ಕಾವೇರಿ ಸಮಸ್ಯೆ ಜೀವಂತ ದುರದೃಷ್ಟಕರ: ಕೆ.ರಾಘವೇಂದ್ರ

KannadaprabhaNewsNetwork | Published : Oct 26, 2023 1:00 AM

ಸಾರಾಂಶ

ಕಾವೇರಿ ಸಮಸ್ಯೆ ಜೀವಂತ ದುರದೃಷ್ಟಕರ: ಕೆ.ರಾಘವೇಂದ್ರಸಂಕಷ್ಟ ಕಾಲದಲ್ಲಿ ನೀರನ್ನು ಸಮಾನವಾಗಿ ಹಂಚಿಕೊಳ್ಳುವ ನೀತಿ ಜಾರಿಯಾಗಬೇಕು
ಕನ್ನಡಪ್ರಭ ವಾರ್ತೆ ಮಂಡ್ಯ ಶತಮಾನದಷ್ಟು ಹಳೆಯದಾದ ಒಪ್ಪದವನ್ನೇ ಮುಂದಿಟ್ಟುಕೊಂಡು ನೀರು ನಿರ್ವಹಣಾ ಸಮಿತಿ, ಪ್ರಾಧಿಕಾರಗಳನ್ನು ರಚಿಸಿಕೊಂಡು ಕಾವೇರಿ ಸಮಸ್ಯೆಯನ್ನು ಜೀವಂತವಾಗಿರಿಸಿರುವುದು ದೊಡ್ಡ ದುರಂತ ಎಂದು ಚಿಂತಕ ಕೆ.ರಾಘವೇಂದ್ರ ಹೇಳಿದರು. ಸಂಕಷ್ಟ ಕಾಲದಲ್ಲಿ ನೀರನ್ನು ಸಮಾನವಾಗಿ ಹಂಚಿಕೊಳ್ಳುವ ನೀತಿ ಜಾರಿಯಾಗಬೇಕು. ನ್ಯಾಯಾಲಯಗಳು ವಸ್ತುಸ್ಥಿತಿ ಅರಿತು ಎರಡೂ ರಾಜ್ಯಗಳಿಗೂ ಸಮಾನವಾಗಿ ನ್ಯಾಯದಾನ ಮಾಡಬೇಕು. ಕರ್ನಾಟಕದ ಜಲಾಶಯಗಳಲ್ಲಿ ನೀರಿಲ್ಲದಿದ್ದರೂ ಬಿಡುಗಡೆ ಆದೇಶ ಹೊರಡಿಸುವುದು ಎಷ್ಟರಮಟ್ಟಿಗೆ ಸರಿ. ಪಾಲನೆ ಮಾಡಲಾಗದ ಆದೇಶಗಳನ್ನು ಹೊರಡಿಸುವುದಾದರೂ ಏಕೆ. ನ್ಯಾಯಾಲಯಗಳಿಗೆ ಹೆದರಿ ಸರ್ಕಾರಗಳು ಜನರು, ರೈತರ ಹಿತವನ್ನು ಮರೆತು ನೀರು ಹರಿಸುತ್ತಾ ಅವರ ಬದುಕನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು. ತಮಿಳುನಾಡು ಸರ್ಕಾರ ಹೆಚ್ಚುವರಿ ಕಾವೇರಿ ನೀರನ್ನು ಸಮುದ್ರಕ್ಕೆ ಹರಿಸುತ್ತಿರುವುದನ್ನು ವೀಡಿಯೋ ಚಿತ್ರೀಕರಣ ಮಾಡುವುದರ ಜೊತೆಗೆ ಅಲ್ಲಿನ ಮಳೆ, ಬೆಳೆ, ನೀರಿನ ಬಳಕೆ, ಲಭ್ಯತೆ ಎಲ್ಲದರ ಬಗ್ಗೆ ಸಮಗ್ರ ಅಧ್ಯಯನ ನಡೆಸಿ ಸುಪ್ರೀಂ ಕೋರ್ಟಿಗೆ ರೈತರೇ ಅರ್ಜಿ ಸಲ್ಲಿಸಬೇಕು. ಮಂಡ್ಯ ಜಿಲ್ಲೆಯ ರೈತರೇ ಸಮಿತಿಯೊಂದನ್ನು ರಚಿಸಿಕೊಂಡು ಆ ಸಮಿತಿ ಮೂಲಕ ಸುಪ್ರೀಂಕೋರ್ಟ್‌ಗೆ ಸ್ವಯಂ ದೂರು ದಾಖಲಿಸಬೇಕು. ನಮ್ಮ ಬೇಡಿಕೆಗಳನ್ನು ಮನವರಿಕೆ ಮಾಡಿಕೊಡಬೇಕು ಎಂದರು. ಮುಖಂಡರಾದ ಪಟೇಲ್ ಮಲ್ಲಿಕಾರ್ಜುನ್, ಆರ್.ಪುಟ್ಟರಾಜು, ಜಯರಾಮೇಗೌಡ, ಕಲಾವಿದ ಮಂಜುಕುಮಾರ್, ಜಯಮೂರ್ತಿ, ಸೋಮಶೇಖರ್ ಗೋಷ್ಠಿಯಲ್ಲಿದ್ದರು.

Share this article