ಕನ್ನಡಪ್ರಭ ವಾರ್ತೆ ಚನ್ನರಾಯಪಟ್ಟಣ
ಪಂಚ ಗ್ಯಾರಂಟಿಗಳಲ್ಲಿ ಅತ್ಯಂತ ಜನಪ್ರಿಯ ಯೋಜನೆಯಾದ ಗೃಹಲಕ್ಷ್ಮಿ ಯೋಜನೆ ಜಾರಿಯಾಗಿ ಮೂರು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ರಾಜ್ಯ ಸಮಿತಿ ನಿರ್ದೇಶನದಂತೆ ತಾಲೂಕಿನ ಎಲ್ಲ ಗ್ರಾಮ ಪಂಚಾಯಿತಿಗಳಲ್ಲಿ ಅರ್ಹ ಗೃಹಲಕ್ಷ್ಮಿಯರನ್ನು ಗುರ್ತಿಸಿ ಅಭಿನಂದಿಸಲಾಗುವುದು ಎಂದು ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷರು, ವಕೀಲರಾದ ಎಲ್.ಪಿ. ಪ್ರಕಾಶ್ಗೌಡ ತಿಳಿಸಿದರು.ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ತಾಲೂಕು ಗ್ಯಾರಂಟಿ ಅನುಷ್ಟಾನ ಸಮಿತಿಯ ೨೬ನೇ ಮಾಸಿಕ ಸಭೆಯಲ್ಲಿ ಮಾತನಾಡಿದ ಅವರು, ಜುಲೈ ೧೯ರಂದು ಗೃಹಲಕ್ಷ್ಮಿ ಯೋಜನೆಗೆ ಚಾಲನೆ ನೀಡಿ ಮೂರು ವರ್ಷಗಳು ತುಂಬಿರುವ ಹಿನ್ನೆಯಲ್ಲಿ ಇದು ಅತ್ಯಂತ ಜನಪ್ರಿಯ ಯೋಜನೆಯಾಗಿ ರಾಜ್ಯದ ಮಹಿಳೆಯರ ಸ್ವಾವಲಂಬಿ ಬದುಕಿಗೆ ನೆರವಾಗಿದೆ. ಇದನ್ನು ರಾಜ್ಯದ ಗೃಹಲಕ್ಷ್ಮಿಯವರೊಂದಿಗೆ ಸಂಭ್ರಮಿಸುವ ಉದ್ದೇಶ ಹೊಂದಿ ರಾಜ್ಯ ಗ್ಯಾರಂಟಿ ಅನುಷ್ಠಾನ ಸಮಿತಿಯ ನಿರ್ದೇಶನದಂತೆ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಸಸಿ ನೆಡುವುದರ ಜೊತೆಗೆ ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನದಲ್ಲಿ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಂದ ಮೂವರು ಅರ್ಹ ಮಹಿಳೆಯರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.ಮುಂದಿನ ವಾರದಿಂದ ತಾಲೂಕಿನ ೪೦ ಗ್ರಾಮ ಪಂಚಾಯಿತಿಗಳಿಗೂ ಭೇಟಿ ನೀಡಿ ಅಭಿನಂದಿಸುವ ಕಾರ್ಯಕ್ರಮ ಆಯೋಜಿಸಲಾಗುವುದು ಎಂದ ಅವರು, ತಾಲೂಕಿನಲ್ಲಿ ೫ ಗ್ಯಾರಂಟಿ ಯೋಜನೆಗಳು ಅತ್ಯಂತ ಯಶ್ವಸಿಯಾಗಿ ಜಾರಿಯಾಗಿವೆ. ಗೃಹಲಕ್ಷ್ಮಿ ಯೋಜನೆಯಡಿ ೮೧,೧೧೧ ಫಲಾನುಭವಿಗಳಿದ್ದು, ಶೇ. ೯೯ರಷ್ಟು ಸಾಧನೆಯಾಗಿದೆ. ೧೬ ಕೋಟಿ ರು. ನಷ್ಟು ಹಣ ಮಹಿಳೆಯರ ಖಾತೆಗೆ ಜಮೆ ಆಗಿದೆ. ಶಕ್ತಿ ಯೋಜನೆಯಡಿ ಪ್ರತಿ ತಿಂಗಳು ೮.೫೩ ಲಕ್ಷ ಜನ ಸಂಚಾರ ಮಾಡಿದ್ದು, ಇದಕ್ಕಾಗಿ ೩ಕೋಟಿ ರು. ಜಮೆ, ಗೃಹಜ್ಯೋತಿಗೆ 10೭೨ ನೋಂದಣಿ ಮಾಡಿ ಕೊಂಡಿದ್ದು, ಆ ಪೈಕಿ ೨.೫೩ ಕೋಟಿ. ಅನ್ನಭಾಗ್ಯ ಯೋಜನೆಗಾಗಿ ೪.೪ ಕೋಟಿ ರು. ಮತ್ತು ಯುವನಿಧಿ ಯೋಜನೆಗಾಗಿ ೩೮೫ ಜನ ಯುವಕರು ನೋಂದಾಯಿಸಿಕೊಂಡು ೨೫ ಲಕ್ಷ ರು. ಸೇರಿ ತಾಲೂಕಿನ ಬಡವರು, ರೈತರು, ಕೂಲಿಕಾರ್ಮಿಕರಿಗೆ ಪ್ರತಿ ತಿಂಗಳು ೨೬.೫ ಕೋಟಿ ರು. ಹಣವನ್ನು ಅನುದಾನದ ರೂಪದಲ್ಲಿ ನೀಡಲಾಗುತ್ತಿದೆ ಎಂದು ತಿಳಿಸಿದರು.ಇನ್ನು ಸಮಿತಿಯ ಸದಸ್ಯರು ಶ್ರವಣಬೆಳಗೊಳ ಹೋಬಳಿ ಶ್ರೀಕಂಠನಗರದಲ್ಲಿ ಹೊಸ ಕೇಂದ್ರ ಆರಂಭಿಸಿ ಪಡಿತರ ನೀಡುವಂತೆ ಕಳೆದ ಬಾರಿಯ ಸಭೆಯಲ್ಲಿ ಆಹಾರ ಶಿರಸ್ತೆದಾರರ ಗಮನಕ್ಕೆ ತಂದು ಪ್ರಯೋಜನವಾಗಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು. ಸಭೆಯಲ್ಲಿ ತಾಲೂಕು ಪಂಚಾಯಿತಿ ನಿರ್ದೇಶಕ ಗಿರೀಶ್, ಗ್ಯಾರಂಟಿ ವ್ಯಾಪ್ತಿ ಅಧಿಕಾರಿಗಳು ಮತ್ತು ಸಮಿತಿ ಸದಸ್ಯರು ಹಾಜರಿದ್ದರು.