ಎಲ್ಲ ರೈತರ ಮೆಕ್ಕೆಜೋಳ ಬೆಂಬಲ ಬೆಲೆಯಡಿ ಖರೀದಿಸಿ: ಶಿವಾನಂದ ಇಟಗಿ

KannadaprabhaNewsNetwork |  
Published : Dec 30, 2025, 02:45 AM IST
ಮುಂಡರಗಿಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಸರ್ಕಾರ ಎಲ್ಲ ರೈತರ ಮೆಕ್ಕೆಜೋಳ ಖರೀದಿಸುವಂತೆ ಮುಂದಿನ 7ರಿಂದ 15 ದಿನಗಳಲ್ಲಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ತಾಲೂಕಿನ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮುಂಡರಗಿ: ಸರ್ಕಾರ ಮೆಕ್ಕಜೋಳವನ್ನು ಸಂಪೂರ್ಣವಾಗಿ ಖರೀದಿ ಮಾಡಬೇಕು. ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕು. ರಸ್ತೆ ದುರಸ್ತಿ, ಪ್ರತಿ ಗ್ರಾಮಗಳಲ್ಲಿಯೂ ಕಣಗಳ ನಿರ್ಮಾಣ, ಕಡಲೆ ಖರೀದಿ ಕೇಂದ್ರ ಸ್ಥಾಪಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘದಿಂದ ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡ ಶಿವಾನಂದ ಇಟಗಿ ಮಾತನಾಡಿ, ಚುನಾವಣೆ ಬಂದಾಗ ರೈತರೇ ದೇಶದ ಬೆನ್ನೆಲುಬು ಎಂದು ಭಾಷಣ ಮಾಡುವ ರಾಜಕಾರಣಿಗಳು ನಂತರ ರೈತರ ಬೆನ್ನುಮೂಳೆಯನ್ನೇ ಮುರಿಯುತ್ತಾರೆ. ಮುಂಡರಗಿ ತಾಲೂಕಿನಲ್ಲಿ ಕೇವಲ 450 ಜನ ರೈತರ ಮೆಕ್ಕೆಜೋಳ ಖರೀದಿಸಲು ಸರ್ಕಾರ ಆದೇಶಿಸಿದ್ದು, ಕೇವಲ ಶಿರೋಳ ಗ್ರಾಮದಲ್ಲಿ ಅಷ್ಟೇ 1600ರಿಂದ 1800 ಚೀಲ ಮೆಕ್ಕೆಜೋಳ ಬೆಳೆದಿದ್ದಾರೆ. ರೈತರು ಸಾಕಷ್ಟು ಖರ್ಚು ಮಾಡಿಕೊಂಡು ಬೆಳೆದಿದ್ದು, ಮಾರಾಟಕ್ಕೆ ಪರಿತಪಿಸುವ ಪರಿಸ್ಥಿತಿಯನ್ನು ಸರ್ಕಾರ ನಿರ್ಮಾಣ ಮಾಡಬಾರದು. ರೈತರಿಗೆ ರೋಗ ನಿರೋಧಕ ಶಕ್ತಿ ಇರುವಂತಹ ಬಿತ್ತನೆ ಬೀಜಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.

ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ವೀರನಗೌಡ ಪಾಟೀಲ ಮಾತನಾಡಿ, ಸರ್ಕಾರ ಎಲ್ಲ ರೈತರ ಮೆಕ್ಕೆಜೋಳ ಖರೀದಿಸುವಂತೆ ಮುಂದಿನ 7ರಿಂದ 15 ದಿನಗಳಲ್ಲಿ ಆದೇಶ ಹೊರಡಿಸಬೇಕು. ಇಲ್ಲದಿದ್ದರೆ ತಾಲೂಕಿನ ರೈತರೊಂದಿಗೆ ಬೀದಿಗಿಳಿದು ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ರೈತ ಮುಖಂಡ ಶರಣಪ್ಪ ಕಂಬಳಿ ಮಾತನಾಡಿ, ಸರ್ಕಾರ ಕೆಲವೇ ಕೆಲವು ಕ್ವಿಂಟಲ್ ಮೆಕ್ಕೆಜೋಳ ಖರೀದಿಸುವ ಮೂಲಕ ರೈತರ ಮೂಗಿಗೆ ತುಪ್ಪ ಹಚ್ಚಲು ಮುಂದಾಗಿದೆ. ಇದನ್ನು ನಿಲ್ಲಿಸಿ ರೈತರಿಗೆ ನಿಜವಾದ ನ್ಯಾಯವನ್ನು ದೊರಕಿಸಿ ಕೊಡಬೇಕು ಎಂದರು.

ಸರ್ಕಾರವು ಸಂಪೂರ್ಣವಾಗಿ ಮೆಕ್ಕೆಜೋಳ ಖರೀದಿ ಮಾಡಬೇಕು. ಆನ್‌ಲೈನ್‌ನಲ್ಲಿ ಕೇವಲ 1600ರಿಂದ 1800 ರೈತರಿಂದ ಮಾತ್ರ ಅರ್ಜಿ ಪಡೆಡಿದೆ. ಇನ್ನುಳಿದ ರೈತರ ಮೆಕ್ಕೆಜೋಳವನ್ನು ಖರೀದಿ ಮಾಡದೇ ಹೋದರೆ ಪ್ರತಿ ಕ್ವಿಂಟಲ್‌ಗೆ ಸರ್ಕಾರ ₹800ರಂತೆ ಪ್ರೋತ್ಸಾಹಧನ ನೀಡಬೇಕು. ಶೀಘ್ರವೇ ಕಡಲೆ ಖರೀದಿ ಕೇಂದ್ರ ಪ್ರಾರಂಭಿಸಬೇಕು ಎಂದು ಒತ್ತಾಯಿಸಿದರು.

ತಹಸೀಲ್ದಾರರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಚಂದ್ರಪ್ಪ ಬಳ್ಳಾರಿ, ಹುಚ್ಚಪ್ಪ ಹಂದ್ರಾಳ, ಗುಡದಪ್ಪ ಕರಿಗಾರ, ದೇವೇಂದ್ರಪ್ಪ ಹಳ್ಳಿ, ಭೀಮಣ್ಣ ಆರೇರ್, ಹನುಮಂತಪ್ಪ ನಿಟ್ಟಾಲಿ, ಶೇಖಪ್ಪ ಮೈನಳ್ಳಿ, ಮಾರುತಿ ನಾಗಣ್ಣವರ, ಎಚ್.ಆರ್. ಜಮಾದಾರ್, ಅಂದಪ್ಪ ವಾಲಿಕಾರ, ಲಕ್ಷ್ಮಣ ಪೂಜಾರ, ಸಿದ್ದಲಿಂಗಪ್ಪ ಅಳವಂಡಿ, ಮುದಿಯಪ್ಪ ಗೌಡ್ರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಿ ಭೂಮಿ ಒತ್ತುವರಿಗೆ ಅವಕಾಶ ನೀಡಲ್ಲ: ಡಿಸಿಎಂ
ಏಕಾದಶಿ ಪ್ರಯುಕ್ತ ಶರವಣ ಟ್ರಸ್ಟ್‌ನಿಂದ ಲಕ್ಷ ಲಡ್ಡು ಹಂಚಿಕೆ