ಕನ್ನಡಪ್ರಭ ವಾರ್ತೆ ಬೆಳಗಾವಿ
ಜಾತಿಗಣತಿಯಲ್ಲಿ ಏನಿದೆ ಅಂತಾ ನಮಗೂ ಗೊತ್ತಿಲ್ಲ. ಅಧ್ಯಯನ ಮಾಡಬೇಕು. ಅಧ್ಯಯನ ಮಾಡೋದಕ್ಕೆ ನಮಗೂ ಹೇಳಿದ್ದಾರೆ. ಜಾತಿ ಗಣತಿ ವರದಿ ಮಂಡನೆ ಆಗೋದು ಬಹಳ ಅವಶ್ಯಕತೆ ಇದೆ. ಇದು ಜನರ ಪ್ರಗತಿಗಾಗಿ ಮಾಡುತ್ತಿದ್ದೇವೆ ಎಂದು ಲೋಕೋಪಯೋಗಿ ಸಚಿವ ಸಚಿವ ಸತೀಶ ಜಾರಕಿಹೊಳಿ ಹೇಳಿದರು.ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಗಣತಿಯನ್ನು ಈ ವರ್ಷ ಕೇಂದ್ರ ಸರ್ಕಾರ ಮಾಡುತ್ತಿದೆ. ಜಾತಿ ಗಣತಿ ವರದಿ ಮನೆಯಲ್ಲಿ ಏನೇನು ವ್ಯವಸ್ಥೆ ಇದೆ ಎನ್ನುವುದರ ಮಂಡನೆ ಇದೆ. ಅದನ್ನ ಮಂಡನೆ ಮಾಡುತ್ತೇವೆ. ಇದನ್ನು ಸಚಿವ ಸಂಪುಟದಲ್ಲಿ ಯಾರು ಒಪ್ಪಿಲ್ಲ. ಮೂರು ದಿನ ವಿಶೇಷ ಅಧಿವೇಶನ ಕರೆಯಬೇಕು. ಸದನದಲ್ಲಿ ಚರ್ಚೆ ಆಗಬೇಕು ಎಂದರು.
ಜಾತಿಗಣತಿಗೆ ವಿರೋಧದ ಪ್ರಶ್ನೆಯೇ ಇಲ್ಲ. ಅಂಕಿಅಂಶಗಳ ಆಧಾರದ ಮೇಲೆ ಸದನದಲ್ಲಿ ಚರ್ಚೆ ಆಗಬೇಕು. ಹಿಂದಿನ ಸರ್ಕಾರ ಮಾಡಬೇಕಿತ್ತು, ಮಾಡಲಿಲ್ಲ. ಮಧ್ಯ ಐದು ವರ್ಷ ನಮ್ಮ ಸರ್ಕಾರ ಇರಲಿಲ್ಲ. ಬೇರೆ ಬೇರೆ ಕಾರಣಗಳಿಂದ ವರದಿ ಮಂಡನೆ ಆಗಲಿಲ್ಲ. ನಮ್ಮ ಸರ್ಕಾರದ ಪ್ರಣಾಳಿಕೆಯಂತೆ ನಾವು ವರದಿ ಮಂಡನೆ ಮಾಡುತ್ತೇವೆ. ಬಿಡುಗಡೆಯಾದ ಅಂಕಿಅಂಶಗಳು ಸರಿಯಾಗಿವೆ ಎಂದು ಹೇಳಿದರು.ಸೋರಿಕೆಯಾಗುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಒಂದಲ್ಲ ಒಂದು ದಿನ ಸತ್ಯ ಹೊರಗೆ ಬರುತ್ತದೆ. ಚುನಾವಣೆ ಗೆಲ್ಲುವ ವ್ಯವಸ್ಥೆಯೇ ಬೇರೆ, ಇದೇ ಬೇರೆ ಎಂದರು. ಜನಾಕ್ರೋಶ ಡೈವರ್ಟ್ ಮಾಡೋಕೆ ಜಾತಿ ಗಣತಿ ವರದಿ ಬಿಡುಗಡೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿ, ಇದು ಶಾಶ್ವತವಾದ ಸರ್ವೇ. ಬಿಜೆಪಿ ಒಂದೆರೆಡು ದಿನದ ಟೆಂಪರರಿ ವಿರೋಧ ಇರುತ್ತೆ. ಜಾತಿ ಗಣತಿ ವೈಜ್ಞಾನಿಕವಾಗಿ ಆಗಿಲ್ಲ ಅನೋದನ್ನ ಸದನದಲ್ಲಿ ಚರ್ಚೆ ಮಾಡಲಿ. ರಾಜ್ಯದ ಜನತೆಗೆ ಎಲ್ಲವೂ ಗೊತ್ತಾಗಲಿ. ಸರ್ವೇಯನ್ನು ಪಕ್ಷದ ಕಾರ್ಯಕರ್ತರು ಮಾಡಿಲ್ಲ. ಬೇರೆ ಬೇರೆ ಸಮಾಜದ ಶಿಕ್ಷಕರು ಸರ್ವೇಯಲ್ಲಿ ಭಾಗಿಯಾಗಿದ್ದಾರೆ. ಸಿಎಂ ಸಿದ್ದರಾಮಯ್ಯ ಯಾರು ಒತ್ತಡಕ್ಕೆ ಮಣಿದಿಲ್ಲ ಎಂದರು.