ಹಾನಗಲ್ಲ: ಸಾಮಾಜಿಕ ನ್ಯಾಯಕ್ಕಾಗಿ ಏನೆಲ್ಲ ಕಷ್ಟ ಸಹಿಸಿಕೊಂಡು ಎಂಟುನೂರು ವರ್ಷಗಳ ಹಿಂದೆಯೇ ಪಣ ತೊಟ್ಟು ಹೋರಾಡಿದ ಶರಣರ ಆಶಯ ಈಗಲಾದರೂ ಪೂರ್ಣ ಪ್ರಮಾಣದಲ್ಲಿ ಕೈಗೂಡಬೇಕಾಗಿದೆ ಎಂದು ಶರಣ ಸಾಹಿತ್ಯ ಪರಿಷತ್ ನಗರ ಘಟಕದ ಗೌರವಾಧ್ಯಕ್ಷ ನ್ಯಾಯವಾದಿ ರವಿಬಾಬು ಪೂಜಾರ ತಿಳಿಸಿದರು.ಹಾನಗಲ್ಲಿನ ಶ್ರೀ ಕುಮಾರೇಶ್ವರ ವಿರಕ್ತಮಠದಲ್ಲಿ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಹಾನಗಲ್ಲ ನಗರ ಘಟಕದ ಹಾಗೂ ಕದಳಿ ಮಹಿಳಾ ವೇದಿಕೆ ಆಯೋಜಿಸಿದ್ದ ಶರಣ ಸಂಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಎಲ್ಲ ಕಾಲಕ್ಕೂ ಸಲ್ಲುವ ಸಾಮಾಜಿಕ ಚಿಂತನೆಗಳ ಮೊತ್ತವೇ ವಚನ ಸಾಹಿತ್ಯ. ಇಡೀ ದೇಶದ ವಿವಿಧ ಪ್ರದೇಶದಿಂದ ಬಸವಣ್ಣ ವಿಚಾರಧಾರೆಗೆ ಒಲಿದು ಬಂದ ಶರಣರು ನಾಡಿನ ಹಿತಕ್ಕಾಗಿ ಶ್ರಮಿಸಿರುವುದು ಒಂದು ಪವಾಡವೇ ಸರಿ. ಯಾವುದೇ ಭೇದಕ್ಕೆ ಎಣೆ ಇಲ್ಲದಂತೆ ಇಡೀ ಮನುಕುಲದ ಹಿತಕ್ಕೆ ಎಲ್ಲ ಕಾಲಕ್ಕೂ ಬೇಕಾದ ಮೌಲಿಕ ಸಂದೇಶಗಳು ವಚನಗಳಲ್ಲಿವೆ ಎಂದರು.ಉಪನ್ಯಾಸ ನೀಡಿದ ಉಪನ್ಯಾಸಕ ಹೊನ್ನೊಪ್ಪ ಭೋವಿ, ಅಧ್ಯಾತ್ಮವನ್ನೂ ಒಳಗೊಂಡ ಹಿತ ಸಂದೇಶಗಳು ವಚನ ಸಾಹಿತ್ಯದಲ್ಲಿವೆ. ವಚನಕಾರರು ಅನುಭಾವಿಗಳು. ಅವರ ಸಂದೇಶಗಳು ನುಡಿದಂತೆ ನಡೆದ ಅನುಭವದ ಅಮೃತ ಸಂದೇಶಗಳು ಎಂದರು.ಕದಳಿ ಮಹಿಳಾ ವೇದಿಕೆ ಗೌರವಾಧ್ಯಕ್ಷೆ ಅಕ್ಕಮ್ಮ ಶೆಟ್ಟರ ಅಧ್ಯಕ್ಷತೆ ವಹಿಸಿದ್ದರು. ಪುರಸಭಾ ಉಪಾಧ್ಯಕ್ಷೆ ವೀಣಾ ಗುಡಿ, ತಾಲೂಕು ಕದಳಿ ಮಹಿಳಾ ಘಟಕದ ಅಧ್ಯಕ್ಷೆ ಶಿವಗಂಗಕ್ಕ ಪಟ್ಟಣದ, ತಾಲೂಕು ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ಎಸ್.ಕೆ. ಕಲ್ಲನಗೌಡರ, ನಗರ ಘಟಕದ ಉಪಾಧ್ಯಕ್ಷ ಎಸ್.ಸಿ. ಹೇಮಗಿರಿಮಠ, ಶೋಭಾ ಪಾಟೀಲ, ಸುಜಾತಾ ನಂದೀಶೆಟ್ಟರ, ನೀಲಮ್ಮ ಆಲದಕಟ್ಟಿ, ಸುಮಂಗಲಾ ಕಟ್ಟಿಮಠ, ಶ್ರೀದೇವಿ ಕೋಟಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.ಕ್ರೀಡೆಯಿಂದ ಶಿಸ್ತು, ಸಮಯಪಾಲನೆ
ಶಿಗ್ಗಾಂವಿ: ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಸ್ವಸ್ತಿಕ ಸ್ಪೋರ್ಟ್ಸ್ ಕ್ಲಬ್ನವರು ಆಯೋಜಿಸಿದ್ದ ಶಿಗ್ಗಾಂವಿ- ಸವಣೂರು ಚಾಂಪಿಯನ್ ಲೀಗ್ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟಿನ ವಿಜೇತ ತಂಡಗಳಿಗೆ ಭಾರತ ಸೇವಾ ಸಂಸ್ಥೆಯ ಅಧ್ಯಕ್ಷ ಶ್ರೀಕಾಂತ ದುಂಡಿಗೌಡ್ರ ಅವರು ಬಹುಮಾನ ವಿತರಿಸಿದರು.ಬಳಿಕ ಮಾತನಾಡಿದ ಅವರು, ಕ್ರೀಡೆಗಳು ಶಿಸ್ತು, ಸಮಯಪಾಲನೆ, ಕಠಿಣ ಪರಿಶ್ರಮವನ್ನು ರೂಪಿಸುತ್ತವೆ. ಗುಂಪಿನ ಆಟಗಳು ನಾಯಕತ್ವ ಕೌಶಲ್ಯಗಳನ್ನು ಬೆಳೆಸುತ್ತದೆ. ಯುವಕರು ದುಶ್ಟಟಗಳಿಗೆ ದಾಸರಾಗುವ ಕ್ರೀಡೆಗಳಿಗೆ ಆದ್ಯತೆ ನೀಡಬೇಕು. ಇದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಬಹುದು ಎಂದರು.ಈ ಸಂದರ್ಭದಲ್ಲಿ ಗದಿಗಯ್ಯ ಸದಾಶಿವಪೇಟೆ, ನಜೀರ ಶೇತಸನದಿ, ಆನಂದ ಸುಭೇದಾರ, ರಮೇಶ ಸಾತನ್ನವರ, ಬಸವರಾಜ ಮಾಯಣ್ಣವರ, ಶಂಕರ ಧಾರವಾಡ, ಮುಕ್ತಾರ ತಿಮ್ಮಾಪುರ, ಸಾಧಿಕ ಸವಣೂರ, ಸಂತೋಷ ಧಾರವಾಡ ಹಾಗೂ ಕ್ರಿಕೆಟ್ ಆಟಗಾರರು ಯುವಕರು ಭಾಗವಹಿಸಿದ್ದರು.