ಬುಲ್ಡೋಜರ್ ಸಂಸ್ಕೃತಿಯವರಿಂದ ತುರ್ತು ಪರಿಸ್ಥಿತಿ ಟೀಕೆ: ಸಿ. ಯತಿರಾಜು

KannadaprabhaNewsNetwork | Published : Jun 30, 2025 12:35 AM

ಆಳುವ ವರ್ಗಗಳು ತಮ್ಮ ಅಧಿಕಾರವನ್ನು ತಮ್ಮ ಕೈಯಲ್ಲೇ ಉಳಿಸಿಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿಯನ್ನು ಹೇರುತ್ತವೆ. ಇದು ಅಪಾಯಕಾರಿ ಬೇಳವಣಿಗೆಯಾಗಿದೆ.

ಕನ್ನಡಪ್ರಭ ವಾರ್ತೆ ತುಮಕೂರು

ಸಂವಿಧಾನದ ಪೀಠಿಕೆಯಲ್ಲಿ ಸಮಾಜವಾದ, ಜಾತ್ಯಾತೀತತೆ ಎಂಬ ಪದಗಳು ಇರಬಾರದು ಎನ್ನುವ ಬುಲ್ಡೋಜರ್ ಸಂಸ್ಕೃತಿಯವರು ಇಂದು ತುರ್ತುಪರಿಸ್ಥಿತಿಯ ಬಗ್ಗೆ ಮಾತನಾಡುತ್ತಿದ್ದು ಜನತೆ ಎಚ್ಚರಿಕೆಯಿಂದ ಇರಬೇಕಾದ ಅವಶ್ಯಕತೆ ಇದೆ ಎಂದು ವಿಚಾರವಾದಿ ಸಿ. ಯತಿರಾಜು ಅಭಿಪ್ರಾಯಪಟ್ಟರು.

ಅವರು ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ತುರ್ತು ಪರಿಸ್ಥಿತಿ 50 ವರ್ಷ ಅಂದು-ಇಂದು ಎನ್ನುವ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಆಳುವ ವರ್ಗಗಳು ತಮ್ಮ ಅಧಿಕಾರವನ್ನು ತಮ್ಮ ಕೈಯಲ್ಲೇ ಉಳಿಸಿಕೊಳ್ಳುವ ಸಲುವಾಗಿ ತುರ್ತು ಪರಿಸ್ಥಿತಿಯನ್ನು ಹೇರುತ್ತವೆ. ಇದು ಅಪಾಯಕಾರಿ ಬೇಳವಣಿಗೆಯಾಗಿದ್ದು ಯಾವುದೇ ಸರ್ಕಾರಗಳು ತುರ್ತು ಪರಿಸ್ಥಿತಿಯನ್ನು ಹೇರಿದರೆ ಅದನ್ನು ವಿರೋಧಿಸಬೇಕು. ಇದರಿಂದ ರೈತರು, ಕಾರ್ಮಿಕರು ಮತ್ತು ಅಹಿಂದ ವರ್ಗಗಳು ಸಂಕಷ್ಠಗಳನ್ನು ಎದುರಿಸಬೇಕಾಗುತ್ತದೆ. ಈ ತುರ್ತು ಪರಿಸ್ಥಿತಿಯ ವಿರುದ್ದ ರೈತರು, ಕಾರ್ಮಿಕರು ಮತ್ತು ಅಹಿಂದ ವರ್ಗಗಳು ರಾಜಕೀಯ ಪರಿವರ್ತನೆಯ ಹೋರಾಟ ನಡೆಸಬೇಕು ಎಂದರು.

ಇಂದು ಶಿಕ್ಷಣ, ಆರೋಗ್ಯ ಸಾಮಾನ್ಯ ಜನರ ಕೈಗೆಟುಕದಂತಾಗಿವೆ. ಕೇವಲ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ಕೆಲಸ ಮಾಡುತ್ತಿರುವ ಬಿಜೆಪಿ ಜನರ ಸಮಸ್ಯೆಗಳನ್ನು ಮರೆಮಾಚಿ ಅಘೋಷಿತ ತುರ್ತು ಪರಿಸ್ಥಿತಿಯನ್ನು ಜನರ ಮೇಲೆ ಹೇರಿದೆ ಎಂದರು.

ಸಿಐಟಿಯು ಜಿಲ್ಲಾಧ್ಯಕ್ಷ ಸೈಯದ್ ಮುಜೀಬ್ ಮಾತನಾಡಿ, ದೇಶದಲ್ಲಿ ಇಂದು ಬೇರೆ ಬೇರೆ ರೀತಿಯಲ್ಲಿ ತುರ್ತು ಪರಿಸ್ಥಿತಿ ಇದ್ದು, ಅಂದು ದೆಹಲಿಯಲ್ಲಿ ಸಾವಿರಾರು ಸಂಖ್ಯೆಯ ಬಡ ಜನರ ಗುಡಿಸಲುಗಳನ್ನು ನಾಶ ಮಾಡಿದ ಮತ್ತು ಜನಸಂಖ್ಯೆ ನಿಯಂತ್ರಣದ ಹೆಸರಿನಲ್ಲಿ ಬಲಾತ್ಕಾರವಾಗಿ ಸಂತಾನ ಹರಣ ಚಿಕಿತ್ಸೆ ಮಾಡಲಾಗಿತ್ತು. ಹೋರಾಟಗಾರರನ್ನು, ಸರ್ಕಾರದ ವಿರುದ್ಧ ಮಾತನಾಡುವವರನ್ನು ಜೈಲಿಗೆ ಹಾಕಲಾಗಿತ್ತು. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳಂತಿದ್ದು ಬಿಜೆಪಿ ತಂದ ನೀತಿಗಳನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ವೇಗವಾಗಿ ಮುಂದುವರಿಸುತ್ತಿದೆ ಎಂದರು.

ಪಂಡಿತ್ ಜವಹರ್ ಮಾತನಾಡಿ, ತುರ್ತು ಪರಿಸ್ಥಿತಿಯನ್ನು ಜಾರಿ ಮಾಡಿದಾಗ ಜನತೆ ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿರಲಿಲ್ಲ, ಆ ಸಂದರ್ಭದಲ್ಲಿ ಒಂದಿಷ್ಟು ಒಳ್ಳೆಯ ಕೆಲಸಗಳು ನಡೆದಿದ್ದರೂ ಸಹ ತುರ್ತು ಪರಿಸ್ಥಿತಿಯನ್ನು ಒಪ್ಪುವಂತಿಲ್ಲ. ಇಂದು ನಮಗೆ ಅರಿವಿಲ್ಲದ ರೀತಿಯಲ್ಲಿ ಅಘೋಷಿತ ತುರ್ತು ಪರಿಸ್ಥಿತಿ ಜಾರಿಯಲ್ಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಉಪನ್ಯಾಸಕ ಅಶ್ವಥನಾರಾಯಣ್ ಮಾತನಾಡಿದರು. ಕಾರ್ಯಕ್ರಮದಲ್ಲಿ ಟಿ.ಜಿ.ಶಿವಲಿಂಗಯ್ಯ, ಸಿ. ಅಜ್ಜಪ್ಪ, ಸಮುದಾಯದ ಅಶ್ವಥಯ್ಯ, ಜನವಾದಿ ಮಹಿಳಾ ಸಂಘಟನೆಯ ಕಲ್ಪನಾ, ಎನ್.ಕೆ.ಸುಬ್ರಮಣ್ಯ, ಶಂಕರಪ್ಪ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.