ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಸುಮಾರು ೨೪೦ ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ್ದಾರೆ
ಮುಂಡಗೋಡ: ಇತ್ತೀಚೆಗೆ ತಾಲೂಕಿನ ಸಿಂಗನಳ್ಳಿ ಗ್ರಾಮದಲ್ಲಿ ದುಷ್ಕರ್ಮಿಗಳು ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಹಾನಿಗೊಳಗಾದ ರೈತರಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ ರಾಜ್ಯ ಅನ್ನದಾತ ರೈತ ಸಂಘ ಮತ್ತು ಹಸಿರು ಸೇನೆಯಿಂದ ಸೋಮವಾರ ಮುಂಡಗೋಡ ತಹಸೀಲ್ದಾರ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಕಾತೂರ ಗ್ರಾಪಂ ವ್ಯಾಪ್ತಿಯ ನಂದಿಪುರ ಗ್ರಾಮದ ರತ್ನಾ ಬಸವರಾಜ ಓಣಿಕೇರಿ ಅವರಿಗೆ ಸೇರಿದ ಸಿಂಗನಳ್ಳಿ ಗ್ರಾಮ ಸರ್ವೇ ನಂ ೩೫ ರಲ್ಲಿ ೩-೧೯-೦೦ ಜಮೀನಿನಲ್ಲಿ ಕಷ್ಟಪಟ್ಟು ಸುಮಾರು ೧೮೦೦ ಅಡಿಕೆ ಗಿಡಗಳನ್ನು ಬೆಳೆದಿದ್ದು, ಗಿಡಗಳು ಫಸಲು ಬಿಡುವ ಹಂತಕ್ಕೆ ತಲುಪಿದ್ದವು. ಈ ಸಂದರ್ಭದಲ್ಲಿ ದುಷ್ಕರ್ಮಿಗಳು ತೋಟಕ್ಕೆ ನುಗ್ಗಿ ಸುಮಾರು ೨೪೦ ಅಡಿಕೆ ಗಿಡಗಳನ್ನು ಕಡಿದು ನಾಶಪಡಿಸಿದ್ದಾರೆ. ಇದರಿಂದ ರೈತ ಮಹಿಳೆ ರತ್ನಾ ಬಸವರಾಜ ಓಣಿಕೇರಿ ಅವರಿಗೆ ತೀವ್ರ ಹಾನಿಯಾಗಿದ್ದು, ಈ ಬಗ್ಗೆ ತಾವುಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನ್ಯಾಯ ದೊರಕಿಸಿಕೊಡಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ರಾಜ್ಯ ಅನ್ನದಾತ ರೈತ ಸಂಘದ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ರತ್ನಾ ಬಸವರಾಜ ಓಣಿಕೇರಿ, ಸಂಜೀವ ಕೀರ್ತೆಪ್ಪನವರ, ಎಸ್.ಎಸ್ ಪಾಟೀಲ, ಮಾರಪ್ಪ ಕಾವಲಕೊಪ್ಪ, ದರ್ಶನ ವಡ್ಡರ, ಪರಮೆಶ ವಡ್ಡರ, ತಿಪ್ಪಣ್ಣ ಹರಿಜನ, ಮಹೇಶ ಓಣಿಕೇರಿ, ಬಸವರಾಜ ಓಣಿಕೇರಿ, ವೀರಪ್ಪ ವಡ್ಡರ ಉಪಸ್ಥಿತರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.