ಭಗವಾನ್ ಬುದ್ಧ ಜಯಂತಿ ಆಚರಣೆ । ತ್ರಿಸರಣ, ಪಂಚಶೀಲ ತತ್ವ ಪಠಣ
ಕನ್ನಡಪ್ರಭ ವಾರ್ತೆ ಚಿತ್ರದುರ್ಗಜಾಗತಿಕ ಮಟ್ಟದಲ್ಲಿ ಬುದ್ದ ತತ್ವವೇ ಸರ್ವ ಶ್ರೇಷ್ಠವೆಂದು ನಿವೃತ್ತ ಪ್ರಾಚಾರ್ಯ ಪ್ರೊ.ಸಿ.ಕೆ.ಮಹೇಶ್ ಹೇಳಿದರು.
ನಗರದ ಸ್ಟೇಡಿಯಂ ಮುಂಭಾಗದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಭಗವಾನ್ ಬುದ್ಧರ ಜಯಂತಿ ಆಚರಣೆ ಸಮಾರಂಭದಲ್ಲಿ ಮಾತನಾಡಿ, ಜಗತ್ತಿನ ಎಲ್ಲಾ ತತ್ವ, ಸಿದ್ಧಾಂತಗಳ ಪ್ರಕಾರ ಇಡೀ ವಿಶ್ವದಲ್ಲಿ ಬಹಳ ದಟ್ಟವಾದ ಪ್ರಭಾವ ಬೀರಿರುವ ವ್ಯಕ್ತಿ ಬುದ್ಧ ಮಾತ್ರ ಎಂದರು.ಖಂಡಗಳ ಕಾಲಘಟ್ಟದಲ್ಲಿ ತುಂಬಾ ದೊಡ್ಡದಾಗಿ ಪ್ರಚಾರವಾಗಿದ್ದು ಬುದ್ಧ ದಮ್ಮ. ಜಗತ್ತಿನಲ್ಲಿ ಯಾವುದೇ ಧರ್ಮ, ತತ್ವ, ಸಿದ್ದಾಂತಗಳಿರಬಹುದು. 2,600 ವರ್ಷಗಳ ಹಿಂದೆ ಉದಯಿಸಿದ ಬುದ್ಧನಿಂದಲೇ ಎಲ್ಲವೂ ನಡೆಯುತ್ತಿರುವುದು. ಜಗತ್ತಿನಲ್ಲಿ ಬುದ್ಧ ಪ್ರಭಾವ ಬೀರಿರುವುದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಸಾವಿರಾರು ಲೇಖನ, ಪುಸ್ತಕಗಳು ಬಂದಿವೆ. ಬುದ್ಧನ ಬಗ್ಗೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಚಿಂತನೆ ನಡೆದಿದೆ ಎಂದರೆ ಆಶ್ಚರ್ಯ ಆಗುತ್ತದೆ. ಧ್ಯಾನದ ರೀತಿ, ಕಣ್ಣು ಮುಚ್ಚಿರುವ ರೀತಿಯಲ್ಲಿ, ಧರ್ಮದ ರೀತಿಯಲ್ಲಿ ಹೀಗೆ ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಬುದ್ಧ ಕಂಡಿದ್ದಾನೆ ಎಂದರು.
ಭಾರತೀಯ ಬೌದ್ಧ ಮಹಾಸಭಾ ಜಿಲ್ಲಾಧ್ಯಕ್ಷ ಬಿ.ಪಿ ತಿಪ್ಪೇಸ್ವಾಮಿ ಮಾತನಾಡಿ, ಸಮಾನತೆ, ಸ್ವಾತಂತ್ರ್ಯ ಹಾಗೂ ವೈಜ್ಞಾನಿಕ ತಳಹದಿಯ ಮೇಲೆ ದಮ್ಮವನ್ನು ಕಟ್ಟಿದ್ದು ಬುದ್ಧ. ಇದೇ ಕಾರಣಕ್ಕೆ ಇಡೀ ವಿಶ್ವ, ಭಾರತಕ್ಕೆ ಗೌರವ ಕೊಡುತ್ತಿದೆ. ಯುದ್ಧ, ಹಿಂಸೆ ಯಾವುದೇ ಕಾರಣಕ್ಕೂ ಯಾರನ್ನೂ ಗೆಲ್ಲಿಸಲು ಸಾಧ್ಯವೇ ಇಲ್ಲ, ಪ್ರೀತಿಯೊಂದೇ ಮಾನವ ಸಂಕುಲ ಬದುಕಿಸಲು ಸಾಧ್ಯ ಎಂದು ಸಾರ್ವಕಾಲಿಕ ಸಂದೇಶ ನೀಡಿದವರು ಭಗವಾನ್ ಬುದ್ಧ. ಪ್ರಪಂಚದಲ್ಲಿ ಅತ್ಯಂತ ಪಾಂಡಿತ್ಯ ಹೊಂದಿದ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೂಡ ಬುದ್ಧನೇ ನನ್ನ ಗುರು, ನನ್ನ ಬದುಕಿನ ಹಾಗೂ ಎಲ್ಲ ಮೂಲವೂ ಬುದ್ಧ ಎಂದಿದ್ದಾರೆ ಎಂದು ತಿಳಿಸಿದರು.ಉಪವಿಭಾಗಾಧಿಕಾರಿ ಮೆಹಬೂಬ್ ಜಿಲಾನ್ ಖುರೇಷಿ ಮಾತನಾಡಿ, ಬುದ್ದ ಶಾಂತಿ ಸಂದೇಶದ ಪ್ರವರ್ತಕ ಎಂದರು.
ಗಂಗಾಧರ ಮತ್ತು ತಂಡದವರು ಹಾಗೂ ಕೋಟೆನಾಡು ಬುದ್ಧ ವಿಹಾರದ ಉಪಾಸಕರು ತ್ರಿಸರಣ ಮತ್ತು ಪಂಚಶೀಲ ಪಠಣ ಮಾಡಿದರು. ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ ಚಕ್ರವರ್ತಿ, ಪೌರಾಯುಕ್ತೆ ಎಂ.ರೇಣುಕ, ನವಯಾನ ಬುದ್ಧ ದಮ್ಮ ಸಂಘದ ಡಿ.ದುರ್ಗೇಶ್, ಟಿ.ರಾಮು, ಸಿ.ಎ.ಚಿಕ್ಕಣ್ಣ, ಕುಮಾರ್ ಜೆಜೆ ಹಟ್ಟಿ, ಉಪಾಸಕರಾದ ಎಚ್.ಸಿ.ನಿರಂಜನಮೂರ್ತಿ, ಶಿವಮೂರ್ತಿ, ಬೀಸನಹಳ್ಳಿ ಜಯಪ್ಪ, ಚಂದ್ರಪ್ಪ ಬೆನಕನಹಳ್ಳಿ, ಕನ್ನಡ, ಸಂಸ್ಕೃತಿ ಲಾಖೆ ಸಹಾಯಕ ನಿರ್ದೇಶಕ ಡಾ.ಬಿ.ಎಂ.ಗುರುನಾಥ್, ಆಹಾರ, ನಾಗರಿಕ ಸರಬರಾಜು ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ್, ಸರ್ಕಾರಿ ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ. ಬಿ.ಟಿ. ತಿಪ್ಪೇರುದ್ರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ದಲಿತ ಸಂಘಟನೆಗಳ ಮುಖಂಡರು ಇದ್ದರು.