ಕ್ಯಾನ್ಸರ್ ಎಂಬುದು ಜೀವನದ ಕೊನೆಯ ಅಧ್ಯಾಯವಲ್ಲ

KannadaprabhaNewsNetwork |  
Published : Jun 07, 2026, 01:30 AM IST
ಪೊಟೋ: 06ಎಸ್‌ಎಂಜಿಕೆಪಿ03 | Kannada Prabha

ಸಾರಾಂಶ

ಕ್ಯಾನ್ಸರ್ ಎಂಬುದು ಜೀವನದ ಕೊನೆಯ ಅಧ್ಯಾಯವಲ್ಲ. ಸೂಕ್ತ ಚಿಕಿತ್ಸೆ, ವೈದ್ಯರ ಮೇಲಿನ ನಂಬಿಕೆ, ಕುಟುಂಬದ ಬೆಂಬಲ ಮತ್ತು ದೃಢ ಮನೋಬಲದಿಂದ ಅದನ್ನು ಜಯಿಸಿ ಆರೋಗ್ಯಕರ ಜೀವನ ನಡೆಸಬಹುದು ಎಂಬ ಸಂದೇಶ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ‘ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ ಡೇ’ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಕ್ಯಾನ್ಸರ್ ಎಂಬುದು ಜೀವನದ ಕೊನೆಯ ಅಧ್ಯಾಯವಲ್ಲ. ಸೂಕ್ತ ಚಿಕಿತ್ಸೆ, ವೈದ್ಯರ ಮೇಲಿನ ನಂಬಿಕೆ, ಕುಟುಂಬದ ಬೆಂಬಲ ಮತ್ತು ದೃಢ ಮನೋಬಲದಿಂದ ಅದನ್ನು ಜಯಿಸಿ ಆರೋಗ್ಯಕರ ಜೀವನ ನಡೆಸಬಹುದು ಎಂಬ ಸಂದೇಶ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ನಡೆದ ‘ರಾಷ್ಟ್ರೀಯ ಕ್ಯಾನ್ಸರ್ ಸರ್ವೈವರ್ ಡೇ’ ಕಾರ್ಯಕ್ರಮದಲ್ಲಿ ಪ್ರತಿಧ್ವನಿಸಿತು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್‌ನ್ನು ಯಶಸ್ವಿಯಾಗಿ ಎದುರಿಸಿ ಬದುಕು ಗೆದ್ದ ಸರ್ವೈವರ್‌ಗಳು ಅವರ ಅನುಭವಗಳನ್ನು ಹಂಚಿಕೊಳ್ಳುವ ಮೂಲಕ ರೋಗಿಗಳಲ್ಲಿ ಆತ್ಮವಿಶ್ವಾಸ ತುಂಬಲಾಯಿತು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಡಾ. ಉತ್ತಮ ಶರ್ಮಾ ಮಾತನಾಡಿ, ಕ್ಯಾನ್ಸರ್ ರೋಗನಿರ್ಣಯವಾದ ತಕ್ಷಣ ಬದುಕಿನ ಬಗ್ಗೆ ನಿರಾಶರಾಗುವ ಅಗತ್ಯವಿಲ್ಲ. ಸರಿಯಾದ ಸಮಯದಲ್ಲಿ ಚಿಕಿತ್ಸೆ ಪಡೆದರೆ ಕ್ಯಾನ್ಸರ್‌ನಿಂದ ಗುಣಮುಖರಾಗಲು ಸಾಧ್ಯ ಎಂಬುದಕ್ಕೆ ಸಾವಿರಾರು ಸರ್ವೈವರ್‌ಗಳ ಬದುಕು ಸಾಕ್ಷಿಯಾಗಿದೆ ಎಂದು ಹೇಳಿದರು.

ಕ್ಯಾನ್ಸರ್ ಚಿಕಿತ್ಸೆಯು ಸುದೀರ್ಘ ಪ್ರಕ್ರಿಯೆಯಾಗಿದ್ದು, ಈ ಅವಧಿಯಲ್ಲಿ ಕುಟುಂಬದವರ ಬೆಂಬಲ ಮತ್ತು ರೋಗಿಯ ಮನೋಬಲ ಅತ್ಯಂತ ಪ್ರಮುಖ ಪಾತ್ರ ವಹಿಸುತ್ತದೆ. ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಳೆದ ಹಲವು ವರ್ಷಗಳಲ್ಲಿ 10 ಸಾವಿರಕ್ಕೂ ಹೆಚ್ಚು ಕ್ಯಾನ್ಸರ್ ರೋಗಿಗಳು ಯಶಸ್ವಿಯಾಗಿ ಚಿಕಿತ್ಸೆ ಪಡೆದು ಸರ್ವೈವರ್‌ಗಳಾಗಿದ್ದಾರೆ ಎಂದು ತಿಳಿಸಿದರು.

ವಿಕಿರಣ ಆಂಕೊಲಾಜಿಸ್ಟ್ ಡಾ. ರವಿ ನಡಹಳ್ಳಿ ಮಾತನಾಡಿ, ಕ್ಯಾನ್ಸರ್ ಸರ್ವೈವರ್‌ಗಳ ಬದುಕು ಸಮಾಜಕ್ಕೆ ಸ್ಫೂರ್ತಿಯಾಗಿದೆ. ಚಿಕಿತ್ಸೆಯ ಸಮಯದಲ್ಲಿ ಎದುರಾಗುವ ದೈಹಿಕ ಮತ್ತು ಮಾನಸಿಕ ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ಅತ್ಯಗತ್ಯ ಎಂದರು.

ಕಳೆದ ಎರಡು ದಶಕಗಳಲ್ಲಿ ಕ್ಯಾನ್ಸರ್ ಚಿಕಿತ್ಸಾ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳಾಗಿದ್ದು, ಐಎಂಆರ್‌ಟಿ, ಐಜಿಆರ್‌ಟಿ ಹಾಗೂ ಪ್ರೋಟಾನ್ ಥೆರಪಿಯಂತಹ ಅತ್ಯಾಧುನಿಕ ತಂತ್ರಜ್ಞಾನಗಳಿಂದ ಚಿಕಿತ್ಸೆಯ ನಿಖರತೆ ಹೆಚ್ಚಿದ್ದು, ಅಡ್ಡಪರಿಣಾಮಗಳು ಗಣನೀಯವಾಗಿ ಕಡಿಮೆಯಾಗಿವೆ ಎಂದು ಹೇಳಿದರು.

ಮೆಡಿಕಲ್ ಆಂಕೊಲಾಜಿಸ್ಟ್ ಡಾ. ಅಪರ್ಣಾ ಶ್ರೀವತ್ಸ ಮಾತನಾಡಿ, ಕ್ಯಾನ್ಸರ್ ವಿರುದ್ಧದ ಹೋರಾಟದಲ್ಲಿ ಚಿಕಿತ್ಸೆ ಮಾತ್ರವಲ್ಲ, ರೋಗಿಯ ಮನಸ್ಥಿತಿ ಮತ್ತು ವೈದ್ಯರ ಮೇಲಿನ ನಂಬಿಕೆಯೂ ಮಹತ್ವದ್ದಾಗಿದೆ ಎಂದರು.

ಚಿಕಿತ್ಸೆಯ ಸಂದರ್ಭದಲ್ಲಿ ನಕಾರಾತ್ಮಕ ಚಿಂತನೆಗಳಿಂದ ದೂರವಿದ್ದು, ಆತ್ಮವಿಶ್ವಾಸ ಮತ್ತು ಆಶಾವಾದವನ್ನು ಉಳಿಸಿಕೊಳ್ಳುವುದು ಅಗತ್ಯ. ಚಿಕಿತ್ಸೆ ಪೂರ್ಣಗೊಂಡ ಬಳಿಕವೂ ನಿಯಮಿತ ಆರೋಗ್ಯ ತಪಾಸಣೆಗಳನ್ನು ಮಾಡಿಸಿಕೊಳ್ಳುವುದು ಮುಖ್ಯ ಎಂದು ಸಲಹೆ ನೀಡಿದರು.

ಹೆಡ್ ಅಂಡ್ ನೆಕ್ ಆಂಕೊ ಸರ್ಜನ್ ಡಾ. ದೀಪಕ್ ಕಿತ್ತೂರು ಮಾತನಾಡಿ, ಬಾಯಿ ಕ್ಯಾನ್ಸರ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.

ಪುರುಷರಲ್ಲಿ ಬಾಯಿ ಕ್ಯಾನ್ಸರ್ ಪ್ರಮುಖ ಕ್ಯಾನ್ಸರ್‌ಗಳಲ್ಲಿ ಒಂದಾಗಿದ್ದು, ಆರಂಭಿಕ ಹಂತದಲ್ಲಿಯೇ ಪತ್ತೆ ಹಚ್ಚಿ ಚಿಕಿತ್ಸೆ ಪಡೆದರೆ ದೀರ್ಘಕಾಲೀನ ಬದುಕು ಸಾಧ್ಯವಾಗುತ್ತದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು 8 ರಿಂದ 12 ವರ್ಷಗಳಿಗೂ ಹೆಚ್ಚು ಕಾಲ ಆರೋಗ್ಯವಂತರಾಗಿ ಬದುಕುತ್ತಿರುವ ಅನೇಕ ರೋಗಿಗಳು ಇದ್ದಾರೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಸರ್ವೈವರ್ ದೇವ ತಮ್ಮ ಅನುಭವ ಹಂಚಿಕೊಂಡು, 2012ರಲ್ಲಿ ಮಿಡ್‌ರೆಕ್ಟಲ್ ಕ್ಯಾನ್ಸರ್ ಪತ್ತೆಯಾದ ಬಳಿಕ ಲಿವರ್ ಹಾಗೂ ಶ್ವಾಸಕೋಶ ಸಂಬಂಧಿತ ಸಮಸ್ಯೆಗಳನ್ನು ಎದುರಿಸಿ ಒಟ್ಟು ಆರು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದರೂ, ವೈದ್ಯರ ಮಾರ್ಗದರ್ಶನ, ಕುಟುಂಬದ ಬೆಂಬಲ ಮತ್ತು ದೃಢ ಮನೋಬಲದಿಂದ ಬದುಕಿನಲ್ಲಿ ಮತ್ತೆ ಮುನ್ನಡೆಯಲು ಸಾಧ್ಯವಾಯಿತು ಎಂದರು.

ಮತ್ತೋರ್ವ ಸರ್ವೈವರ್ ಸುರೇಶ ಮಾತನಾಡಿ, ಕ್ಯಾನ್ಸರ್ ಎಂಬುದು ಭಯಪಡುವ ಕಾಯಿಲೆಯಲ್ಲ. ಸಮಯಕ್ಕೆ ಸರಿಯಾಗಿ ರೋಗ ಪತ್ತೆ, ವೈದ್ಯರ ಸಲಹೆ ಪಾಲನೆ ಹಾಗೂ ಸೂಕ್ತ ಚಿಕಿತ್ಸೆಯಿಂದ ರೋಗವನ್ನು ಜಯಿಸಬಹುದು ಎಂದು ತಿಳಿಸಿದರು.

ರೇಡಿಯೇಷನ್ ಆಂಕೋಲಜಿಸ್ಟ ಡಾ. ಸುದರ್ಶನ ಗುಪ್ತ, ಸರ್ಜಿಕಲ್ ಆಂಕೋಲಾಜಿಸ್ಟ್ ಡಾ.ಎಂ.ಎ. ವಿವೇಕ, ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಎಸ್‌.ಎನ್‌. ಶೈಲೇಶ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಉತ್ತಮ ಆರೋಗ್ಯಕ್ಕಾಗಿ ಗಿಡಗಳನ್ನು ಬೆಳೆಸಿ: ಮಹೇಶ್ ಕುಮಾರ್
ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಉಂಟಾಗಬೇಕು