ದಾವಣಗೆರೆ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹುಟ್ಟಿದ ಜೂನ್ 19ನೇ ತಾರೀಖನ್ನು ರಾಷ್ಟ್ರೀಯ ಮೂರ್ಖರ ದಿನವನ್ನಾಗಿ ಆಚರಿಸುವಂತೆ ಸಿಎಂ ಸಿದ್ದರಾಮಯ್ಯ ಹಾಗೂ ಎಐಸಿಸಿ ರಾಷ್ಟ್ರೀಯ ಅಧ್ಯಕ್ಷ ಖರ್ಗೆ ಅವರಿಗೆ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಆರ್.ಎಲ್.ಶಿವಪ್ರಕಾಶ್ ಒತ್ತಾಯಿಸಿದರು.
ಸತ್ಯ, ಪಾರದರ್ಶಕತೆ ಮತ್ತು ಪ್ರಾಮಾಣಿಕತೆಗೆ ಬೆಲೆ ಕೊಡುವುದಾದರೆ ಪ್ರಧಾನಿ ನರೇಂದ್ರ ಮೋದಿ ಅವರು ರಾಜೀನಾಮೆ ನೀಡಬೇಕೆಂದು ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಲೀದ್ ಅಹಮದ್ ಹೇಳಿಕೆ ಗಮನಿಸಿದರೆ ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತೆ ಭಾಸವಾಗುತ್ತದೆ ಎಂದು ಹೇಳಿದರು.
ಪಾರದರ್ಶಕತೆ ಮತ್ತು ಪ್ರಾಮಾಣಿಕತೆ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನೂ ಕಾಂಗ್ರೆಸ್ ಉಳಿಸಿಕೊಂಡಿಲ್ಲ. 2004 ರಿಂದ 2014ರವರೆಗೆ ಕಾಂಗ್ರೆಸ್ ಸರ್ಕಾರ ನಡೆಸಿದ ಭ್ರಷ್ಟಾಚಾರದ ಸರಮಾಲೆಯೇ ಅವರ ನೈತಿಕತೆಗೆ ಹಿಡಿದ ಕೈಗನ್ನಡಿ. ಕಲ್ಲಿದ್ದಲು ಹಗರಣ, 2ಜಿ ಸ್ಪೆಕ್ಟ್ರಂ ಹಗರಣ, ಹೆಲಿಕಾಪ್ಟರ್ ಹಗರಣ, ಕಾಮನ್ ವೆಲ್ತ್ ಹಗರಣ, ಆದರ್ಶ ಅಪಾರ್ಟ್ಮೆಂಟ್ ಹಗರಣ ಹೀಗೆ ಹಲವಾರು ಹಗರಣ ನಡೆಸಿ ಭಾರತದ ಆರ್ಥಿಕತೆ ಅಧೋಗತಿಗೆ ತಳ್ಳಿದ್ದು ಕಾಂಗ್ರೆಸ್ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎಲ್.ಧನುಷ್, ಜಿ.ಯಲ್ಲೇಶ್, ಟಿ.ಎನ್.ಕಿರಣ್ ಇತರರು ಇದ್ದರು.
- - --19ಕೆಡಿವಿಜಿ45: