ಕನ್ನಡಪ್ರಭ ವಾರ್ತೆ ಮುಧೋಳ
ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಸಾಗಣೆ ಸರಾಗಗೊಳಿಸುವ ಮತ್ತು ನಗರದ ದಟ್ಟಣೆ ನಿವಾರಿಸುವ ಉದ್ದೇಶದಿಂದ ಬೈಪಾಸ್ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಹೇಳಿದರು.ಲೋಕೋಪಯೋಗಿ ಇಲಾಖೆಯಿಂದ ₹12 ಕೋಟಿ ಅನುದಾನದಲ್ಲಿ ಬೈಪಾಸ್ ರಸ್ತೆ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಅವರು, ಈ ಯೋಜನೆ ಯರಗಟ್ಟಿ ಬಬಲೇಶ್ವರ ರಸ್ತೆ (55) ಮತ್ತು ಮುಧೋಳ ನಿಪ್ಪಾಣಿ (18) ರಾಜ್ಯ ಹೆದ್ದಾರಿ ಸಂಪರ್ಕಿಸುತ್ತದೆ. ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಅಲ್ಲದೇ ಇತರೆ ಸಾಗಣೆಯನ್ನು ಸಾರಿಗೆಗೆ ಸುವ್ಯವಸ್ಥಿತಗೊಳಿಸುತ್ತದೆ. ಕಬ್ಬು ಸಾಗಾಣಿಕೆಗೆ ಕಡಿಮೆ ವೆಚ್ಚದಲ್ಲಿ ಈ ರಸ್ತೆ ರೈತರಿಗೆ ಹೆಚ್ಚು ಅನುಕೂಲವಾಗುತ್ತದೆ. ಅಲ್ಲದೇ ಸುಧಾರಿತ ರಸ್ತೆ ಸುರಕ್ಷತೆ, ಕಡಿಮೆ ಟ್ರಾಫಿಕ್ನಿಂದಾಗಿ ಅಪಘಾತಗಳ ಪ್ರಮಾಣ ಮತ್ತು ಅಪಾಯ ಕಡಿಮೆ ಆಗಬಹುದಾಗಿದೆ ಎಂದರು.
ಕಳೆದ 25 ವರ್ಷದ ಹಿಂದೆ ಎಪಿಎಂಸಿ ಮಂತ್ರಿ ಆಗಿದ್ದಾಗಿನಿಂದ ಕನಸಾಗಿತ್ತು. ನೀವು ಮತ ನೀಡಿ ನನ್ನನ್ನು ಗೆಲ್ಲಿಸಿರುವುದಕ್ಕೆ ಅಭಿವೃದ್ಧಿ ಕಾರ್ಯ ಮಾಡಲು ಸಾಧ್ಯವಾಗಿದೆ. ಬೈಪಾಸ್ ರಸ್ತೆಗೆ 7.27 ಎಕರೆ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಭೂಮಿ ನೀಡಿದ ಎಲ್ಲ ರೈತರಿಗೂ ಪರಿಹಾರ ಕೂಡ ಒದಗಿಸಲಾಗಿದೆ ಎಂದು ಹೇಳಿದರು.ಬೈಪಾಸ್ ರಸ್ತೆಗೆ ಭೂಮಿ ನೀಡಿದ ಸದಾಶಿವ ಕದಂ, ಶಾಂತವ ಹೊಸಮನಿ, ಯುವರಾಜ ಘೋರ್ಪಡೆ ರೈತರನ್ನು ಸನ್ಮಾನಿಸಿ, ಗೌರವಿಸಿದರಲ್ಲದೆ ರೈತರು ಕೂಡ ಸಚಿವರನ್ನು ಸನ್ಮಾನಿಸಿದರು. ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಶೋಕ ಕಿವಡಿ, ನಗರಸಭೆ ಅಧ್ಯಕ್ಷೆ ಸುನಂದಾ ತೇಲಿ, ಉಪಾಧ್ಯಕ್ಷ ಮಹಿಬೂಬ ಬಾಗವಾನ, ಕಾಂಗ್ರೆಸ್ ಮುಖಂಡರಾದ ಗೋವಿಂದಪ್ಪ ಗುಜ್ಜನವರ, ಶಿವಾನಂದ ಉದಪುಡಿ, ರಾಘು ಮೋಕಾಸಿ, ಪಿಡಬ್ಲ್ಯೂಡಿ ಅಧಿಕಾರಿ ಚನ್ನಬಸವ ಮಾಚನೂರ, ತಹಸೀಲ್ದಾರ್ ಮಹಾದೇವ ಸನಮುರಿ, ಸಿಪಿಐ ಮಾಹಾದೇವ ಶಿರಹಟ್ಟಿ, ತಾಪಂ ಇಒ ಉಮೇಶ ಶಿದ್ನಾಳ ಸೇರಿದಂತೆ ಅನೇಕ ರೈತರು ಉಪಸ್ಥಿತರಿದ್ದರು.