ಕನ್ನಡಪ್ರಭ ವಾರ್ತೆ ಚಳ್ಳಕೆರೆ
ತಾಲೂಕಿನ ಭೀಮನಕೆರೆಯಲ್ಲಿ ಬುಧವಾರ ದಲಿತ ಮಾನವ ಹಕ್ಕುಗಳ ವೇದಿಕೆವತಿಯಿಂದ ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಹಾಗೂ ಉಪಾಸಕಿ ಪೋಲಮ್ಮ ಅವರ ಪುಣ್ಯಾನುಮೋದನೆ ಕಾರ್ಯಕ್ರಮದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಬುದ್ಧನ ಅಹಿಂಸಾ ತತ್ವಗಳು ಮತ್ತು ಸಮಾಜ ಕುರಿತು ಮಾತನಾಡಿದ ಅವರು, ಈ ಜಗತ್ತಿನ ಅಸಮಾನತೆಗೆ ಶ್ರೀಮಂತರು ಹಾಗೂ ಖಾಸಗಿ ವ್ಯಕ್ತಿಗಳ ಅಪರಿಮಿತ ಸಂಪತ್ತು ಕಾರಣ ಎಂದು ಬುದ್ಧ ಹೇಳಿದ್ದ. ಅಸಮಾನ ಹಂಚಿಕೆಯಿಂದಾಗಿ ಸಮಾಜದಲ್ಲಿ ಜನರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ.
ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ಹೇಳಿದ ಗೌತಮ ಬುದ್ಧನ ತತ್ವಗಳನ್ನು ಅರಿಯಬೇಕು. ದುರಾಸೆಗೆ ಯಾರೂ ಕೂಡ ಮಾರು ಹೋಗಬಾರದು. ಸರಳ ಜೀವನ ರೂಢಿಸಿಕೊಂಡು ಪಂಚಶೀಲ ತತ್ವಗಳನ್ನು ಅಳವಡಿಸಿಕೊಂಡು ಬುದ್ಧ, ಬಸವ, ಅಂಬೇಡ್ಕರ್ ಮಾರ್ಗದಲ್ಲಿ ಸಾಗಬೇಕಿದೆ ಎಂದರು.ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್ ಮಾತನಾಡಿ, ತಳಸಮುದಾಯಗಳ ಜನರು ಜಾತ್ರೆ, ಪರಿಷೆ ಎಂಬಿತ್ಯಾದಿ ಆಚರಣೆಗಳನ್ನು ಮಾಡುವ ಮೂಲಕ ಸಾಲಗಾರರಾಗುತ್ತಿದ್ದಾರೆ. ಅಂಬೇಡ್ಕರ್ ಅವರ ಹೋರಾಟದ ಋಣದಲ್ಲಿ ಬದುಕುತ್ತಿರುವ ನಾವುಗಳು ಹೆಚ್ಚು ಪುಸ್ತಕಗಳನ್ನು ಓದುವ ಮೂಲಕ ಜ್ಞಾನಾರ್ಜನೆ ಪಡೆದುಕೊಳ್ಳಬೇಕು. ಅನ್ನ ದೇವರ ಮುಂದೆ ಇನ್ನು ದೇವರು ಉಂಟೇ ಎಂಬುದನ್ನು ಅರಿತು ದುಡಿದುಣ್ಣುವ ಕಡೆಗೆ ನಾವು ಮನಸ್ಸು ಮಾಡಬೇಕು ಎಂದರು.
ಸಾಮಾಜಿಕ ಹೋರಾಟಗಾರ ಪರಮೇಶ ಮೌರ್ಯ ಮಾತನಾಡಿ, ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಅಂತಹವರು ದೈಹಿಕ ಮತ್ತು ಮಾನಸಿಕ ಗುಲಾಮಗಿರಿಗೆ ಒಳಗಾಗುತ್ತಾನೆ. 139 ದೇಶಗಳಲ್ಲಿ ಅಂಬೇಡ್ಕರ್ ಅವರ ಜಯಂತಿ ಆಚರಣೆ ಮಾಡುತ್ತಿವೆ. ಇಂತಹ ವಿಮೋಚಕನ ಹಾದಿಯಲ್ಲಿ ಹೋಗಬೇಕು ಎಂದರು.
ಅಖಿಲ ಭಾರತ ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಎನ್.ಪ್ರಕಾಶ್, ಲಕ್ಷ್ಮಮ್ಮ, ಬೂದಿಹಳ್ಳಿ ಹೊನ್ನೂರಸ್ವಾಮಿ, ನನ್ನಿವಾಳ ನಾಗರಾಜ್, ಕಾಂಗ್ರೆಸ್ ಮುಖಂಡ ನವೀದ್, ನೆಲಗೇತನಹಟ್ಟಿ ನಾಗರಾಜ್, ದೊಡ್ಡ ಉಳ್ಳಾರ್ತಿ ರಾಜಣ್ಣ, ಬಿ.ಎಸ್.ಯೋಗರಾಜು, ಗಾಂಧೀನಗರ ಚಂದ್ರಣ್ಣ, ಬೆಸ್ಕಾಂ ತಿಪ್ಪೇಸ್ವಾಮಿ, ಬಂಗ್ಲೆ ಶ್ರೀನಿವಾಸ್, ಹನುಮಂತರಾಯ, ಯತ್ತಿನಹಟ್ಟಿ ಓಬಳೇಶ್, ಮಂಜು, ಶಿವಣ್ಣ ಮತ್ತಿತರರು ಹಾಜರಿದ್ದರು.