- ಕೆರೆ ಏರಿ ಪರಿಶೀಲಿಸಿದ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಬಸವಂತಪ್ಪ ಮನವಿ
ದಾವಣಗೆರೆ-ಹೊಳಲ್ಕೆರೆ-ಹೊಸದುರ್ಗ ಮಾರ್ಗದಲ್ಲಿ ಬರುವ ಕೊಡಗನೂರು ಕೆರೆ ಏರಿಗೆ ಧಕ್ಕೆಯಾಗದಂತೆ ಬೈಪಾಸ್ ರಸ್ತೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಶಾಸಕ ಕೆ.ಎಸ್.ಬಸವಂತಪ್ಪ ಮನವಿ ಸಲ್ಲಿಸಿದರು.
ತಾಲೂಕಿನ ಕೊಡಗನೂರು ಕೆರೆ ಮತ್ತು ಕೆರೆ ಏರಿ ಪರಿಶೀಲನೆ ನಡೆಸಿದ ಸಚಿವ ಸತೀಶ್ ಜಾರಕಿಹೊಳಿ, ಕೆರೆ ಭರ್ತಿ ಆಗಿ ಕೋಡಿ ಒಡೆದು ಮೇಲೆ ಉಂಟಾಗುವ ಅನಾಹುತಗಳ ಬಗ್ಗೆ ಮಾಹಿತಿ ಶಾಸಕರು, ರೈತರಿಂದ ಪಡೆದುಕೊಂಡರು.ಶಾಸಕ ಕೆ.ಎಸ್. ಬಸವಂತಪ್ಪ ಮಾತನಾಡಿ, ಕೊಡಗನೂರು ಕೆರೆ ವಿಶಾಲ ಪ್ರದೇಶ ಹೊಂದಿದೆ. ಕೆರೆ ಭರ್ತಿಯಾಗಿ ಏರಿ ಬಿರುಕು ಬಿಡುತ್ತಿದೆ. ಈಗಾಗಲೇ ಸಾಕಷ್ಟು ಬಾರಿ ದುರಸ್ತಿ ಮಾಡಲಾಗಿದೆ. ಆದರೂ ಕೆರೆ ಭರ್ತಿಯಾದ ತಕ್ಷಣವೇ ಬಿರುಕು ಬಿಡುತ್ತದೆ. ಇದರಿಂದಾಗಿ ಈ ಭಾಗದಲ್ಲಿ ಬೆಳೆ ಬೆಳೆಯುವ ರೈತರು, ಗ್ರಾಮಗಳ ಜನರಿಗೆ ಭಾರಿ ತೊಂದರೆ ಉಂಟಾಗುತ್ತದೆ. ಈ ಸಲುವಾಗಿ ಕೆರೆ ಏರಿಗೆ ಯಾವುದೇ ರೀತಿಯ ಧಕ್ಕೆ ಆಗದಂತೆ ಪರ್ಯಾಯವಾಗಿ ಬೈಪಾಸ್ ರಸ್ತೆ ನಿರ್ಮಾಣ ಅವಶ್ಯಕತೆ ಇದೆ. ಹೀಗಾಗಿ, ₹30 ಕೋಟಿ ವೆಚ್ಚದಲ್ಲಿ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕಾಗಿದೆ. ತಾವು ಅಗತ್ಯ ಅನುದಾನ ಒದಗಿಸಿ ಬೈಪಾಸ್ ರಸ್ತೆ ನಿರ್ಮಾಣ ಮಾಡಬೇಕೆಂದು ಸಚಿವರಿಗೆ ಕೋರಿದರು.
ಈ ಸಂದರ್ಭ ಲೋಕೋಪಯೋಗಿ ಇಲಾಖೆ ಅಭಿಯಂತರ ಸುರೇಂದ್ರ ಬಾಬು ಸಹಾಯಕ ಅಭಿಯಂತರ ಕುಮಾರನಾಯ್ಕ್, ಕೊಡಗನೂರು ಲಕ್ಷ್ಮಣ್, ಅಶೋಕಣ್ಣ, ಜಯಪ್ಪ, ಪರಮೇಶ್ವರಪ್ಪ, ರಮೇಶ್, ಗುರುಪಾಟೀಲ್, ಹೊನ್ನನಾಯಕನಹಳ್ಳಿ ದೇವೇಂದ್ರಪ್ಪ, ತಿಪ್ಪಾನಾಯ್ಕ್ , ಮಾಯಕೊಂಡ ಪಿಎಸ್ಐ ಎಸ್.ವಿ.ಅಜಯ್ ಇತರರಿದ್ದರು.
(ಬಾಕ್ಸ್) * ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ: ಸಚಿವ ಭರವಸೆ ದಾವಣಗೆರೆ: ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯಲ್ಲಿ ಸಾಕಷ್ಟು ರಸ್ತೆಗಳು ಹಾಳಾಗಿವೆ. ರಸ್ತೆ ಅಭಿವೃದ್ಧಿಗೆ ಅಗತ್ಯ ಅನುದಾನ ಬಿಡುಗಡೆ ಮಾಡುವಂತೆ ಶಾಸಕ ಕೆ.ಎಸ್.ಬಸವಂತಪ್ಪ ಅವರು ನನ್ನ ಮೇಲೆ ಒತ್ತಡ ಹಾಕುತ್ತಿದ್ದಾರೆ. ಹಾಳಾದ ರಸ್ತೆ ಅಭಿವೃದ್ಧಿ ಇಲಾಖೆ ಜವಾಬ್ದಾರಿಯಾಗಿದೆ. ಹಂತ ಹಂತವಾಗಿ ಕ್ಷೇತ್ರ ವ್ಯಾಪ್ತಿಯ ರಸ್ತೆಗಳ ಅಭಿವೃದ್ಧಿಗೆ ಕ್ರಮ ತೆಗೆದುಕೊಳ್ಳುವುದಾಗಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಭರವಸೆ ನೀಡಿದರು.
ತಾಲೂಕಿನ ಲೋಕಿಕೆರೆ ಗ್ರಾಮದಲ್ಲಿ ಶುಕ್ರವಾರ ಸಂಜೆ ₹8 ಕೋಟಿ ವೆಚ್ಚದಲ್ಲಿ ಲೋಕಿಕೆರೆ-ದಾವಣಗೆರೆ, ಶ್ಯಾಗಲೆ-ಹೂವಿನಮಡು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪಂಚ ಗ್ಯಾರಂಟಿ ಘೋಷಣೆ ಮಾಡಿ ಸಮರ್ಪಕವಾಗಿ ಅನುಷ್ಠಾನಗೊಳಿಸಿದ್ದಾರೆ. ಇದರಿಂದಾಗಿ ಮಹಿಳೆಯರು ಆರ್ಥಿಕವಾಗಿ ಸಬಲರಾಗಿ ಸ್ವಾವಲಂಬಿ ಜೀವನ ನಡೆಸುವಂತಾಗಿದೆ. ಪಂಚ ಗ್ಯಾರಂಟಿ ಜೊತೆಗೆ ಸರ್ಕಾರ ಸಾಕಷ್ಟು ಅಭಿವೃದ್ಧಿ ಕಾರ್ಯಕ್ರಮಗಳು, ಯೋಜನೆಗಳನ್ನು ರೂಪಿಸಿದೆ. ಮುಂದಿನ 3 ವರ್ಷಗಳ ಅವಧಿಯಲ್ಲಿ ರಾಜ್ಯವನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಕ್ಷೇತ್ರದಲ್ಲಿ ಈಗಾಗಲೇ ₹30 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಅಭಿವೃದ್ಧಿಗೆ ಚಾಲನೆ ನೀಡಲಾಗಿದೆ. ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ರಸ್ತೆಗಳ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ ಸೇರಿದಂತೆ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಒತ್ತು ನೀಡುತ್ತೇನೆ. ನೀವೆಲ್ಲರು ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಇಲಾಖೆ ಮುಖ್ಯ ಅಭಿಯಂತರ ಸುರೇಂದ್ರ ಬಾಬು, ಸಹಾಯಕ ಅಭಿಯಂತರ ಕುಮಾರ್ ನಾಯ್ಕ್, ಬಸವಾಪಟ್ಟಣ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ನಾಗರಾಜ್, ಉಮ್ಮಣ್ಣ, ರವಿಕುಮಾರ್, ರವೀಶ್ ಕುಮಾರ್, ಅಭಿಷೇಕ, ಮಂಜಣ್ಣ, ಅಂಜಿನಪ್ಪ, ಮೂರ್ತಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.- - -
ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ದಾವಣಗೆರೆ ತಾಲೂಕಿನ ಕೊಡಗನೂರು ಕೆರೆ ಏರಿಯನ್ನು ಪರಿಶೀಲನೆ ನಡೆಸಿದರು. ಶಾಸಕ ಕೆ.ಎಸ್.ಬಸವಂತಪ್ಪ, ಇಲಾಖೆ ಅಧಿಕಾರಿಗಳು ಇದ್ದರು.