ಗಣಿಜಿಲ್ಲೆ ಬಳ್ಳಾರಿಯಲ್ಲಿ ಬಸ್ ಮುಷ್ಕರ ಬಿಸಿ!

KannadaprabhaNewsNetwork |  
Published : Aug 05, 2025, 11:45 PM IST
ಸಾರಿಗೆ ನೌಕರರ ಮುಷ್ಕರ ಹಿನ್ನೆಲೆಯಲ್ಲಿ ಬಳ್ಳಾರಿಯ ಬಸ್ ನಿಲ್ದಾಣ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು.  | Kannada Prabha

ಸಾರಾಂಶ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಬಸ್‌ ಮುಷ್ಕರ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಭಾಗಶಃ ಯಶಸ್ವಿಯಾಗಿದೆ.

ಸಾರಿಗೆ ನೌಕರರ ಮುಷ್ಕರ ಭಾಗಶಃ ಯಶಸ್ವಿ; ಪ್ರಯಾಣಿಕರ ಸೇವೆಗೆ ಮುಂದಾದ ಖಾಸಗಿ ವಾಹನಗಳು

ಸೇವೆಯಿಂದ ದೂರ ಉಳಿದ ನೌಕರರು; ಶಾಲಾ-ಕಾಲೇಜು ವಿದ್ಯಾರ್ಥಿಗಳು ಪರದಾಟ

ಬಸ್‌ ಮುಷ್ಕರದಿಂದ ವ್ಯಾಪಾರ ವಹಿವಾಟಿಗೂ ಕುತ್ತು

ರೈಲುಗಳ ಮೊರೆ ಹೋದ ಪ್ರಯಾಣಿಕರು; ಆಸ್ಪತ್ರೆಗಳಿಗೆ ದ್ವಿಚಕ್ರ ವಾಹನ, ಖಾಸಗಿ ವಾಹನದಲ್ಲಿ ಬಂದರು

ಖಾಸಗಿ ಬಸ್‌ಗಳಿಗೆ ರೇಟ್ ಕಾರ್ಡ್ ನೀಡಿದ ಜಿಲ್ಲಾಡಳಿತ; ಹೆಚ್ಚು ಹಣ ವಸೂಲಿ ಮಾಡಿದರೆ ಕ್ರಮದ ಎಚ್ಚರಿಕೆಕನ್ನಡಪ್ರಭ ವಾರ್ತೆ ಬಳ್ಳಾರಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿರುವ ಬಸ್‌ ಮುಷ್ಕರ ಗಣಿ ಜಿಲ್ಲೆ ಬಳ್ಳಾರಿಯಲ್ಲಿ ಭಾಗಶಃ ಯಶಸ್ವಿಯಾಗಿದೆ.

ಮುಷ್ಕರ ಹಿನ್ನೆಲೆ ಬಹುತೇಕ ಸಾರಿಗೆ ನೌಕರರು ಸೇವೆಯಿಂದ ದೂರ ಉಳಿದರು. ಬಸ್‌ಗಳು ಡಿಪೋ ಸೇರಿದವು. ಪ್ರಯಾಣಿಕರ ಅನುಕೂಲಕ್ಕಾಗಿ ಕೆಲ ಸಾರಿಗೆ ಬಸ್‌ಗಳು ಹಾಗೂ ಖಾಸಗಿ ಬಸ್‌ಗಳಿಗೆ ಸೇವೆ ನೀಡಲು ಜಿಲ್ಲಾಡಳಿತ ಅವಕಾಶ ನೀಡಿತ್ತು. ಆದರೆ, ಪ್ರಯಾಣಿಕರಿಲ್ಲದೆ ಖಾಸಗಿ ವಾಹನಗಳು ನಿಲ್ದಾಣದ ಬಳಿಯೇ ಬೀಡುಬಿಟ್ಟಿದ್ದವು. ಕೆಲವೊಂದು ಖಾಸಗಿ ವಾಹನಗಳಲ್ಲಿ ಮಾತ್ರ ಒಂದಷ್ಟು ಜನ ಪ್ರಯಾಣಿಕರು ಕಂಡು ಬಂದರು. ಸಾರಿಗೆ ನೌಕರರ ಮುಷ್ಕರದ ಬಿಸಿ ಬಳ್ಳಾರಿಯಿಂದ ಆಂಧ್ರಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಿಗೆ ಸಾರಿಗೆ ಸೇವೆ ನೀಡುವ ಬಸ್‌ಗಳಿಗೂ ತಟ್ಟಿತು. ಬಸ್‌ ನಿಲ್ದಾಣಗಳಲ್ಲಿ ಆಂಧ್ರ ಸಾರಿಗೆ ಸಂಸ್ಥೆಯ ಬಸ್‌ಗಳು ಸೇವೆಗೆ ಸಜ್ಜಾಗಿದ್ದರೂ ಪ್ರಯಾಣಿಕರು ಇರಲಿಲ್ಲ. ಆಂಧ್ರಪ್ರದೇಶದ ಗಡಿ ಭಾಗದ ಗ್ರಾಮಗಳ ನಡುವೆ ಬಳ್ಳಾರಿ ಜಿಲ್ಲೆಯ ಜನರ ವೈವಾಹಿಕ ಹಾಗೂ ವ್ಯಾಪಾರ ಸಂಬಂಧಗಳಿದ್ದು ನಿತ್ಯ ಆಂಧ್ರ, ತೆಲಂಗಾಣ ರಾಜ್ಯದ ಗಡಿ ಭಾಗಗಳಿಗೆ ನಿತ್ಯ ಸಾವಿರಾರು ಜನರು ಪ್ರಯಾಣಿಸುತ್ತಾರೆ. ಆದರೆ, ಕರ್ನಾಟಕ ಸಾರಿಗೆ ಬಸ್‌ಗಳ ಮುಷ್ಕರದಿಂದಾಗಿ ಬಳ್ಳಾರಿ ನಗರದತ್ತ ಪ್ರಯಾಣಿಕರು ಸುಳಿಯಲಿಲ್ಲ. ಹೀಗಾಗಿ ಬಸ್‌ಗಳು ಜನರಿಲ್ಲದೆ ಬಿಕೋ ಎಂದವು. ಬಸ್‌ ಮುಷ್ಕರದಿಂದಾಗಿ ನಿತ್ಯ ಗ್ರಾಮೀಣ ಪ್ರದೇಶಗಳಿಂದ ಶಾಲಾ-ಕಾಲೇಜುಗಳಿಗೆ ಬರುವ ವಿದ್ಯಾರ್ಥಿಗಳು ಪರದಾಡಿದರು.

ಹೊಸಪೇಟೆ, ತೋರಣಗಲ್, ಕೊಪ್ಪಳ, ಗದಗ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ತೆರಳಬೇಕಾದ ಪ್ರಯಾಣಿಕರು ಬಸ್‌ ಮುಷ್ಕರದಿಂದಾಗಿ ರೈಲುಗಳ ಮೊರೆ ಹೋದರು. ಹೀಗಾಗಿ ರೈಲ್ವೆ ನಿಲ್ದಾಣದಲ್ಲಿ ಹೆಚ್ಚಿನ ಜನಸಂದಣಿ ಕಂಡು ಬಂತು. ಹಂಪಿ ಎಕ್ಸ್‌ಪ್ರೆಸ್, ಹರಿಪ್ರಿಯಾ ರೈಲಿನಲ್ಲಿ ಹೆಚ್ಚಿನ ಜನರು ಪ್ರಯಾಣ ಮಾಡಿದರು.

ಖಾಸಗಿ ಬಸ್‌ಗಳಿಂದ ಹೆಚ್ಚಿನ ವಸೂಲಿಗಿಲ್ಲ ಅವಕಾಶ:

ಮುಷ್ಕರ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ಆರ್‌ಟಿಒ ಅಧಿಕಾರಿಗಳು, ಕರ್ನಾಟಕ ಸಾರಿಗೆ ಇಲಾಖೆ ಅಧಿಕಾರಿಗಳು ಜತೆ ಜಿಲ್ಲಾಡಳಿತ ಸಭೆ ನಡೆಸಿ, ಮುಂಜಾಗ್ರತೆ ಕ್ರಮ ಕೈಗೊಂಡಿತು. ಸರ್ಕಾರ ಸೂಚನೆಯಂತೆ ಖಾಸಗಿ ಬಸ್‌ಗಳ ಸೇವೆಗೆ ಅವಕಾಶ ಕಲ್ಪಿಸಲು ಸಭೆಯಲ್ಲಿ ನಿರ್ಧರಿಸಲಾಯಿತು. ಆದರೆ, ಖಾಸಗಿ ವಾಹನಗಳು ಮುಷ್ಕರ ನೆಪದಲ್ಲಿ ಪ್ರಯಾಣಿಕರಿಂದ ಹೆಚ್ಚಿನ ದರ ವಸೂಲಿ ಮಾಡದಂತೆ ರೇಟ್‌ ಕಾರ್ಡ್ ನೀಡಲಾಯಿತು. ಏತನ್ಮಧ್ಯೆ ಸಾರಿಗೆ ಇಲಾಖೆ ಅಧಿಕಾರಿಗಳು ಕೆಲ ಚಾಲಕರು ಹಾಗೂ ನಿರ್ವಾಹಕರ ಮನವೊಲಿಸಿ ಬಸ್‌ಗಳ ಓಡಾಟಕ್ಕೆ ಅವಕಾಶ ಕಲ್ಪಿಸಿದರು. ಬೆಳಗ್ಗೆಯಿಂದ ಸಿರುಗುಪ್ಪ, ಕುರುಗೋಡು, ಕಂಪ್ಲಿ, ಮೋಕಾ, ಆದೋನಿ, ಸಂಡೂರು, ಗಂಗಾವತಿ ಸೇರಿದಂತೆ ವಿವಿಧೆಡೆ ಒಂದಷ್ಟು ಬಸ್‌ಗಳು ಓಡಾಟಕ್ಕೆ ಆಸ್ಪದ ಮಾಡಿಕೊಟ್ಟರಾದರೂ ಪ್ರಯಾಣಿಕರು ಇರಲಿಲ್ಲ.

ಈ ಕುರಿತು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ ಸಾರಿಗೆ ಇಲಾಖೆ ಅಧಿಕಾರಿಗಳು ಮುಷ್ಕರದಿಂದ ಜನಸಾಮಾನ್ಯರಿಗೆ ಸಮಸ್ಯೆಯಾಗಬಾರದು ಎಂಬ ಕಾರಣಕ್ಕಾಗಿ ಖಾಸಗಿ ಬಸ್‌ಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. 82 ಖಾಸಗಿ ಬಸ್‌ಗಳು, 42 ಕ್ರೂಸರ್, 8 ಮ್ಯಾಕ್ಸಿಕ್ಯಾಬ್, 8 ಟಾಂಟಾಂ ಸೇರಿದಂತೆ ಒಟ್ಟು 140 ಖಾಸಗಿ ವಾಹನಗಳು, 113 ಸಾರಿಗೆ ಬಸ್‌ಗಳು, 28 ಎಪಿಎಸ್‌ಆರ್‌ಟಿಸಿ (ಆಂಧ್ರಸಾರಿಗೆ ಬಸ್‌ಗಳು), ಒಟ್ಟು 281 ಬಸ್‌ಗಳು ಓಡಾಟಕ್ಕೆ ಅನುವು ಮಾಡಿಕೊಡಲಾಗಿದೆ ಎಂದು ತಿಳಿಸಿದರು.

ವ್ಯಾಪಾರ ವಹಿವಾಟು ಮೇಲೆ ಹೊಡೆತ:

ಸಾರಿಗೆ ನೌಕರರ ಬಸ್‌ ಮುಷ್ಕರದಿಂದಾಗಿ ನಗರದಲ್ಲಿ ಎಂದಿನಂತೆ ವ್ಯಾಪಾರ ವಹಿವಾಟು ನಡೆಯಲಿಲ್ಲ. ಹೊರಗಡೆಯಿಂದ ಬರುವ ಜನರನ್ನೇ ಹೆಚ್ಚಾಗಿ ಆಶ್ರಯಿಸಿರುವ ಆರ್ಥಿಕ ವಹಿವಾಟು ಭಾಗಶಃ ಕುಸಿತವಾಗಿತ್ತು.

ಹೀಗಾಗಿ ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ಬೆಂಗಳೂರು ರಸ್ತೆ, ಬ್ರಾಹ್ಮಣಬೀದಿ, ಕಾಳಮ್ಮಬೀದಿ, ಗಾಂಧಿನಗರ, ಕಪ್ಪಗಲ್ಲು ರಸ್ತೆ, ತಾಳೂರು ರಸ್ತೆ, ಟ್ಯಾಂಕ್‌ಬಂಡ್ ರಸ್ತೆ, ಗ್ಲಾಸ್ ಬಜಾರ್, ಇನ್‌ಫ್ಯಾಂಟ್ರಿ ರೋಡ್ ಪ್ರದೇಶಗಳು ವ್ಯಾಪಾರವಿಲ್ಲದೆ ಬಿಕೋ ಎಂದವು. ಅನೇಕ ಅಂಗಡಿ ಮುಂಗಟ್ಟುಗಳು ವ್ಯಾಪಾರ ಇಲ್ಲದೆ ಮಧ್ಯಾಹ್ನದ ಹೊತ್ತಿಗೆ ಬಂದ್ ಮಾಡಿಕೊಂಡಿದ್ದವು. ಸಿನಿಮಾ, ಹೋಟೆಲ್ ಗಳಲ್ಲಿ ಎಂದಿನ ಜನ ಸಂದಣಿ ಕಂಡು ಬರಲಿಲ್ಲ. ಬೀದಿ ಬದಿಯ ವ್ಯಾಪಾರಿಗಳಿಗೂ ಮುಷ್ಕರದ ಬಿಸಿ ತಟ್ಟಿರುವುದು ಕಂಡು ಬಂತು.

ನಗರದ ಜಿಲ್ಲಾಸ್ಪತ್ರೆಗೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗೆ ತುರ್ತಾಗಿ ಬರಬೇಕಿದ್ದವರು ಖಾಸಗಿ ವಾಹನ ಹಾಗೂ ದ್ವಿಚಕ್ರ ವಾಹನದಲ್ಲಿ ಬಂದರು. ಸಾರಿಗೆ ಬಸ್‌ಗಳಿಂದ ನಿತ್ಯ ಉಚಿತ ಸೇವೆ ಪಡೆಯುವ ಮಹಿಳೆಯರು ಮುಷ್ಕರದಿಂದಾಗಿ ಖಾಸಗಿ ವಾಹನಗಳ ಮೊರೆ ಹೋದರು. ಮುಷ್ಕರ ಹಿನ್ನಲೆಯಲ್ಲಿ ಬಸ್‌ ನಿಲ್ದಾಣಗಳ ಬಳಿ ಪೊಲೀಸ್ ಬಂದೋಬಸ್ತ್ ಇತ್ತು. ಯಾವುದೇ ಅಹಿತಕರ ಘಟನೆ ಜರುಗದಂತೆ ಜಿಲ್ಲಾ ಪೊಲೀಸ್ ಇಲಾಖೆ ಮುನ್ನೆಚ್ಚರಿಕೆ ವಹಿಸಿತ್ತು.

ಹೋರಾಟ ನಿಲ್ಲೋದಿಲ್ಲ:

ವೇತನ ಪರಿಷ್ಕರಣೆಗೆ ಹಿಂದೇಟು ಹಾಕಿರುವ ಮುಖ್ಯಮಂತ್ರಿಗಳ ಧೋರಣೆ ಖಂಡಿಸಿ ಕರೆ ನೀಡಿರುವ ಮುಷ್ಕರ ಸಂಪೂರ್ಣ ಯಶಸ್ವಿಯಾಗಿದ್ದು, ನಮ್ಮ ಹೋರಾಟದಿಂದ ಜನರಿಗೆ ತೊಂದರೆಯಾಗಿದ್ದಲ್ಲಿ ಅದಕ್ಕೆ ಸರ್ಕಾರವೇ ಹೊಣೆ ಎಂದು ಕ.ರಾ.ರ.ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯ ಉಪಾಧ್ಯಕ್ಷ ಕೆ.ಎ. ಆದಿಮೂರ್ತಿ ತಿಳಿಸಿದರು. ಕನ್ನಡಪ್ರಭ ಜತೆ ಮಾತನಾಡಿದ ಅವರು, ಸಾರಿಗೆ ನೌಕರರ ಹೋರಾಟಕ್ಕೆ ಇಡೀ ರಾಜ್ಯದ ಜನತೆಯ ಸಹಕಾರ ಸಿಕ್ಕಿದೆ. ಸರ್ಕಾರ ತನ್ನ ಮೊಂಡುತನ ಪ್ರದರ್ಶಿಸಿದರೆ ಹೋರಾಟ ಮುಂದುವರಿಯಲಿದೆ. ನಮ್ಮ ಬೇಡಿಕೆಗಳನ್ನು ಸರ್ಕಾರ ಈಡೇರಿಸುವವರಿಗೆ ಬಸ್‌ಗಳು ರಸ್ತೆಗಿಳಿಯುವುದಿಲ್ಲ ಎಂದು ತಿಳಿಸಿದರು. ಮನವೊಲಿಕೆ..................

ಬಸ್‌ ಮುಷ್ಕರದ ನಡುವೆ ಪ್ರಯಾಣಿಕರಿಗೆ ಅನಾನುಕೂಲವಾಗದಿರಲಿ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಚಾಲಕರು ಹಾಗೂ ನಿರ್ವಾಹಕರಿಗೆ ಮನವೊಲಿಸುವ ಕೆಲಸ ಮುಂದುವರಿಸಿದ್ದಾರೆ. ನೌಕರರ ಪೈಕಿ ಬಹುತೇಕರು ಮುಷ್ಕರದಲ್ಲಿ ಭಾಗಿಯಾಗಿದ್ದು ಹೊಸದಾಗಿ ಗುತ್ತಿಗೆ ಆಧಾರದ ಮೇಲೆ ನೇಮಕಗೊಂಡಿರುವ ನೌಕರರ ಮನವೊಲಿಸುತ್ತಿರುವ ಅಧಿಕಾರಿಗಳು, ಹೋರಾಟ ಮಾಡುವವರು ಮಾಡಲಿ. ಇದರ ನಡುವೆ ಪ್ರಯಾಣಿಕರಿಗೆ ಎಷ್ಟು ಸಾಧ್ಯವೋ ಅಷ್ಟು ಅನುಕೂಲ ಮಾಡಿಕೊಡೋಣ ಎಂದು ಅಧಿಕಾರಿಗಳು ಮನವೊಲಿಕೆಯಲ್ಲಿ ತೊಡಗಿದ್ದಾರೆ. ಮನೆಯಲ್ಲಿರುವ ಚಾಲಕ, ನಿರ್ವಾಹಕರಿಗೆ ಕರೆ ಮಾಡಿ ಸೇವೆಗೆ ಬರುವಂತೆ ಅಧಿಕಾರಿಗಳು ಮನವಿ ಮಾಡಿಕೊಳ್ಳುತ್ತಿದ್ದಾರೆ.

PREV

Recommended Stories

ಲಕ್ಷ್ಮಿ ಹಬ್ಬದ ಸಂದರ್ಭದಲ್ಲಿ ಗೃಹಲಕ್ಷ್ಮೀ ಯರಿಗೆ ಇಲ್ಲಿದೆ ಸಿಹಿ ಸುದ್ದಿ
''ಪ್ರಜ್ವಲ್‌ ಬಚಾವ್‌ಗೆ ಆತನ ಪೋಷಕರು ತಂತ್ರ ಮಾಡಿದ್ರು ''