ದ್ರಾಕ್ಷಿಗೆ ಬಂಪರ್ ಬೆಲೆ: ರೈತರ ಮೊಗದಲ್ಲಿ ಹರ್ಷ

KannadaprabhaNewsNetwork |  
Published : May 04, 2026, 01:15 AM IST
   ಸಿಕೆಬಿ-1 ದಿಲ್‌ಕುಷ್‌ ದ್ರಾಕ್ಷಿ    | Kannada Prabha

ಸಾರಾಂಶ

ಈ ಬಾರಿ ಮಾತ್ರ ವರ್ತಕರೇ ಬೆಳೆಗಾರರನ್ನು ನಾವೇ ಕಟಾವು ಮಾಡುತ್ತೇವೆ, ಬೇರೆ ಯಾರಿಗೂ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ಸತತ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದ ರೈತರು ಈ ಬಾರಿ ಉತ್ತಮ ಬೆಲೆ ಕಂಡು ಸಂತಸಗೊಂಡಿದ್ದಾರೆ.

ದಿಲ್‌ ಖುಷ್‌ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ । ತೋಟಗಳಿಗೆ ಭೇಟಿ ನೀಡಿ ಮುಂಗಡ ಖರೀದಿಗೆ ಇಳಿದ ವ್ಯಾಪಾರಸ್ಥರು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಈ ಬಾರಿ ದ್ರಾಕ್ಷಿಗೆ ಬಂಗಾರದಂಥ ಬೆಲೆ ಬರುವ ನಿರೀಕ್ಷೆ ಇದ್ದು, ವ್ಯಾಪಾರಸ್ಥರು ದ್ರಾಕ್ಷಿ ಬೆಳೆಗಾರರ ತೋಟಗಳಿಗೆ ಭೇಟಿ ನೀಡಿ ಮುಂಗಡ ಖರೀದಿಗೆ ಇಳಿದಿದ್ದಾರೆ.

ಕೆಲವು ತಳಿ ದ್ರಾಕ್ಷಿಗೆ ಮಿತಿಮೀರಿದ ಬೇಡಿಕೆ ಸೃಷ್ಟಿಯಾಗಿದ್ದು, ದ್ರಾಕ್ಷಿಗೆ ಒಳ್ಳೆಯ ಬೆಲೆ ಬಂದಿದೆ. ಕಳೆದ ಬಾರಿ ಬೆಲೆ ಕುಸಿತದಿಂದ ಕಂಗಾಲಾಗಿದ್ದ ಜಿಲ್ಲೆಯ ಬೆಳೆಗಾರರಿಗೆ ಈ ಬಾರಿ ದ್ರಾಕ್ಷಿ ಬೆಳೆ ಕೈ ಹಿಡಿದಿದೆ. ಅದರಲ್ಲೂ ದಿಲ್‌ ಖುಷ್‌ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಸಿಗುತ್ತಿರುವುದರಿಂದ ಬೆಳೆಗಾರರ ಮೊಗದಲ್ಲಿ ಹರ್ಷ ಕಂಡು ಬಂದಿದೆ.

ಇತ್ತೀಚಿನ ವರ್ಷಗಳಲ್ಲಿ ದ್ರಾಕ್ಷಿ ಬೆಲೆ ತೀವ್ರ ಕುಸಿತದಿಂದ ರೈತರೇ ವರ್ತಕರ ಬಳಿ ಹೋಗಿ ದ್ರಾಕ್ಷಿ ಕಟಾವಿಗೆ ಗೊಗರೆಯಬೇಕಾಗಿತ್ತು. ಆದರೆ ಈ ಬಾರಿ ಮಾತ್ರ ವರ್ತಕರೇ ಬೆಳೆಗಾರರನ್ನು ನಾವೇ ಕಟಾವು ಮಾಡುತ್ತೇವೆ, ಬೇರೆ ಯಾರಿಗೂ ಕೊಡಬೇಡಿ ಎಂದು ಹೇಳುತ್ತಿದ್ದಾರೆ. ಸತತ ಬೆಲೆ ಇಳಿಕೆಯಿಂದ ಕಂಗಾಲಾಗಿದ್ದ ರೈತರು ಈ ಬಾರಿ ಉತ್ತಮ ಬೆಲೆ ಕಂಡು ಸಂತಸಗೊಂಡಿದ್ದಾರೆ.

ರಾಜ್ಯದಲ್ಲಿ ಸುಮಾರು 20 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ದ್ರಾಕ್ಷಿ ಬೆಳೆಯಲಾಗುತ್ತದೆ. ಹೆಚ್ಚಾಗಿ ಏಪ್ರಿಲ್‌, ಮೇ ಮತ್ತು ಜೂನ್ ತಿಂಗಳಲ್ಲಿ ಅತಿ ಹೆಚ್ಚು ದ್ರಾಕ್ಷಿ ಕಟಾವಿಗೆ ಬರಲಿದೆ. ನೆರೆಯ ರಾಜ್ಯಗಳಿಗೆ ಬಹುಪಾಲು ದ್ರಾಕ್ಷಿ ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಬೆಳಗಾವಿ ಜಿಲ್ಲೆಗಳಿಂದ ಮಾರಾಟವಾಗುತ್ತದೆ.

ದ್ರಾಕ್ಷಿ ಬೆಳೆಯುವುದರಲ್ಲಿ ರಾಜ್ಯದ ಗಮನ ಸೆಳೆದಿರುವ ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸದ್ಯ ಸಾವಿರಾರು ಹೆಕ್ಟೇರ್‌ ಪ್ರದೇಶದಲ್ಲಿ ಹೂ, ಹಣ್ಣು, ತರಕಾರಿ ಬೆಳೆದಂತೆ ದ್ರಾಕ್ಷಿ ಬೆಳೆ ಕೂಡ ಬೆಳೆಯಲಾಗುತ್ತಿದೆ. ವಿವಿಧ ತಳಿಯ ದ್ರಾಕ್ಷಿ ಕೆಜಿ 40 ರಿಂದ ಹಿಡಿದು 140 ರು.ವರೆಗೂ ಮಾರಾಟ ಆಗುತ್ತಿವೆ. ಈಗಾಗಲೇ ಜಿಲ್ಲೆಯಲ್ಲಿ ಇರಾನ್‌ ಹಾಗೂ ಅಮೆರಿಕ ಮತ್ತು ಇಸ್ರೇಲ್‌ ನಡುವಿನ ಯುದ್ಧದ ಪರಿಣಾಮ ರೈತರು ಬೆಳೆದ ಆಲೂಗಡ್ಡೆ ಹಾಗೂ ಬೆಂಗಳೂರು ಗುಲಾಬಿ ಈರುಳ್ಳಿ ವಿದೇಶಗಳಿಗೆ ರಫ್ತು ಆಗದೇ ಬೆಲೆ ಕುಸಿತದಿಂದ ಕಂಗಾಲಾಗಿದ್ದಾರೆ.

ಆದರೆ ದ್ರಾಕ್ಷಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗುತ್ತಿರುವುದು ದ್ರಾಕ್ಷಿ ಬೆಳೆಗಾರರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಕಳೆದ ವರ್ಷ ದಿಲ್‌ ಖುಷ್‌ ಕೆಜಿ 25, 30 ರು.ಗೆ ಮಾರಾಟಗೊಂಡಿತ್ತು. ಆದರೆ ಈ ವರ್ಷ ಕೆಜಿ 40 ರು.ಗೆ ಮಾರಾಟ ಆಗುತ್ತಿದೆ. ಸದ್ಯ ಸಿಗುತ್ತಿರುವ ಬೆಲೆ ರೈತರಿಗೆ ಲಾಭವೇ ಹೊರತು ನಷ್ಟವಲ್ಲ. ಆದರೆ ಆಲಿಕಲ್ಲು ಹಾಗೂ ಅಕಾಲಿಕ ಮಳೆ ಬೀಳಬಾರದು ಅಷ್ಟೇ ಎನ್ನುತ್ತಾರೆ ದ್ರಾಕ್ಷಿ ಬೆಳೆಗಾರರಾದ ಮರಳುಕುಂಟೆ ಕೃಷ್ಣಮೂರ್ತಿ ಮತ್ತು ಅಜ್ಜವಾರ ಗ್ರಾಮದ ಕೆ.ಆರ್.ರೆಡ್ಡಿ.

ಚಿಕ್ಕಬಳ್ಳಾಪುರ ತಾಲೂಕಿನ ರೈತರ ದ್ರಾಕ್ಷಿ ತೋಟಗಳತ್ತ ಕಣ್ಣಾಯಿಸಿ ನೋಡಿದರೆ ಗೊಂಚಲು ಗೊಂಚಲು ಕಟ್ಟಿರುವ ದ್ರಾಕ್ಷಿ ಗೊನೆಗಳು ಕಣ್ಣಿಗೆ ರಾಚುತ್ತವೆ. ಉತ್ತಮ ಫಸಲು ಬಂದಿದ್ದು ಅಲ್ಲಲ್ಲಿ ಕಟಾವು ಕೂಡ ಶುರುವಾಗಿದೆ. ಆದರೆ ರೈತರಿಗೆ ಆಲಿಕಲ್ಲು ಹಾಗೂ ಅಕಾಲಿಕ ಮಳೆಯದ್ದೇ ಆತಂಕವಾಗಿದೆ. ಕಳೆದ ಮಾರ್ಚ್ ಮತ್ತು ಎಪ್ರಿಲ್ ತಿಂಗಳ ಅಂತ್ಯದಲ್ಲಿ ಬಿದ್ದ ಆಲಿಕಲ್ಕು ಸಹಿತ ಬಿರುಗಾಳಿ ಮಳೆಗೆ ಅಪಾರ ಪ್ರಮಾಣದ ದ್ರಾಕ್ಷಿ ನೆಲಕಚ್ಚಿ ರೈತರಿಗೆ ಅಪಾರ ಆರ್ಥಿಕ ನಷ್ಟ ಉಂಟು ಮಾಡಿತು. ಇದೀಗ ಮಾರುಕಟ್ಟೆಯಲ್ಲಿ ಉತ್ತಮ ಬೆಲೆ ಇದ್ದು ಇತಂಹ ಸಂದರ್ಭದಲ್ಲಿ ಮತ್ತೆ ಅಕಾಲಿಕ ಮಳೆ ಅಥವ ಆಲಿಕಲ್ಲು ಮಳೆ ಬಿದ್ದರೆ ದ್ರಾಕ್ಷಿಗೆ ಹೆಚ್ಚು ಪೆಟ್ಟು ಬೀಳುತ್ತದೆ.

ಜಿಲ್ಲೆಯಲ್ಲಿ ಹೆಚ್ಚಾಗಿ ದಿಲ್‌ಕುಷ್‌, ಆರ್‌ಕೆ ಗೋಲ್ಡ್‌, ಸೋನಾಕಾ, ರೆಡ್‌ ಬ್ಲೂ, ಶರತ್‌, ಸೀಡ್‌ಲೆಸ್‌ ಹೀಗೆ ನಾನಾ ತಳಿಯ ದ್ರಾಕ್ಷಿ ಬೆಳೆಯುತ್ತಾರೆ. ಸದ್ಯಕ್ಕೆ ದಿಲ್‌ ಖುಷ್‌ ತಳಿಗೆ 40 ರು., ಶರತ್‌ ತಳಿಗೆ 100 ರು., ಸರಿತಾ ಕೃಷ್ಣ ತಳಿಗೆ 120 ರು. ರೆಡ್‌ ಗ್ಲೋಬ್ -140 ರಿಂದ 150 ರು.ವರೆಗೂ ಮಾರಾಟವಾಗುತ್ತಿದೆ. ಈ ತಳಿಯ ದ್ರಾಕ್ಷಿ ಬೆಳೆಗಾರರ ಬಳಿ ವರ್ತಕರು ತೆರಳಿ ಮುಂಗಡ ಖರೀದಿ ಮಾಡುತ್ತಿದ್ದಾರೆ. ಆಗಿನ ಮಾರುಕಟ್ಟೆ ದರದಂತೆ ಕಟಾವು ಮಾಡುವ ಭರವಸೆಯನ್ನು ನೀಡುತ್ತಿದ್ದಾರೆ.

ಸಿಕೆಬಿ-1 ದಿಲ್‌ಕುಷ್‌ ದ್ರಾಕ್ಷಿ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನವ ಧರ್ಮದ ನೆಲೆಗಟ್ಟಿನ ಮೇಲೆ ಬದುಕು ಸಾಗಿಸಿ: ಶಿವಸಿದ್ದೇಶ್ವರ ಶ್ರೀ
ಕಾಗದರಹಿತ ನೋಂದಣಿ ವ್ಯವಸ್ಥೆ ತಕ್ಷಣ ಸ್ಥಗಿತಗೊಳಿಸಿ