ಕನ್ನಡಪ್ರಭ ವಾರ್ತೆ ಹಾಸನ
ನಗರದ ಕಲಾಭವನದಲ್ಲಿ ಹಾಸನ ಜಿಲ್ಲಾ ನಾಗರಿಕ ವೇದಿಕೆ ವತಿಯಿಂದ ಮಂಗಳವಾರ ವಿವಿಧ ರಾಜಕೀಯ, ಧಾರ್ಮಿಕ, ಸಾಮಾಜಿಕ ಹಾಗೂ ಸಾಹಿತ್ಯ ಕ್ಷೇತ್ರದ ಗಣ್ಯರ ಸಮ್ಮುಖದಲ್ಲಿ ಹಮ್ಮಿಕೊಳ್ಳಲಾಗಿದ್ದ "ಮಾತೃಶ್ರೀ ಚನ್ನಮ್ಮ ದೇವೇಗೌಡರು - ದೊಡ್ಡಮನೆ ದೇವತೆಗೆ ಭಾವಪೂರ್ಣ ನುಡಿನಮನ " ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಆರಂಭದಲ್ಲಿ ಚನ್ನಮ್ಮ ದೇವೇಗೌಡರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸುವ ಮೂಲಕ ಗೌರವ ಸೂಚಿಸಿದ ನಂತರ ಮಾತನಾಡಿದ ಅವರು, ಆಸಿಡ್ ದಾಳಿಯಂತಹ ನೋವಿನ ಘಟನೆಯ ನಂತರವೂ ಅಚಲ ಮನೋಬಲದಿಂದ ಬದುಕನ್ನು ಎದುರಿಸಿದ ಚನ್ನಮ್ಮ ಅವರು ಎಲ್ಲರಿಗೂ ಸ್ಫೂರ್ತಿ. ತಂದೆ ಚಿಕಿತ್ಸೆ ಸಂದರ್ಭದಲ್ಲಿಯೂ ಧೈರ್ಯ ತುಂಬಿ, ಹರಕೆ ಹೊತ್ತು ಪ್ರಾರ್ಥನೆ ಮಾಡಿದ್ದರು. ಚುನಾವಣೆಯಲ್ಲಿ ನಾನು ಗೆದ್ದ ನಂತರ ಅವರ ಮನೆಗೆ ಭೇಟಿ ನೀಡಿ ಅವರೊಂದಿಗೆ ಊಟ ಮಾಡುವ ಅವಕಾಶ ದೊರೆತದ್ದು ಜೀವನದ ಅಮೂಲ್ಯ ಕ್ಷಣ ಎಂದು ಸ್ವರೂಪ್ ಸ್ಮರಿಸಿದರು.ಜವೇನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ ಮಾತನಾಡಿ, ಚನ್ನಮ್ಮ ಅವರ ಬದುಕು ಸಂಪೂರ್ಣ ದೈವಭಕ್ತಿಯಿಂದ ಕೂಡಿತ್ತು. ಅವರ ಆಧ್ಯಾತ್ಮಿಕ ಶಕ್ತಿ ಹಾಗೂ ಭಕ್ತಿಯೇ ದೇವೇಗೌಡರ ಕುಟುಂಬಕ್ಕೆ ಶ್ರೇಯಸ್ಸು ಮತ್ತು ಯಶಸ್ಸು ತಂದುಕೊಟ್ಟಿದೆ. ೭೨ ವರ್ಷಗಳ ಸುದೀರ್ಘ ದಾಂಪತ್ಯ ಜೀವನ ನಡೆಸಿ ಕುಟುಂಬಕ್ಕೆ ಆದರ್ಶವಾಗಿದ್ದ ಅವರು ಸದಾ ಸ್ಮರಣೀಯರು ಎಂದು ಹೇಳಿದರು. ತಣ್ಣೀರುಹಳ್ಳ ಮಠದ ವಿಜಯಕುಮಾರ ಸ್ವಾಮೀಜಿ ಮಾತನಾಡಿ, ಹೆಂಡತಿಯಾಗಿ, ತಾಯಿಯಾಗಿ ಹಾಗೂ ಕುಟುಂಬದ ಬೆನ್ನೆಲುಬಾಗಿ ಚನ್ನಮ್ಮ ಅವರು ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ. ಸಮಾಜದಲ್ಲಿ ಕೆಲವರನ್ನು ಮಾತ್ರ ಎಂದಿಗೂ ಮರೆಯಲು ಸಾಧ್ಯವಾಗುವುದಿಲ್ಲ. ಆ ಸಾಲಿನಲ್ಲಿ ಚನ್ನಮ್ಮ ದೇವೇಗೌಡ ಅವರ ಸ್ಥಾನ ಅಗ್ರಗಣ್ಯವಾಗಿದೆ ಎಂದು ಹೇಳಿದರು. ಒಕ್ಕಲಿಗರ ಸಂಘದ ಅಧ್ಯಕ್ಷ ಜಿ.ಎಲ್. ಮುದ್ದೇಗೌಡ ಮಾತನಾಡಿ, ದೇವೇಗೌಡರ ಮನೆಗೆ ಭೇಟಿ ನೀಡಿದ ಪ್ರತಿಯೊಬ್ಬರಿಗೂ ಪ್ರೀತಿಯಿಂದ ಆಶೀರ್ವದಿಸುತ್ತಿದ್ದ ಚನ್ನಮ್ಮ ಅವರು ಸದಾ ದೇವರ ಮೇಲೆ ಅಪಾರ ನಂಬಿಕೆ ಇಟ್ಟುಕೊಂಡಿದ್ದರು. ದೇವೇಗೌಡರೂ ಸಹ ಅವರ ಸಲಹೆ ಮತ್ತು ಮಾತುಗಳಿಗೆ ವಿಶೇಷ ಗೌರವ ನೀಡುತ್ತಿದ್ದರು ಎಂದು ಹೇಳಿದರು. ಅರಕಲಗೂಡು ಶಾಸಕ ಎ. ಮಂಜು ಮಾತನಾಡಿ, ೧೯೮೯ರ ಚುನಾವಣೆಯಲ್ಲಿ ತಾವು ಹಾಗೂ ಎಚ್.ಡಿ. ದೇವೇಗೌಡರು ಸೋಲು ಕಂಡ ಬಳಿಕ ಮೊದಲ ಬಾರಿಗೆ ಚನ್ನಮ್ಮ ಅವರನ್ನು ಭೇಟಿ ಮಾಡಿದ್ದೆ. ಅವರ ದೈವಭಕ್ತಿ, ತಾಳ್ಮೆ ಮತ್ತು ಧೈರ್ಯದಿಂದಲೇ ದೇವೇಗೌಡರ ಕುಟುಂಬ ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿತು. ೭೨ ವರ್ಷಗಳ ಆದರ್ಶ ದಾಂಪತ್ಯ ಜೀವನ ಇಡೀ ಸಮಾಜಕ್ಕೆ ಮಾದರಿ ಎಂದು ಬಣ್ಣಿಸಿದರು. ಮಾಜಿ ಸಚಿವ ಎಚ್.ಕೆ. ಕುಮಾರಸ್ವಾಮಿ ಮಾತನಾಡಿ, ಚನ್ನಮ್ಮ ಅವರು ಕೇವಲ ವ್ಯಕ್ತಿಯಲ್ಲ, ಆದರ್ಶ ವ್ಯಕ್ತಿತ್ವದ ಪ್ರತೀಕ. ಇಂದಿನ ಯುವ ದಂಪತಿಗಳು ಅವರ ಜೀವನದಿಂದ ಸಹನೆ, ಪರಸ್ಪರ ಗೌರವ ಮತ್ತು ಕುಟುಂಬದ ಮೌಲ್ಯಗಳನ್ನು ಕಲಿಯಬೇಕು. ದಾಂಪತ್ಯ ಜೀವನದಲ್ಲಿ ಯಶಸ್ಸು ಸಾಧಿಸಲು ಅವರ ತಾಳ್ಮೆ ಮತ್ತು ಹೊಂದಾಣಿಕೆಯೇ ಪ್ರಮುಖ ಕಾರಣವಾಗಿತ್ತು ಎಂದು ಹೇಳಿದರು.ಮಾಜಿ ಶಾಸಕ ಹಾಗೂ ಎಂಸಿಇ ಕಾಲೇಜು ಅಧ್ಯಕ್ಷ ಬಿ.ಆರ್. ಗುರುದೇವ್, ಸಮಾಜ ಸೇವಕ ಎಸ್.ಎಸ್. ಪಾಷಾ, ವೀರಶೈವ ಸಂಘದ ಉಪಾಧ್ಯಕ್ಷ ಭುವನಾಕ್ಷ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಎಚ್.ಎಲ್. ಮಲ್ಲೇಶ್ ಗೌಡ ಮಾತನಾಡಿದರು.ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶಂಭುನಾಥ ಸ್ವಾಮೀಜಿ, ಆಲೂರು-ಸಕಲೇಶಪುರ ಶಾಸಕ ಸಿಮೆಂಟ್ ಮಂಜು, ಒಕ್ಕಲಿಗರ ಸಂಘದ ನಿರ್ದೇಶಕ ರಘುಗೌಡ, ನಗರಸಭೆ ಮಾಜಿ ಅಧ್ಯಕ್ಷ ಸಿ.ಆರ್. ಶಂಕರ್, ಪತ್ರಕರ್ತರ ಸಂಘದ ಮಾಜಿ ಅಧ್ಯಕ್ಷೆ ಲೀಲಾವತಿ, ಎಚ್.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಬಿದರಿಕೆರೆ ಜಯರಾಂ, ಹಾಸನ ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷ ರಮೇಶ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷ ಮದನ್ ಗೌಡ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪ್ರಮೋದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ನಾಯಕರಹಳ್ಳಿ ಮಂಜೇಗೌಡ, ಗೌರವಾಧ್ಯಕ್ಷ ರವಿನಾಕಲಗೂಡು, ಕೃಷ್ಣೇಗೌಡ, ಅಖಿಲ ಭಾರತ ಲಿಂಗಾಯತ ವೀರಶೈವ ಸಮಾಜದ ತಾಲೂಕು ಅಧ್ಯಕ್ಷ ಕಟ್ಟಾಯ ಶಿವಕುಮಾರ್, ಕುವೆಂಪು ಶಾಲೆ ಕಾರ್ಯದರ್ಶಿ ಶಿವರಾಮೇಗೌಡ, ಲಕ್ಷ್ಮಣ್, ಜೆಡಿಎಸ್ ಜಿಲ್ಲಾ ವಕ್ತಾರ ರಘು ಹೊಂಗೆರೆ ಸೇರಿ ಹಲವಾರು ಗಣ್ಯರು ಇದ್ದರು.