ಭತ್ತದ ಬೆಳೆಗೂ ನೀರು ಬೇಕು ಮತ್ತು ಜನ-ಜಾನುವಾರುಗಳಿಗೂ ಕುಡಿಯಲು ನೀರು ಬೇಕು. ರೈತರ ಸಮಸ್ಯೆಯನ್ನು ನಾನು ಅರಿತಿದ್ದೇನೆ. ಐದಾರು ದಿನ ಕಾಲುವೆ ನೀರು ಅನವಶ್ಯಕವಾಗಿ ಪೋಲಾಗದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳಿಗೆ ಸಚಿವ ಶಿವರಾಜ ತಂಗಡಗಿ ಹೇಳಿದರು.
ಕಾರಟಗಿ:
ಕಟಾವು ಹಂತಕ್ಕೆ ಬಂದ ಬೆಳೆಗೆ ಸೇರಿದಂತೆ ಜನ-ಜಾನುವಾರುಗಳಿಗೆ ಕುಡಿಯುವ ನೀರನ್ನು ವ್ಯರ್ಥವಾಗಿ ಪೋಲಾಗದಂತೆ ನಿರ್ವಹಣೆ ಮಾಡಬೇಕಾದ ಕಠಿಣ ಪರಿಸ್ಥಿತಿ ಅಧಿಕಾರಿಗಳ ಮೇಲಿದ್ದು, ಜನರ ಮನವಿಗೆ ಸಕರಾತ್ಮವಾಗಿ ಸಂದಿಸಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಸೂಚಿಸಿದರು.
ಇಲ್ಲಿನ ಗೃಹ ಕಚೇರಿಯಲ್ಲಿ ಅವರು ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಹಸೀಲ್ದಾರ್ ಹಾಗೂ ನೀರಾವರಿ ಮತ್ತು ಪೊಲೀಸ್ ಅಧಿಕಾರಿಗಳ ಸಭೆಯಲ್ಲಿ ಕುಡಿಯುವ ನೀರು ನಿರ್ವಹಣೆ ಕುರಿತು ಸಭೆ ನಡೆಸಿ ಮಾತನಾಡಿದರು.
ಭತ್ತದ ಬೆಳೆಗೂ ನೀರು ಬೇಕು ಮತ್ತು ಜನ-ಜಾನುವಾರುಗಳಿಗೂ ಕುಡಿಯಲು ನೀರು ಬೇಕು. ರೈತರ ಸಮಸ್ಯೆಯನ್ನು ನಾನು ಅರಿತಿದ್ದೇನೆ. ಐದಾರು ದಿನ ಕಾಲುವೆ ನೀರು ಅನವಶ್ಯಕವಾಗಿ ಪೋಲಾಗದಂತೆ ನಿಗಾವಹಿಸಬೇಕು ಎಂದರು.
ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಇಳಿಕೆಯಾಗಿದೆ. ಆದರೆ, ನಮ್ಮ ಭಾಗದಲ್ಲಿ ಬೇಸಿಗೆ ಬೆಳೆಗೆ ಭತ್ತ ನಾಟಿ ಮಾಡಿರುವ ರೈತರಿಗೆ ನೀರನ ಅವಶ್ಯಕತೆ ಇದೆ.
ಎಡದಂಡೆ ಕಾಲುವೆಗೆ ಏ. ೧೦ರ ವರೆಗೆ ನೀರು ಒದಗಿಸಲು ಎಲ್ಲ ರೀತಿಯ ಕ್ರಮಕೈಗೊಳ್ಳಲಾಗಿದೆ. ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಅನವಶ್ಯಕವಾಗಿ ಲೋಪವಾಗದಂತೆ ಬಳಕೆ ಮಾಡಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ ನೀಡಿದೆ. ಈಗಾಗಲೇ ಕಾಲುವೆ ಮೇಲ್ಭಾಗದಲ್ಲಿ ಬೆಳೆ ರೈತರ ಕೈ ಸೇರಿದೆ. ಆದರೆ, ಕೆಳ ಭಾಗದ ರೈತರ ಬೆಳೆಗೆ ಕೆಲವು ದಿನಗಳ ಕಾಲ ನೀರಿನ ಅವಶ್ಯಕತೆ ಇದೆ. ಈಗ ನೀರು ಹರಿಸಿ ನಿರ್ವಹಣೆ ಮಾಡಲು ಸಾಕಷ್ಟು ಶ್ರಮಿಸಬೇಕೆಂದರು.
ನೀರು ಕೊರತೆಯಾಗುತ್ತಿರುವ ಕುರಿತು ರೈತರು ೩೧ನೇ ವಿತರಣಾ ಕಾಲುವೆ ಮೇಲೆ ಪ್ರತಿಭಟನೆ ನಡೆಸಿದ್ದಾರೆ. ಹೀಗಾಗಿ ರೈತರಿಗೂ ಮತ್ತು ಕುಡಿಯುವ ನೀರಿಗೂ ತೊಂದರೆಯಾಗದಂತೆ ನಿರ್ವಹಣೆ ಮಾಡಬೇಕು. ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾಲುವೆ ನೀರಿನ ನಿರ್ವಹಣೆಗೆ ಮುಂದಾಗಬೇಕು ಎಂದು ಸೂಚಿಸಿದ ಸಚಿವರು, ಭತ್ತದ ಬೆಳೆ ಈಗಾಗಲೇ ಕಟಾವಿಗೆ ಬರುತ್ತಿದೆ. ಭತ್ತದ ಬೆಳೆ ರೈತರ ಕೈ ಸೇರುವವರೆಗೂ ಈ ಭಾಗದಲ್ಲಿ ಮಳೆ, ಗಾಳಿ ಬರದಂತೆ ದೇವರಲ್ಲಿ ಪ್ರಾರ್ಥಿಸಬೇಕು ಎಂದು ಸಚಿವರು ಹೇಳಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.