ಕನ್ನಡಪ್ರಭ ವಾರ್ತೆ ಬೆಂಗಳೂರು
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಎನ್ಡಿಎ ಸರ್ಕಾರದ ಸಂಪುಟದಲ್ಲಿ ರಾಜ್ಯಕ್ಕೆ ತಕ್ಕಮಟ್ಟಿಗೆ ಉತ್ತಮ ಎನ್ನಬಹುದಾದಂಥ ಖಾತೆಗಳೇ ಲಭಿಸಿದ್ದು, ಅಭಿವೃದ್ಧಿಗೆ ನೆರವಾಗುವ ನಿರೀಕ್ಷೆಯಿದೆ.ರಾಜ್ಯದ ಕೋಟಾದಲ್ಲಿ ಒಟ್ಟು ಐವರಿಗೆ ಸಂಪುಟದಲ್ಲಿ ಅವಕಾಶ ಸಿಕ್ಕಿದೆ. ನಿರ್ಮಲಾ ಸೀತಾರಾಮನ್, ಎಚ್.ಡಿ.ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಅವರಿಗೆ ಸಂಪುಟ ದರ್ಜೆ ಸ್ಥಾನಮಾನ ಸಿಕ್ಕರೆ, ಶೋಭಾ ಕರಂದ್ಲಾಜೆ ಮತ್ತು ವಿ.ಸೋಮಣ್ಣ ಅವರಿಗೆ ರಾಜ್ಯ ದರ್ಜೆ ಸ್ಥಾನಮಾನ ಸಿಕ್ಕಿದೆ.ಈ ಪೈಕಿ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಿರುವ ನಿರ್ಮಲಾ ಸೀತಾರಾಮನ್ ಅವರಿಗೆ ಹಿಂದೆ ಇದ್ದ ಪ್ರಬಲ ಹಣಕಾಸು ಖಾತೆಯನ್ನೇ ಮುಂದುವರೆಸಲಾಗಿದೆ. ಆದರೆ, ನಿರ್ಮಲಾ ಅವರಿಂದ ರಾಜ್ಯಕ್ಕೆ ವಿಶೇಷವಾಗಿ ನೆರವು ಹರಿದು ಬರುವ ಸಾಧ್ಯತೆ ಕಡಿಮೆಯೇ. ಇದು ಕಳೆದ ಬಾರಿ ನಿರೂಪಿತವಾಗಿದೆ. ಹೀಗಾಗಿ, ಅವರನ್ನು ಬಿಟ್ಟು ರಾಜ್ಯದವರೇ ಆದ ಇನ್ನುಳಿದ ನಾಲ್ವರು ಸಚಿವರ ಖಾತೆಗಳತ್ತ ಗಮನಹರಿಸುವುದು ಸೂಕ್ತವಾದೀತು.ಈ ನಾಲ್ಕು ಸಚಿವರ ಪೈಕಿ ಉತ್ಪಾದನಾ ವಲಯಕ್ಕೆ ಹೆಚ್ಚಿನ ಅವಕಾಶ ಸಿಕ್ಕಂತಾಗಿದೆ. ಜತೆಗೆ ರೈಲ್ವೆ ಮೂಲಸೌಕರ್ಯಕ್ಕೂ ಒತ್ತು ಸಿಗುವ ಸಾಧ್ಯತೆಯಿದೆ.ಸಂಪುಟ ದರ್ಜೆಯ ಸಚಿವ ಕುಮಾರಸ್ವಾಮಿ ಅವರಿಗೆ ಭಾರಿ ಕೈಗಾರಿಕೆ ಮತ್ತು ಉಕ್ಕು ನೀಡಿರುವುದು ರಾಜ್ಯದಲ್ಲಿ ಹೆಚ್ಚಿನ ಕೈಗಾರಿಕೆಗಳು ಸ್ಥಾಪನೆಯಾಗಲು ಅನುಕೂಲವಾಗಬಹುದು. ಹೆಚ್ಚಿನ ಬಂಡವಾಳ ಹರಿದುಬರುವ ನಿರೀಕ್ಷೆ ಹೊಂದಬಹುದು. ಮತ್ತೊಬ್ಬ ಸಂಪುಟ ದರ್ಜೆ ಸಚಿವ ಪ್ರಹ್ಲಾದ್ ಜೋಶಿ ಅವರಿಗೆ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆ, ನವೀಕರಿಸಬಹುದಾದ ಇಂಧನ ಖಾತೆ ನೀಡಲಾಗಿದೆ. ಈ ಪೈಕಿ ನವೀಕರಿಸಬಹುದಾದ ಇಂಧನ ಖಾತೆಯಿಂದ ರಾಜ್ಯದಲ್ಲಿ ಹೂಡಿಕೆಗೆ ಪ್ರೋತ್ಸಾಹ ಸಿಗಬಹುದು.ಇನ್ನು ರಾಜ್ಯ ದರ್ಜೆಯ ಶೋಭಾ ಕರಂದ್ಲಾಜೆ ಅವರಿಗೆ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆ, ಕಾರ್ಮಿಕ, ಉದ್ಯೋಗ ಖಾತೆಗಳು ಲಭಿಸಿವೆ. ಈ ಪೈಕಿ ರಾಜ್ಯದ ಸಣ್ಣ ಕೈಗಾರಿಕಾ ವಲಯಕ್ಕೆ ಹೆಚ್ಚಿನ ಪ್ರೋತ್ಸಾಹ ಹಾಗೂ ಬೆಂಬಲವನ್ನು ನಿರೀಕ್ಷಿಸಬಹುದಾಗಿದೆ. ಅದೇ ರೀತಿ ರಾಜ್ಯ ದರ್ಜೆಯ ಸೋಮಣ್ಣ ಅವರಿಗೆ ಜಲಶಕ್ತಿ ಮತ್ತು ರೈಲ್ವೆ ಖಾತೆಗಳು ಸಿಕ್ಕಿವೆ. ಸೋಮಣ್ಣ ಅವರ ಖಾತೆಗಳಿಂದ ರಾಜ್ಯಕ್ಕೆ ಹೆಚ್ಚಿನ ಅನುಕೂಲ ಸಿಗುವ ಸಾಧ್ಯತೆಯಿದೆ. ಜಲವಿವಾದಕ್ಕೆ ಸಂಬಂಧಿಸಿದಂತೆ ಪರಿಹಾರ ಸಿಗಬಹುದು. ನೆನೆಗುದಿಗೆ ಬಿದ್ದಿರುವ ರೈಲ್ವೆ ಯೋಜನೆಗಳಿಗೆ ತ್ವರಿತ ವೇಗ ನೀಡಲು ನೆರವಾಗುವ ಸಂಭವವಿದೆ.ಕುಮಾರಸ್ವಾಮಿ ಮತ್ತು ಜೋಶಿ ಅವರು ಸಂಪುಟ ದರ್ಜೆ ಸಚಿವರಾಗಿರುವುದರಿಂದ ಅವರ ಖಾತೆಗಳಲ್ಲಿ ಹೆಚ್ಚಿನ ಸ್ವಾತಂತ್ರ್ಯ ಇರುವುದರಿಂದ ರಾಜ್ಯಕ್ಕೆ ಸಂಬಂಧಿಸಿದಂತೆ ನಿರ್ಣಯಗಳನ್ನು ಕೈಗೊಳ್ಳುವಾಗ ಹೆಚ್ಚಿನ ಅಧಿಕಾರ ಇರಲಿದೆ. ಆದರೆ, ರಾಜ್ಯ ಖಾತೆ ಹೊಂದಿರುವ ಶೋಭಾ ಮತ್ತು ಸೋಮಣ್ಣ ಅವರಿಗೆ ಆ ಮಟ್ಟದ ಸ್ವಾತಂತ್ರ್ಯ ಸಿಗದೇ ಇರಬಹುದು. ಆದರೆ, ಸಚಿವರು ಮನಸ್ಸು ಮಾಡಿ ಬೆನ್ನು ಹತ್ತಿದರೆ ಅಸಾಧ್ಯವೇನೂ ಅಲ್ಲ.
ಒಳ್ಳೆಯ ಕೆಲಸ ಮಾಡಲು ಅವಕಾಶ ಇದೆ: ಸೋಮಣ್ಣಜಲಶಕ್ತಿ ಮತ್ತು ರೈಲ್ವೆ ರಾಜ್ಯ ಖಾತೆ ಸಚಿವರಾಗಿ ಒಳ್ಳೆಯ ಕೆಲಸ ಮಾಡಲು ಅವಕಾಶ ಇದೆ. ಎಲ್ಲವನ್ನೂ ಅಧ್ಯಯನ ಮಾಡುತ್ತೇನೆ ಎಂದು ಕೇಂದ್ರದ ನೂತನ ಸಚಿವ ವಿ.ಸೋಮಣ್ಣ ತಿಳಿಸಿದರು.
ದೆಹಲಿಯಲ್ಲಿ ಸೋಮವಾರ ಸುದ್ದಿಗಾರರ ಜತೆಗೆ ಮಾತನಾಡಿ, ಜಲಶಕ್ತಿ ಮತ್ತು ರೈಲ್ವೆ ಖಾತೆ ರಾಜ್ಯ ಸಚಿವರಾಗಿ ಮಂಗಳವಾರ ಅಧಿಕಾರ ಸ್ವೀಕರಿಸುವುದಾಗಿ ತಿಳಿಸಿದರು.ಮೋದಿ ಅವರು ನನಗೆ ಹೊಸ ಜವಾಬ್ದಾರಿ ನೀಡಿದ್ದಾರೆ. ಇದಕ್ಕೆ ನಾನು ಆಭಾರಿಯಾಗಿದ್ದೇನೆ. ಎಲ್ಲಾ ರಾಜ್ಯಗಳಲ್ಲೂ ತನ್ನದೇ ಆದ ಸಮಸ್ಯೆ ಇದೆ. ಎಲ್ಲವನ್ನೂ ಅಧ್ಯಯನ ಮಾಡುತ್ತೇನೆ ಎಂದರು.