ಕನ್ನಡಪ್ರಭ ವಾರ್ತೆ ಮೈಸೂರು
ಬುದ್ಧನಿಗೆ ಬಡವರ ಬಗ್ಗೆ ಕರುಣೆ, ಮಮಕಾರ ಅಗಾದವಾಗಿತ್ತು. ಬುದ್ಧ ಎಂದರೆ ಮಾನವ ಮೌಲ್ಯ ಅಳವಡಿಸಿಕೊಳ್ಳುವ ದೊಡ್ಡ ಶಕ್ತಿ ಎಂದು ಸಮಾಜ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.ನಗರದ ಅಶೋಕ ವೃತ್ತದಲ್ಲಿರುವ ವಿಶ್ವಮೈತ್ರಿ ಬುದ್ಧ ವಿಹಾರದಲ್ಲಿ ಸೋಮವಾರ ರಾತ್ರಿ ನಡೆದ ವೈಶಾಖ ಬುದ್ಧಪೂರ್ಣಿಮೆ- ಭಗವಾನ್ ಬುದ್ಧರ 2569ನೇ ಜಯಂತಿಯಲ್ಲಿ ಮಾತನಾಡಿದ ಅವರು, ಭಗವಾನ್ ಬುದ್ಧರು ಜೀವನದ ಸತ್ಯ ಸಂಗತಿಗಳ ಬಗ್ಗೆ ತಿಳಿಸಿ ನಿನಗೆ ನೀನೆ ಬೆಳಕು ಎಂದು ಜಗತ್ತಿಗೆ ಸಾರಿದ್ದಾರೆ. ಅಲೌಕಿಕ ವಿಚಾರಗಳನ್ನು ಬದಿಗೊತ್ತಿ ವೈಜ್ಞಾನಿಕ, ವೈಚಾರಿಕೆ ಸಂಗತಿಗಳ ಬಗ್ಗೆ ಅರಿವು ಮೂಡಿಸಿದ್ದಾರೆ. ವೈಜ್ಞಾನಿಕ ಅಲೋಚನೆಗಳಿಂದ ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದರು ಎಂದು ಹೇಳಿದರು.
ಬಾಬಾ ಸಾಹೇಬರು ಭಗವಾನ್ ಬುದ್ದರ ಪರಮ ಅನುಯಾಯಿಗಿದ್ದರು. ಭಾರತದಲ್ಲಿ ಶ್ರೇಷ್ಠ ಚಿಂತಕರಿದ್ದರೆ ಅದು ಡಾ. ಅಂಬೇಡ್ಕರ್ ಎಂದು ಲೋಹಿಯಾ ಅವರು ಹೇಳಿದ್ದಾರೆ. ಸಂವಿಧಾನವನ್ನು ಆಳವಾಗಿ ಅಧ್ಯಯನ ಮಾಡಿದರೆ ಬಾಬಾ ಸಾಹೇಬರನ್ನು ಸಂಪೂರ್ಣವಾಗಿ ಅರಿಯುವುದು ಸುಲಭವಾಗುತ್ತದೆ ಎಂದರು.ನಮ್ಮ ಏಳಿಗೆ ಇರುವುದು ಪ್ರಜಾಪ್ರಭುತ್ವದ ಬಲವರ್ಧನೆ ಮತ್ತು ಸಂವಿಧಾನ ಆಶಯಗಳ ಜಾರಿಯಲ್ಲಿ. ಈಡೀ ಭಾರತ ದೇಶದಲ್ಲೇ ನಮ್ಮ ಸರ್ಕಾರವು ಸಂವಿಧಾನವನ್ನು ಮನೆ- ಮನೆಗೆ ತಲುಪಿಸಿದೆ. ಒಂದು ಚಳವಳಿಯಂತೆ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ಕೆಲಸ ಮಾಡಿದ್ದೇವೆ ಎಂದರು.
ಬಾಬಾ ಸಾಹೇಬರು ದೇಶದ ಅಭಿವೃದ್ದಿ ಕುರಿತು ಎಲ್ಲಾ ವಿಷಯಗಳನ್ನು ತಿಳಿಸಿದ್ದಾರೆ. ಪರದೇಶದ ನಡುವೆ ಬಿಕ್ಕಟ್ಟು ಉಂಟಾದ ಸಂದರ್ಭದಲ್ಲಿ ಪರಿಹರಿಸುವ ರಾಜತಾಂತ್ರಿಕ ವಿಚಾರಗಳನ್ನು ಮಂಡಿಸಿದ್ದಾರೆ. ಪ್ರತಿಯೊಬ್ಬರಿಗೂ ಸ್ವಾಭಿಮಾನದ ಬದುಕು ಅಗತ್ಯವಾಗಿದೆ. ದುರಾಸೆಯಿಂದ ದೂರವಾಗಿ ಮನುಷ್ಯತ್ವದಿಂದ ಕೂಡಿದ ಜೀವನ ನಡೆಸಲು ಬುದ್ಧನನ್ನು ಅನುಸರಿಸೋಣ ಎಂದು ಅವರು ಕರೆ ನೀಡಿದರು.ಕರ್ನಾಟಕ ಬಿಕ್ಕು ಮಹಾ ಸಂಘದ ಕಾರ್ಯದರ್ಶಿ ಡಾ. ಕಲ್ಯಾಣಸಿರಿ ಬಂತೇಜಿ, ಶಾಸಕ ಟಿ.ಎಸ್. ಶ್ರೀವತ್ಸ, ಭಾಗ್ಯಲಕ್ಷ್ಮೀ ಶ್ರೀನಿವಾಸಪ್ರಸಾದ್, ಮಾಜಿ ಮೇಯರ್ ಪುರುಷೋತ್ತಮ್, ವಕೀಲ ಶಿವರುದ್ರಪ್ಪ ಮೊದಲಾದವರು ಇದ್ದರು.ಬುದ್ಧ, ಬವಸ, ಅಂಬೇಡ್ಕರ್ ಅವರನ್ನು ಪಾಲಿಸಿದರೆ ವಿಶ್ವಮಾನವನ ಘನತೆ ಬರುತ್ತದೆ. ಧರ್ಮದ ಆಯ್ಕೆ ಐಚ್ಛಿಕ ವಿಷಯ. ಅಂತಿಮವಾಗಿ ನಮಗೆ ಧರ್ಮ ಬೇಕು. ಆ ಧರ್ಮವು ನಮಗೆ ಹಿತಕರವಾಗಿರಬೇಕು. ತಾರತಮ್ಯ, ಅಸಮಾನತೆಯನ್ನು ಬೋಧಿಸುವುದು ಧರ್ಮವೇ ಅಲ್ಲ.
- ಡಾ.ಎಚ್.ಸಿ. ಮಹದೇವಪ್ಪ, ಸಮಾಜ ಕಲ್ಯಾಣ ಸಚಿವರು