ಕನ್ನಡಪ್ರಭವಾರ್ತೆ ಚಳ್ಳಕೆರೆ ಚಳ್ಳಕೆರೆ ತಾಲೂಕು, ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ರೇಣುಕಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಟಮದೇವರಕೋಟೆ (ತಿಮ್ಮಲಾಪುರ) ಗ್ರಾಮದಲ್ಲಿ ಶುಕ್ರವಾರ ಸಂಜೆ ನಡೆದ ಕ್ಷುಲ್ಲಕ ಕಾರಣಕ್ಕೆ ಸವರ್ಣೀಯರು ಮಾದಿಗ ಸಮುದಾಯದವರ ಮೇಲೆ ಕಾಲೋನಿಗೆ ನುಗ್ಗಿ ಹಲ್ಲೆ ಮಾಡಿರುವ ಘಟನೆ ನಡೆದಿದೆ. ಗಾಯಗೊಂಡವರನ್ನು ಶುಕ್ರವಾರ ತಡರಾತ್ರಿಯೇ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
31ರಂದು ಶುಕ್ರವಾರ ಸಂಜೆ ಸುಮಾರು 7.00 ರಿಂದ 8.00 ಗಂಟೆಯ ನಡುವೆ, ಸವರ್ಣೀಯ ಸಮುದಾಯದ ಕೆಲವರು ಮಾದಿಗ ಸಮುದಾಯದ ಸುಮಾರು 30 ಮನೆಗಳಿಗೆ ನುಗ್ಗಿ, ಹಲ್ಲೆ ನಡೆಸಿ, ಜೀವ ಬೆದರಿಕೆ ಹಾಕಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ಸಂಬಂಧ ಪರಶುರಾಂಪುರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೂದಿಮುಚ್ಚಿದ ಕೆಂಡ:
ಗ್ರಾಮದಲ್ಲಿ ಕೆಲ ತಿಂಗಳುಗಳಿಂದ ಕೆಲವು ವಿಷಯಗಳಿಗೆ ಮಾದಿಗ ಮತ್ತು ಸವರ್ಣೀಯ ಸಮುದಾಯಗಳ ನಡುವೆ ಭಿನ್ನಾಭಿಪ್ರಾಯಗಳು ಇದ್ದವು ಎನ್ನಲಾಗಿದೆ. ನ್ಯಾಯಬೆಲೆ ಅಂಗಡಿಯಲ್ಲಿ ತೂಕದಲ್ಲಿ ಮೋಸ ಆಗುತ್ತಿದೆ ಎಂದು ಪ್ರಶ್ನಿಸಿದ ಮಾದಿಗ ಸಮುದಾಯದ ಯುವಕನ ಮೇಲೆ ಹಲ್ಲೆಯೂ ನಡೆದಿತ್ತು. ಈ ಪ್ರಕರಣ ರಾಜಿ ಪಂಚಾಯ್ತಿಯಲ್ಲಿ ಕೊನೆಗೊಂಡಿತ್ತು. ಇದಲ್ಲದೇ ಗ್ರಾಮದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕಲ್ಯಾಣ ಮಂಟಪದಲ್ಲಿ ಮಾದಿಗರ ಶುಭಕಾರ್ಯಗಳಿಗೆ ಅವಕಾಶ ಇರಲಿಲ್ಲ. ಹೋಟೆಲ್, ದೇವಸ್ಥಾನಗಳಿಗೆ ಮುಕ್ತ ಪ್ರವೇಶ ಇರಲಿಲ್ಲ. ಇದೆಲ್ಲದರಿಂದ ಬೇಸರಗೊಂಡಿದ್ದ ಮಾದಿಗ ಸಮುದಾಯದ ಜನರು ಊರಿನ ಹಬ್ಬ ಹರಿದಿನಗಳಲ್ಲಿ ಯಾವುದೇ ಸೇವಾ ಕಾರ್ಯಗಳಲ್ಲಿ ಪಾಲ್ಗೊಳ್ಳದೇ ಇದ್ದ ಪರಿಣಾಮ ಸವರ್ಣೀಯ ಸಮುದಾಯದ ಕೆಲವರು ಇದರಿಂದ ಅಸಮಾಧಾನಗೊಂಡಿದ್ದರು. ಇಂತಹ ಅನೇಕ ವಿಷಯಗಳು ಎರಡೂ ಸಮುದಾಯಗಳಲ್ಲಿ ಬೂದಿ ಮುಚ್ಚಿದ ಕೆಂಡದಂತೆ ಮಡುಗಟ್ಟಿಕೊಂಡಿದ್ದರಿಂದ ಇದೀಗ ಕ್ಷುಲ್ಲಕ ಕಾರಣವನ್ನು ಮುಂದಿಟ್ಟುಕೊಂಡು ಸಂಘರ್ಷದ ರೂಪ ಪಡೆದಿದೆ ಎನ್ನುವುದು ನೊಂದ ಸಮುದಾಯದವರ ಅಭಿಪ್ರಾಯ.ನೊಂದ ಮಾದಿಗ ಸಮುದಾಯದ 14ಜನ ಚಳ್ಳಕೆರೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪರಶುರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.