ಕನ್ನಡಪ್ರಭ ವಾರ್ತೆ ಮಹಾಲಿಂಗಪುರ(ರ-ಬ)
ಬ್ರಹ್ಮ ಜ್ಞಾನ ಪಡೆದ ಮತ್ತು ಜಾತಿ, ಧರ್ಮ, ಕುಲಗೋತ್ರ ನೋಡದೆ ತಮ್ಮ ಹತ್ತಿರ ಬರುವ ಸಾಧಕರಿಗೆ ಆತ್ಮ ಸಾಕ್ಷಾತ್ಕಾರ ಮಾಡಿಕೊಳ್ಳಲು ಸಹಕರಿಸುವವನೇ ನಿಜವಾದ ಗುರು ಎಂದು ಬೀದರ ಚಿದಂಬರಾಶ್ರಮದ ಡಾ.ಶಿವಕುಮಾರ ಮಹಾ ಸ್ವಾಮೀಜಿಗಳು ಭಕ್ತರಿಗೆ ಆಶಿರ್ವಚನ ನೀಡಿದರು.ಪಟ್ಟಣದ ಬನಶಂಕರಿದೇವಿ ದೇವಸ್ಥಾನದಲ್ಲಿ ಲಿಂಗೈಕ್ಯ ಬಸವಾನಂದ ಸ್ವಾಮೀಜಿ ೫೧ನೇ ವರ್ಷಗಳ ಪುಣ್ಯಾರಾಧನೆ ನಿಮಿತ್ತ ಜ.೧೪ ರಿಂದ ಐದು ದಿನಗಳ ವರೆಗೆ ನಡೆದ ವೇದಾಂತ ಪರಿಷತ್ ಕಾರ್ಯಕ್ರಮದ ಕೊನೆಯ ೧೮ರಂದು ಸಮಾರೋಪ ಪ್ರವಚನ ಕಾರ್ಯಕ್ರಮದಲ್ಲಿ ಲಿಂಗೈಕ್ಯ ಸಿದ್ಧಾರೂಢ ಶ್ರೀಗಳ ಉಪಕಾರ ಸ್ಮರಣೆ ವಿಷಯದ ಮೇಲೆ ಭಕ್ತರಿಗೆ ಆಶಿರ್ವಚನ ನೀಡಿದರು.
ಅವರು ನಾಮ ರೂಪದ ಚಶ್ಮಾ ತೆಗೆದು ಅಸ್ಥಿ, ಬಾತಿ ಮತ್ತು ಪ್ರೀಯ ಎಂಬ ಚಶ್ಮಾವನ್ನು ಗುರುವಿನಿಂದ ಪಡೆದಾಗ ಎತ್ತೆತ್ತ ನೋಡಿದತ್ತತ್ತ ನೀನೇ ದೇವ ಎಂಬ ಭಾವ ಆ ಸಾಧಕನ್ನಲ್ಲಿ ಮೂಡಿ ಆತ ಶ್ರೇಷ್ಠ ಆರೂಢನಾಗುತ್ತಾನೆ. ಜಾತ್ಯಾತೀತ ಗುರು ಸಿದ್ಧಾರೂಢರ ಅನೇಕ ಲೀಲೆಗಳು ಸಾಮಾಜಿಕ ತಾಮಸಗಳನ್ನು ಹೊಡೆದೋಡಿಸಿವೆ ಎಂದು ಶ್ರೀಗಳ ಪವಾಡಗಳನ್ನು ಕೊಂಡಾಡಿ ಅವರು ಪ್ರತಿಯೊಬ್ಬರಿಗೂ ಸಪ್ತಾಕ್ಷರಿ ಓಂ ನಮಃ ಶಿವಾಯವನ್ನು ಪಟಿಸಲು ಸಲಹೆ ನೀಡಿದ್ದಾರೆ. ಇದುವೆ ದೇವರನ್ನು ಮತ್ತು ಆತ್ಮ ಸಾಕ್ಷಾತ್ಕಾರಗೊಳಿಸಿಕ್ಕೊಳ್ಳುವ ಸರಳ ಮಂತ್ರವಾಗಿದೆ ಎಂದರು.ಸ್ಥಳೀಯ ಸಿದ್ಧಾರೂಢ ಮಠದ ಸಹಜಾನಂದ ಶ್ರೀಗಳು ಆಶೀರ್ವಚನ ನೀಡಿ, ಬ್ರಹ್ಮ ಜ್ಞಾನ ಪಡೆದು ಲೋಕೋದ್ಧಾರ ಮಾಡಲು ತಮ್ಮ ೧೪ನೇ ವಯಸ್ಸಿನಲ್ಲಿಯೇ ಡಾ.ಶಿವಕುಮಾರ ಸ್ವಾಮಿಗಳು ತಮ್ಮ ಮನೆ ತೊರೆದು ಶಿವಪುತ್ರ ಶ್ರೀಗಳಿಂದ ಅಧ್ಯಾತ್ಮ ಜ್ಞಾನ ಪಡೆದು ಸಿದ್ಧಾರೂಢರ ಜನ್ಮ ಸ್ಥಳ ಚಳಕಾಪೂರಕ್ಕೆ ಬಂದರು. ಅಂದು ಅಲ್ಲಿಯ ಭಕ್ತರು ಕೊಟ್ಟ ಎರಡು ಎಕರೆ ಇವತ್ತು ೧೨೦ ಎಕರೆ ಭೂಮಿಯಾಗಿ ಪರಿವರ್ತನೆಯಾಗಿ ಇದು ಶೈಕ್ಷಣಿಕ ಮತ್ತು ಆಧ್ಯಾತ್ಮಿಕ ಕೇಂದ್ರವಾಗಿ ಹೊರಹೊಮ್ಮಿ ಅನೇಕ ಜೀವಾತ್ಮರ ಬದುಕಿಗೆ ಮಾರ್ಗದರ್ಶಿಯಾಗಿದೆ ಎಂದರು.
ಹೊಸೂರಿನ ಪರಮಾನಂದ ಶ್ರೀಗಳು, ಮಾತೋಶ್ರೀ ಲಕ್ಷ್ಮಿದೇವಿ, ಸ್ಥಳೀಯ ಸಿದ್ಧಾರೂಢ ಮಠದ ಉತ್ತರಾಧಿಕಾರಿ ಸಿದ್ಧಾನಂದ ಭಾರತಿ ಶ್ರೀಗಳು ಸಿದ್ಧಾರೂಢರ ಬದುಕು ಎಲ್ಲರಿಗೂ ದಾರಿದೀಪ ದಂತೆ ಮಾರ್ಗ ತೋರುತ್ತಿದೆ ಎಂದರು. ಜಮಖಂಡಿ ಕ್ರಿಷ್ಣಾನಂದ ಅವಧೂತರು, ಸತೀಶ ಪೂಜ್ಯರು, ಸಿದ್ಧಾರೂಢ ಪೂಜ್ಯರು, ಮಾತೋಶ್ರೀ ವರದಾದೇವಿ ಮುಂತಾದವರು ಐದು ದಿನಗಳ ಪ್ರವಚನ ನೀಡಿದರು. ಭಾವೈಕ್ಯ ಶ್ರೀ ಪ್ರಶಸ್ತಿ ಪಡೆದ ಮೇಹಬೂಬ ಸನದಿ ಹಾಗೂ ಸಂಗಡಿಗರು ಐದು ದಿನಗಳವರೆಗೆ ಭಜನಾ ಕಾರ್ಯಕ್ರಮ ನಡೆಸಿಕೊಟ್ಟರು.ಪಟ್ಟಣದ ಅನೇಕ ಸಮುದಾಯ ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಶ್ರೀಗಳನ್ನು ಸತ್ಕರಿಸಿದರು. ಪ್ರವಚನ ಸಮಿತಿ ಪರವಾಗಿ ಶ್ರೀಗಳು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಅವರನ್ನು ಸನ್ಮಾನಿಸಿ ಆಶಿರ್ವದಿಸಿದರು. ಎಂ.ಎಂ.ಕಟಗಿ, ಡಾ.ಬಿ.ಡಿ.ಸೋರಗಾವಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಅಲ್ಲಪ್ಪ ಗುಂಜಿಗಾಂವಿ, ಮಲ್ಲಪ್ಪ ಭಾವಿಕಟ್ಟಿ, ಸಿ.ಬಿ.ಪಟ್ಟಣಶೆಟ್ಟಿ, ಲಕ್ಕಪ್ಪ ಚಮಕೇರಿ, ಯಲ್ಲಪ್ಪ ಹಟ್ಟಿ, ಪಿ.ಎಸ್.ಬೆಳಗಲಿ, ಕಲ್ಲಪ್ಪ ಚಿಂಚಲಿ, ಶಂಕರೆಪ್ಪ ಹಣಗಂಡಿ, ಶಿವು ತಾಳಿಕೋಟಿ, ಎಂ.ಪಿ.ಅಂಗಡಿ ಇದ್ದರು. ಬಸವಾನಂದ ಜಿಟ್ಟಿ, ಶಿವನಗೌಡ ಪಾಟೀಲ, ಶ್ರೀಶೈಲ ನುಚ್ಚಿ, ಅಲ್ಲಪ್ಪ ಗುಂಜಿಗಾಂವಿ, ಡಾ.ಬಿ.ಡಿ.ಸೋರಗಾವಿ, ಲಕ್ಕಪ್ಪ ಚಮಕೇರಿ, ಸದಾಶಿವ ಇಂಗಳಗಿ, ಶಾರದಾ ನಕಾತಿ ಇವರು ಸರದಿಯಂತೆ ಪ್ರತಿ ದಿವಸ ಪ್ರಸಾದ ವ್ಯವಸ್ಥೆ ಮಾಡಿದರು. ಪ್ರಾಚಾರ್ಯ ಎಸ್.ಎಂ.ಮುಗಳಖೋಡ ಸ್ವಾಗತಿಸಿ, ಹುಮಾಯೂನ್ ಇಬ್ರಾಹಿಂ ಸುತಾರ ನಿರೂಪಿಸಿ ಡಾ. ಬಿ ಡಿ. ಸೋರಗಾವಿ ವಂದಿಸಿದರು.