಲ್ಲಿ ಭಾಗಿಯಾಗಿ ಕ್ರಿಯಾ ಸಮಿತಿ ರಚನೆಯಾದರೆ ನಾವೇ ಬೇರೆ ಎಂಬ ಕೆಟ್ಟ ಸಂದೇಶ ರವಾನಿಯಾದಂತೆ ಆಗುತ್ತದೆ ಎಂದು ವಾಟಾಳ್ ನಾಗರಾಜ್ ಹೇಳಿದರು.

13ಕೆಆರ್ ಎಂಎನ್ 3.ಜೆಪಿಜಿ

ರಾಮನಗರದ ಐಜೂರು ವೃತ್ತದಲ್ಲಿ ಎಂಇಎಸ್ ಸಂಘಟನೆ ನಿಷೇಧಿಸುವಂತೆ ಆಗ್ರಹಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪೊರಕೆ ಚಳವಳಿ ನಡೆಸಿದರು.

Share this article