ಜಾತಿ, ಧರ್ಮದ ದಂಗೆಗಳಿಂದ ಮಾನವೀಯ ಮೌಲ್ಯ ಕಣ್ಮರೆ: ಡಾ.ಸಿದ್ದನಗೌಡ ಪಾಟೀಲ್‌

KannadaprabhaNewsNetwork | Updated : Sep 02 2024, 02:05 AM IST

ಸಾರಾಂಶ

ಉದಾರೀಕರಣ, ನಗರಿಕರಣ, ಜಾಗತಿಕರಣದ ವ್ಯವಸ್ಥೆಯಲ್ಲಿ ನಾವು ಗ್ರಾಹಕರಾಗಿ ಕಾಣುತ್ತೇವೆ.

ಹರಪನಹಳ್ಳಿ: ಇಂದು ಜಾತಿ, ಧರ್ಮದ ದಂಗೆಗಳಿಂದ ಮಾನವೀಯ ಮೌಲ್ಯಗಳು ಕಣ್ಮರೆಯಾಗುತ್ತಿವೆ ಎಂದು ಹಿರಿಯ ಪತ್ರಕರ್ತ ಡಾ.ಸಿದ್ದನಗೌಡ ಪಾಟೀಲ್‌ ತಿಳಿಸಿದ್ದಾರೆ.

ಅವರು ಪಟ್ಟಣದ ಶಿಕ್ಷಣ ಮಹಾವಿದ್ಯಾಲಯದಲ್ಲಿ ಹೊಂಬೆಳಕು ಪ್ರಕಾಶನದಡಿ ಸಾಹಿತಿ ಡಿ.ರಾಮನಮಲಿ ರಚಿತ ಐಶ್ವರ್ಯ ಎಂಬ ಆಕಳಂಕಿತಳು ಎಂಬ ಪುಸ್ತಕ ಬಿಡುಗಡೆ ಬಿಡುಗಡೆ ಮಾಡಿ ಮಾತನಾಡಿದರು.

ಉದಾರೀಕರಣ, ನಗರಿಕರಣ, ಜಾಗತಿಕರಣದ ವ್ಯವಸ್ಥೆಯಲ್ಲಿ ನಾವು ಗ್ರಾಹಕರಾಗಿ ಕಾಣುತ್ತೇವೆ. ಇವತ್ತಿನ ಶೈಕ್ಷಣಿಕ ಲೋಕದಲ್ಲಿ ನಾವೆಲ್ಲರೂ ಗ್ರಾಹಕರಾಗಿದ್ದೇವೆ. ಯಾವುದೇ ವಸ್ತು ನಮಗೆ ಮಾತ್ರ ಸಿಗಬೇಕು ಎನ್ನುವ ಹಂಬಲವಿದೆ. ಮನುಷ್ಯ ಮನುಷ್ಯನ ನಡುವೆ ಸಂಬಂಧಕ್ಕಿಂತ ವಸ್ತುಗಳ ನಡುವೆ ಸಂಬಂಧ ಜಾಸ್ತಿಯಾಗಿದೆ. ಮನುಷ್ಯ ಎಷ್ಟೇ ವ್ಯವಹಾರಿಕವಾಗಿ ನಡೆದುಕೊಂಡರೂ ಮಾನವೀಯತೆ ಮರೆಯಬಾರದು. ಮಾನವೀಯ ಮೌಲ್ಯಗಳನ್ನು ತಿಳಿಸುವ ಕೃತಿಯಾಗಿದೆ ಇದಾಗಿದೆ ಎಂದರು.

ಪುಸ್ತಕ ಕುರಿತು ಗಂಗಾವತಿಯ ಸಹ ಪ್ರಾಧ್ಯಪಕ ಡಾ.ಮಮ್ತಾಜ್ ಬೇಗಂ ಮಾತನಾಡಿ, ಕನ್ನಡ ಸಾಹಿತ್ಯಕ್ಕೆ ಅನೇಕರು ಸಣ್ಣ ಕಥೆಗಳನ್ನು ನೀಡಿದ್ದಾರೆ. ನಾವು ಸುಡುವ ವರ್ತಮಾನದಲ್ಲಿದ್ದೇವೆ. ಮಮತೆ, ವಾತ್ಸಲ್ಯ, ಕರುಣೆ, ನಯ, ವಿನಯ ಕಣ್ಮರೆಯಾಗುತ್ತಿವೆ. ಮೌಲ್ಯಗಳು ಕಳೆದುಹೋಗುತ್ತಿವೆ. ಇವತ್ತು ಸೌಹಾರ್ದದ ಬಗ್ಗೆ ಜನಸಾಮಾನ್ಯರಿಗೆ, ವಿದ್ಯಾರ್ಥಿಗಳಿಗೆ, ಯುವಕರಿಗೆ ತಿಳಿಹೇಳುವ ಅವಶ್ಯಕತೆ ಇದೆ ಎಂದು ನುಡಿದರು.

ಅಖಂಡ ಬಳ್ಳಾರಿ ಜಿಲ್ಲಾ ಕಸಾಪ ಅದ್ಯಕ್ಷ ಡಾ.ನಿಷ್ಟಿ ರುದ್ರಪ್ಪ ಅದ್ಯಕ್ಷತೆ ವಹಿಸಿ ಮಾತನಾಡಿ, ಇಂದು ಜಾತಿ, ಮತ, ಧರ್ಮದ ಹೆಸರಿನಲ್ಲಿ ಗಲಾಟೆಗಳು ಆಗುತ್ತಿವೆ. ನಾಡಿನಲ್ಲಿ ಬೀಚಿ, ಭೀಮವ್ವ, ಮುದೇನೂರು ಸಂಗಣ್ಣನಂತ ಪುಣ್ಯ ಪುರುಷರು ಜನ್ಮತಾಳಿದ ಊರು. ಶಿಕ್ಷಣದಲ್ಲಿ ಕ್ರಾಂತಿಯನ್ನೇ ಮಾಡಿದ ಊರು ಹರಪನಹಳ್ಳಿ ಎಂದರು.

ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ ಮಾತನಾಡಿ, ಮೊಬೈಲ್, ಟಿವಿಗಳಿಂದ ಇತ್ತೀಚೆಗೆ ಓದುವ ಬರೆಯುವ ಹವ್ಯಾಸ ಕಡಿಮೆಯಾಗುತ್ತಿದೆ. ಕಥೆ, ಕವನ ಬರೆಯುವ ಹವ್ಯಾಸ ರೂಢಿ ಮಾಡಿಕೊಳ್ಳಿ ಎಂದರು.

ಕೃತಿಕಾರ ಡಿ.ರಾಮನಮಲಿ ಮಾತನಾಡಿ, ವಿವಿಧ ಕಾಲಘಟ್ಟವನ್ನರಿತು ನಾನು ಕಲ್ಪನೆ ಕಥೆ ಕಟ್ಟಿ ಈ ಕೃತಿ ರಚಿಸಿದ್ದೇನೆ. ಓದುಗರು ತಪ್ಪದೇ ಕೃತಿ ಓದಿ ಎಂದರು.

ತೆಗ್ಗಿನಮಠದ ಆಡಳಿತಾಧಿಕಾರಿ ಟಿ.ಎಂ. ಚಂದ್ರಶೇಖರ, ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ವಿಜಯಲಕ್ಷ್ಮಿ, ಕಸಾಪ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿದರು.

ಉಪನ್ಯಾಸಕ ರಾಜಭಕ್ಷೀ, ವಕೀಲ ಕಣವಿಹಳ್ಳಿ ಮಂಜುನಾಥ, ರಂಗಕರ್ಮಿ ಬಿ.ಪರುಶುರಾಮ, ಹಗರಿಬೊಮ್ಮನಹಳ್ಳಿಯ ಸಾಹಿತಿ ಮೇಟಿ ಕೊಟ್ರಪ್ಪ, ಇಸ್ಮಾಯಿಲ್ ಎಲಿಗಾರ್, ಪೂಜಾರ್ ಬಸವರಾಜ, ಮುಖಂಡರಾದ ಹಡಗಲಿ ಮಠ್, ಬಾಗಳಿ ರಾಜಶೇಖರ, ಹೇಮಣ್ಣ ಮೋರಗೇರಿ, ಗುಡಿಹಳ್ಳಿ ಹಾಲೇಶ, ಪೂಜಾರ್ ಷಣ್ಮುಖಪ್ಪ, ಶಿಕ್ಷಕಿ ಮಮ್ತಾಜ್ ಬೇಗಂ.ಶೇಖರನಾಯ್ಕ ಇದ್ದರು.

Share this article