ಮುಸ್ಲಿಂ ಬಾಂಧವರಿಂದ ಸಂಭ್ರಮದ ಈದ್ ಮಿಲಾದ್ ಆಚರಣೆ

KannadaprabhaNewsNetwork |  
Published : Sep 17, 2024, 12:51 AM IST
೧೬ಎಚ್‌ವಿಆರ್೨ | Kannada Prabha

ಸಾರಾಂಶ

ಮಹ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಸೋಮವಾರ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಹಾಗೂ ಶಾಂತಿಯುತವಾಗಿ ಆಚರಿಸಿದರು.

ಹಾವೇರಿ: ಮಹ್ಮದ್ ಪೈಗಂಬರ್ ಅವರ ಜನ್ಮದಿನದ ಅಂಗವಾಗಿ ಸೋಮವಾರ ಜಿಲ್ಲಾದ್ಯಂತ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮ ಹಾಗೂ ಶಾಂತಿಯುತವಾಗಿ ಆಚರಿಸಿದರು.ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನಾಚರಣೆ ಅಂಗವಾಗಿ ನಗರದಲ್ಲಿ ಭವ್ಯ ಮೆರವಣಿಗೆ ನಡೆಯಿತು. ಭಕ್ತಿ ಭಾವದಿಂದ ಹೆಜ್ಜೆ ಹಾಕಿದ ಮುಸ್ಲಿಂ ಬಾಂಧವರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಜಿಲ್ಲೆಯ ವಿವಿಧ ಪ್ರಮುಖ ನಗರಗಳಲ್ಲಿ ಹಬ್ಬದ ನಿಮಿತ್ತ ಭವ್ಯ ಮೆರವಣಿಗೆ ನಡೆಸಲಾಯಿತು. ನಗರದ ವಿವಿಧೆಡೆ ಬೆಳಗ್ಗೆಯಿಂದಲೇ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಬಾಂಧವರು ಹಾವೇರಿಯ ಹಜರತ್ ಮೆಹಬೂಬ್ ಸುಭಾನಿ ದರ್ಗಾದ ಸಮೀಪ ಖುರಾನ್ ಓದುವ ಮೂಲಕ ಈದ್ ಮಿಲಾದ್ ಹಬ್ಬದ ಮೆರವಣಿಗೆಗೆ ಚಾಲನೆ ನೀಡಲಾಯಿತು. ಬಳಿಕ ಮಾನೆಗಾರ ಓಣಿ, ಮೈಲಾರ ಮಹಾದೇವ ವೃತ್ತ, ಗಾಂಧಿವೃತ್ತ, ಜೆ.ಪಿ. ವೃತ್ತ, ಗುರುಭವನ, ಜೆ.ಎಚ್. ಪಟೇಲ್ ವೃತ್ತ, ಖಬರ್‌ಸ್ತಾನ್, ದಾವಲ್‌ಮಲ್ಲಿಕ್ ದರ್ಗಾ, ಅಂಬೇಡ್ಕರ್‌ ವೃತ್ತ, ದ್ಯಾಮವ್ವನ ಪಾದಗಟ್ಟಿ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಸಂಚರಿಸುವ ಮೂಲಕ ಮರಳಿ ಮೆಹಬೂಬ ಸುಭಾನಿ ದರ್ಗಾಕ್ಕೆ ಆಗಮಿಸಿತು.ಬೆಳಗ್ಗೆಯಿಂದ ಸಂಜೆವರೆಗೆ ನಗರದಲ್ಲಿ ಮೆರವಣಿಗೆ ನಡೆಯಿತು. ಪುಷ್ಪಾರ್ಚನೆ ಮಾಡುತ್ತ ಮೆಕ್ಕಾ, ಮದೀನಾ ಪ್ರತಿಕೃತಿಗಳನ್ನು ಪೈಗಂಬರ ಜೈಕಾರ, ಅವರ ಜೀವನ ಸಂದೇಶ ಘೋಷಣೆಗಳೊಂದಿಗೆ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಧರ್ಮಗುರುಗಳು ಉಪನ್ಯಾಸ ನೀಡಿದರು. ಮೆರವಣಿಗೆ ಸಂಚರಿಸುತ್ತಿದ್ದಾಗ ಕುಡಿಯುವ ನೀರು, ತಂಪು ಪಾನೀಯ, ಹಣ್ಣು-ಹಂಪಲು ಹಾಗೂ ಸಿಹಿ ತಿನಿಸುಗಳನ್ನು ವಿತರಿಸಲಾಯಿತು. ಮೆರವಣಿಗೆಯಲ್ಲಿ ವಿಧಾನಸಭೆ ಉಪಾಧ್ಯಕ್ಷ, ಶಾಸಕ ರುದ್ರಪ್ಪ ಲಮಾಣಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ, ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಪ್ರಭು ಬಿಷ್ಟನಗೌಡ್ರ ಸೇರಿದಂತೆ ಎಲ್ಲಾ ಸಮಾಜಗಳ ಮುಖಂಡರು, ಗಣ್ಯರು, ಜನಪ್ರತಿನಿಧಿಗಳು ಪಾಲ್ಗೊಂಂಡು ಮುಸ್ಲಿಂ ಬಾಂಧವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಂಡರು. ಈ ವೇಳೆ ಅಂಜುಮಾನ್ ಅಧ್ಯಕ್ಷ ಇಫಾರ್ನಖಾನ್ ಪಠಾಣ, ಜಮೀರ್ ಜಿಗರಿ, ಪೀರಸಾಬ್ ಜೋಪದಾರ್, ಅನ್ವರ್ ಕಡೆಮನಿ, ಚಮನ್ ಮುಲ್ಲಾ, ಮುಜಫರ್ ಕೊಟ್ಟಿಗೇರಿ, ಬಾಬುಸಾಬ್ ಬಾಲೇಬಾಯಿ, ಸಾದಿಕ್ ಸವಣೂರ, ಹಮರ್ ಕಲ್ಯಾಣ್, ಸಾದಿಕ್ ಮೇಲ್ಮುರಿ, ಅಜಮತ್ ಶೇಖ್, ಅಮೀರ್‌ಜಾನ್ ಬೇಪಾರಿ, ಎಕ್ಬಾಲ್ ಶಿಡಗನಾಳ ಸೇರಿದಂತೆ ಮುಸ್ಲಿಂ ಬಾಂಧವರು ಇದ್ದರು. ಮೆರವಣಿಗೆ ಅಂಗವಾಗಿ ನಗರದಲ್ಲಿ ಬಿಗಿ ಪೊಲೀಸ್ ಬಂದೊಬಸ್ತ್ ಏರ್ಪಡಿಸಲಾಗಿತ್ತು.

PREV

Recommended Stories

ಗ್ರಾಮೀಣ ಭಜನಾ ಮಂಡಳಿಗಳಲ್ಲಿ ತತ್ವಪದಗಳು ಜೀವಂತ
ರಾಮದುರ್ಗ ಧನಲಕ್ಷ್ಮೀ ಶುಗರ್ ಚುನಾವಣೆ: ಸತತ 4ನೇ ಬಾರಿಗೆ ಯಾದವಾಡರ ನೇತೃತ್ವಕ್ಕೆ ಜಯ