)
ಕನ್ನಡಪ್ರಭ ವಾರ್ತೆ ರಾಯಚೂರು
ಇಸ್ಲಾಂ ಧರ್ಮದ ಪ್ರವಾದಿ ಮುಹಮ್ಮದ್ (ಸ) ಅವರ ಜನ್ಮದಿನದ ಪ್ರಯುಕ್ತ ಈದ್ಮಿಲಾದ್ ಆಚರಿಸಲಾಗುತ್ತದೆ. ಹಬ್ಬ ಹಿನ್ನೆಲೆಯಲ್ಲಿ ಮುಸ್ಲಿಮರು ತಮ್ಮ ಮನೆ, ಮಸೀದಿಗಳನ್ನು ಜಗಮಗಿಸುವ ವಿದ್ಯುತ್ ದೀಪಾಲಂಕಾರ ಮಾಡಿದ್ದರು. ಮನೆಗಳಲ್ಲಿ ಸಿಹಿ ಪದಾರ್ಥ ತಯಾರಿಸಿ ಪರಸ್ಪರ ನೆರೆಹೊರೆಯವರಿಗೆ ಹಂಚಿದರು.
ಹಬ್ಬದ ನಿಮಿತ್ತ ಮುಸ್ಲಿಂ ಸಮಾಜದಿಂದ ಎಲ್ಲಾ ಬಡಾವಣೆಗಳ ಪ್ರಮುಖ ಮಸೀದಿಗಳಿಂದ ಮುಹಮ್ಮದ್ ಪೈಗಂಬರ್ ಅವರ ಜೀವನಚರಿತ್ರೆ ಹಾಗೂ ಸಾಧನೆಗಳ ಕುರಿತು ಬೋಧಿಸಲಾಯಿತು. ಇದೇ ವೇಳೆ ಖುರಾನ್, ಹದೀಸ್ಪಠಣೆ ಹಾಗೂ ನಾತ್ಗಳನ್ನು ಹಾಡಲಾಯಿತು.ಸಂಜೆ ಎಲ್ಲ ಮಸೀದಿ, ದರ್ಗಾಗಳಿಂದ ಮೆಕ್ಕಾ, ಮದೀನಾ ನಗರಗಳ, ಇಸ್ಲಾಂ ಧಾರ್ಮಿಕ ಚಿಹ್ನೆಗಳ ಸ್ತಬ್ಧ ಚಿತ್ರದ ಮೆರವಣಿಯು ಸ್ಥಳೀಯ ತೀನ್ ಕಂದಿಲ್ ಮಾರ್ಗ ದಿಂದ ಜಾಕೀರ್ ಹುಸೇನ್ ವೃತ್ತ, ಮಹಾನಗರ ಪಾಲಿಕೆ ಕಚೇರಿ ಮುಂಭಾಗಕ್ಕೆ ಬಂದು ತಲುಪಿತು. ಮೆರವಣಿಗೆಯಲ್ಲಿ ಚಿಕ್ಕಮಕ್ಕಳು, ಯುವಕರು ಹಸಿರು ಬಣ್ಣದ ಧ್ವಜ ಪ್ರದರ್ಶಿಸುತ್ತ ಭಕ್ತಿ ಮೆರೆದರು. ಮೆರವಣಿಗೆಯುದ್ದಕ್ಕೂ ಮುಸ್ಲಿಮರು ಸಾರ್ವಜನಿಕರಿಗೆ ಕಲ್ಲಂಗಡಿ, ಚಾಕೋಲೇಟ್, ಪಾಯಸ, ವಿವಿಧ ಬಗೆಯ ತಂಪು ಪಾನೀಯಗಳು ನೀಡಲಾಯಿತು.