ಮಂಜುನಾಥ ಕೆ.ಎಂ.
ಓದುವ ಸಂಸ್ಕೃತಿ ಬೆಳೆಸುವ ಉದ್ದೇಶದಿಂದ ಸಾರ್ವಜನಿಕ ಗ್ರಂಥಾಲಯ ಇಲಾಖೆ ಜಾರಿಗೆ ತಂದಿರುವ ಯೋಜನೆಯ ಭಾಗವಾಗಿ ಜನಸಂಚಾರ ಹೆಚ್ಚಿರುವ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಗ್ರಂಥಾಲಯ ಆರಂಭಿಸಿದೆ.
ಬಸ್ಗಾಗಿ ಕಾಯುವ ಸಮಯ ಬಹುತೇಕ ಜನರಿಗೆ ನಿರರ್ಥಕವಾಗುತ್ತದೆ. ಕೆಲವರು ಮೊಬೈಲ್ನಲ್ಲಿ ತೊಡಗಿಕೊಂಡರೆ, ಇನ್ನೂ ಕೆಲವರು ಸುಮ್ಮನೆ ಸಮಯ ಕಳೆಯುತ್ತಾರೆ. ಆದರೀಗ ಬಳ್ಳಾರಿಯ ಕೇಂದ್ರ ಬಸ್ ನಿಲ್ದಾಣದಲ್ಲಿ ಪ್ರಯಾಣಿಕರು ಪುಸ್ತಕ, ದಿನಪತ್ರಿಕೆ, ವಾರಪತ್ರಿಕೆ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಮಾಹಿತಿ ಓದುತ್ತಿರುವ ದೃಶ್ಯ ಸಾಮಾನ್ಯವಾಗಿದೆ.ಸಾಹಿತ್ಯ, ಇತಿಹಾಸ, ವಿಜ್ಞಾನ, ಕೃಷಿ, ಆರೋಗ್ಯ, ಮಕ್ಕಳ ಕಥೆಗಳು, ಕಾದಂಬರಿಗಳು ಸೇರಿದಂತೆ ವಿವಿಧ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳನ್ನು ವ್ಯವಸ್ಥಿತವಾಗಿ ಇಲ್ಲಿ ಇಡಲಾಗಿದೆ. ಅಲ್ಲದೆ ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳ ಜೊತೆಗೆ ಹಲವು ಮಾಸಪತ್ರಿಕೆಗಳೂ ಲಭ್ಯವಿದ್ದು, ಪ್ರಯಾಣಿಕರು ಆಸಕ್ತಿಯಿಂದ ಓದುತ್ತಿದ್ದಾರೆ.
ಬಸ್ ನಿಲ್ದಾಣದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಿಂದ ಪ್ರತಿದಿನ ಸಾವಿರಾರು ವಿದ್ಯಾರ್ಥಿಗಳು ಬಳ್ಳಾರಿಗೆ ಬರುತ್ತಾರೆ. ತರಗತಿಗಳಿಗೆ ತೆರಳುವ ಮುನ್ನ ಅಥವಾ ಮನೆಗೆ ಮರಳುವ ವೇಳೆಯಲ್ಲಿ ಅವರು ಇಲ್ಲಿ ಸ್ವಲ್ಪ ಸಮಯ ಕಳೆಯುವ ಮೂಲಕ ಉಪಯುಕ್ತ ಮಾಹಿತಿಯನ್ನು ಪಡೆಯುತ್ತಿದ್ದಾರೆ. ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ ಈ ಗ್ರಂಥಾಲಯ ಹೆಚ್ಚು ಅನುಕೂಲಕರವಾಗಿದೆ. ಕೆಲ ವಿದ್ಯಾರ್ಥಿಗಳು ಪ್ರತಿದಿನ ಬಸ್ ಬರುವ ವರೆಗೂ ಇಲ್ಲೇ ಕುಳಿತು ಓದುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ.
ಡಿಜಿಟಲ್ ಯುಗದಲ್ಲಿ ಪುಸ್ತಕ ಓದುವ ಅಭ್ಯಾಸ ಕಡಿಮೆಯಾಗುತ್ತಿದೆ ಎಂಬ ಆತಂಕದ ನಡುವೆ, ಸಾರ್ವಜನಿಕ ಸ್ಥಳದಲ್ಲೇ ಗ್ರಂಥಾಲಯ ಆರಂಭಿಸಿರುವುದು ಮಹತ್ವದ ಹೆಜ್ಜೆಯಾಗಿದೆ. ಮೊಬೈಲ್ ಮತ್ತು ಸಾಮಾಜಿಕ ಜಾಲತಾಣಗಳ ನಡುವೆ ಸಿಲುಕಿರುವ ಇಂದಿನ ತಲೆಮಾರಿಗೆ ಪುಸ್ತಕಗಳ ಮಹತ್ವವನ್ನು ಪರಿಚಯಿಸುವ ಈ ಕಾರ್ಯ ಗಮನ ಸೆಳೆದಿದೆ.