ಲೋಕ್ ಅದಾಲತ್ ನಲ್ಲಿ ನ್ಯಾಯ ಬಗೆಹರಿಸಿಕೊಳ್ಳಲು ಕರೆ

KannadaprabhaNewsNetwork | Published : Jun 25, 2025 11:47 PM

ವಕೀಲರು ಮತ್ತು ಇಲಾಖೆಯ ಅಧಿಕಾರಿಗಳು, ಆರ್ಥಿಕ ಸಂಸ್ಥೆಯವರು ವ್ಯಾಪಕ ಪ್ರಚಾರ ಮಾಡಿ ಸಹಕರಿಸಬೇಕು

ಯಲ್ಲಾಪುರ: ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವಂತಹ ಎಲ್ಲ ಚೆಕ್ ಬೌನ್ಸ್ ಪ್ರಕರಣ, ವೈವಾಹಿಕ ಪ್ರಕರಣ, ಮೋಟಾರು ವಾಹನದ ಅಪಘಾತ ಪರಿಹಾರದ ಪ್ರಕರಣ, ಭೂ ಸ್ವಾಧೀನ ಪ್ರಕರಣ, ರಾಜಿ ಆಗುವಂತಹ ಎಲ್ಲ ಸಿವಿಲ್, ಕ್ರಿಮಿನಲ್ ಪ್ರಕರಣ, ವ್ಯಾಜ್ಯಪೂರ್ವ ಪ್ರಕರಣ ಸಂಧಾನ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಜು.12ರಂದು ರಾಷ್ಟ್ರೀಯ ಲೋಕ್ ಅದಾಲತ್ ಮೂಲಕ ವೇದಿಕೆಯನ್ನು ಕಲ್ಪಿಸಿ ಕೊಡಲಾಗಿದೆ ಎಂದು ನ್ಯಾಯಾಧೀಶ ಕುಮಾರ್ ಎಸ್. ಹೇಳಿದರು.

ಪಟ್ಟಣದ ನ್ಯಾಯಾಲಯದಲ್ಲಿ ವಿವಿದ ಇಲಾಖೆಯ ಅಧಿಕಾರಿಗಳು ಮತ್ತು ಆರ್ಥಿಕ ಸಂಸ್ಥೆಯ ಪ್ರತಿನಿಧಿಗಳು ಮತ್ತು ವಕೀಲರೊಂದಿಗೆ ಲೋಕ್ ಅದಾಲತ್ ನ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಸಿವಿಲ್ ನ್ಯಾಯಾಧೀಶೆ ಅನಿತಾಕುಮಾರಿ ಮಾತನಾಡಿ, ಅದಾಲತ್‌ನಲ್ಲಿ ಭಾಗವಹಿಸಿ ನ್ಯಾಯಾಲಯದಲ್ಲಿ ಇರುವ ಬಾಕಿ ಪ್ರಕರಣವನ್ನು ಸಂಧಾನದಿಂದ ಇತ್ಯರ್ಥಪಡಿಸಿಕೊಳ್ಳುವ ಮೂಲಕ ಸಮಯ ಮತ್ತು ಹಣದ ಉಳಿತಾಯ ಮಾಡಿಕೊಳ್ಳಬೇಕು. ಇದಕ್ಕೆ ವಕೀಲರು ಮತ್ತು ಇಲಾಖೆಯ ಅಧಿಕಾರಿಗಳು, ಆರ್ಥಿಕ ಸಂಸ್ಥೆಯವರು ವ್ಯಾಪಕ ಪ್ರಚಾರ ಮಾಡಿ ಸಹಕರಿಸಬೇಕು ಎಂದು ಹೇಳಿದರು.

ಪಿ.ಐ. ರಮೇಶ ಹಾನಾಪುರ, ಆರ್‌ಎಫ್‌ಒ ನರೇಶ ಜಿ.ವಿ., ವಕೀಲರ ಸಂಘದ ಅಧ್ಯಕ್ಷ ವಿ.ಟಿ. ಭಟ್ಟ, ಕಾರ್ಯದರ್ಶಿ ನಾಗರಾಜ ಎಂ.ಬಿ., ಎಪಿಪಿ ಜೀನತ್ ಬಾನು, ಎಜಿಪಿ ಎನ್.ಟಿ. ಗಾಂವ್ಕರ್, ಪ್ಯಾನಲ್ ವಕೀಲೆ ಬಿಬಿ ಅಮೀನಾ ಶೇಖ, ಹಿರಿಯ ವಕೀಲರಾದ ವಿ.ಪಿ. ಭಟ್ಟ ಕಣ್ಣಿ, ಕೆ.ಎನ್.ಹೆಗಡೆ, ಎಂ.ಕೆ. ಹೆಗಡೆ, ಧನಂಜಯ ಭಟ್ಟ, ಪ್ರಕಾಶ ಭಟ್ಟ, ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ತಾಲೂಕು ಪಂಚಾಯಿತಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪಟ್ಟಣ ಪಂಚಾಯಿತಿ, ಶಿಕ್ಷಣ ಇಲಾಖೆ ಹಾಗೂ ಆರ್ಥಿಕ ಸಂಸ್ಥೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು.

ಯಲ್ಲಾಪುರ ಪಟ್ಟಣದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ ಕುರಿತು ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.