ಬೆಳೆಗಾರರಿಂದ ಬಳಕೆದಾರಿಗೆ ಸಂಪರ್ಕ ಸೇತುವೆ ಕಲ್ಪಿಸುವಂತಹ ಯಾವುದೇ ಯೋಜನೆಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಿಫಲವಾಗಿವೆ ಈ ಕಾರಣದಿಂದ ಆಹಾರ ಧ್ಯಾನ್ಯಗಳ ಬೆಲೆಗಳು ಗಗಕ್ಕೇರಿದ್ದು ,ಇದರ ಲಾಭ ಮಾತ್ರ ಮಧ್ಯವರ್ತಿಗಳು, ವರ್ತಕರ ಪಾಲಾಗುತ್ತಿದೆಯೇ ಹೊರತು ಬೆಳೆ ಬೆಳದ ರೈತನಿಗೆ ಸಿಗುತ್ತಿಲ್ಲ ಎಂದು ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ ಎಂ.ಪಿ. ಹೇಳಿದರು.
ಕನ್ನಡಪ್ರಭ ವಾರ್ತೆ ಹೊನ್ನಾಳಿ
ಬೆಳೆಗಾರರಿಂದ ಬಳಕೆದಾರಿಗೆ ಸಂಪರ್ಕ ಸೇತುವೆ ಕಲ್ಪಿಸುವಂತಹ ಯಾವುದೇ ಯೋಜನೆಗಳನ್ನು ರೂಪಿಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಂಪೂರ್ಣವಿಫಲವಾಗಿವೆ ಈ ಕಾರಣದಿಂದ ಆಹಾರ ಧ್ಯಾನ್ಯಗಳ ಬೆಲೆಗಳು ಗಗಕ್ಕೇರಿದ್ದು ,ಇದರ ಲಾಭ ಮಾತ್ರ ಮಧ್ಯವರ್ತಿಗಳು, ವರ್ತಕರ ಪಾಲಾಗುತ್ತಿದೆಯೇ ಹೊರತು ಬೆಳೆ ಬೆಳದ ರೈತನಿಗೆ ಸಿಗುತ್ತಿಲ್ಲ ಎಂದು ರೈತ ಸಂಘ, ಹಸಿರು ಸೇನೆ ರಾಜ್ಯಾಧ್ಯಕ್ಷ ಕರಿಬಸಪ್ಪ ಗೌಡ ಎಂ.ಪಿ. ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಭಾನುವಾರ ನ್ಯಾಮತಿ ಮತ್ತು ಹೊನ್ನಾಳಿ ರೈತ ಸಂಘ ಮತ್ತು ಹಸಿರು ಸೇನೆ ಮುಖಂಡರು, ರೈತರ ಸಮ್ಮುದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು.
ಇದೀಗ ತಾನೆ ಮುಂಗಾರು ಹಂಗಾಮು ಆರಂಭಗೊಳ್ಳುತ್ತಿದ್ದು ಇಡೀ ದೇಶಕ್ಕೆ ಅಹಾರ ಭದ್ರತೆ ನೀಡುವ ಸಲುವಾಗಿ ರೈತರು ಕೃಷಿ ಚಟುವಟಿಕೆಗಳತ್ತ ಮುಖಮಾಡಿದ್ದು, ಇಂತಹ ಸಂದರ್ಭದಲ್ಲಿ ಸರ್ಕಾರಗಳು ರೈತರು ಬಳಸುವ ಬಿತ್ತನೆ ಬೀಜ, ರಸಗೊಬ್ಬರಗಳ ಬೆಲೆಯನ್ನು ಏರಿಕೆ ಮಾಡಿ ದರ ಪಟ್ಟಿಯನ್ನು ಬಿಡುಗಡೆ ಮಾಡಿ ಕೃಷಿಗೆ ದೊಡ್ಡ ಹೊಡೆತ ನೀಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿವೆ ಎಂದು ದೂರಿದರು.
ರಾಜ್ಯದಲ್ಲಿ ಕೃಷಿ ಇಲಾಖೆ ಹೆಸರಿಗೆ ಮಾತ್ರ ಇದ್ದು, ಸಂಬಂಧಿಸಿದ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಅಧಿಕಾರಿಗಳು ಬಿತ್ತನೆ ಬೀಜ ಮತ್ತು ಗೊಬ್ಬರ ಮಾರಾಟ ವರ್ತಕರಿಗೆ ಕಡಿವಾಣ ಹಾಕುವುದನ್ನು ಮರೆತಿದ್ದಾರೆ. ಪೋಟಾಷ್ (ಎಂಎಪಿ) 1600 ರು.ನಿಂದ 1700 ರು. ಬೆಲೆ ಇದೆ. ಆದರೆ ಅಂಗಡಿಗಳಲ್ಲಿ 2400 ರು.ಗೆ ಮಾರಾಟವಾಗುತ್ತಿದೆ. ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಅವರ ಮೇಲೆ ಕಾನೂನೂ ಕ್ರಮ ತೆಗೆದುಕೊಂಡು ರೈತರ ಹಿತ ಕಾಪಾಡಬೇಕು ಎಂದು ಒತ್ತಾಯಿಸಿದರು.
ಮೆಕ್ಕೆಜೋಳ ಮತ್ತು ಭತ್ತದ ಖರೀದಿ ಕೇಂದ್ರಗಳನ್ನು ಕೂಡ ತಾಲೂಕಿನಲ್ಲಿ ಅಧಿಕಾರಿಗಳು ಸಕಾಲದಲ್ಲಿ ತೆರೆದಿಲ್ಲ, ರಾಜ್ಯ ಸರ್ಕಾರದಲ್ಲಿ ಕೇವಲ ಕುರ್ಚಿ ಮತ್ತು ಅಧಿಕಾರಕ್ಕಾಗಿ ಲಾಬಿ ನಡೆಸುವಲ್ಲಿ ಮಗ್ನರಾಗಿದ್ದು, ಅಧಿಕಾರಿಗಳು ರೈತರ, ಜನರ ಕೆಲಸ ಮಾಡಿಕೊಡುವಲ್ಲಿ ನಿರ್ಲಕ್ಷ್ಯತನದಲ್ಲಿ ಮುಳುಗಿದ್ದಾರೆ ಎಂದು ಕಟುವಾಗಿ ಟೀಕಿಸಿದರು.
ಅಡಕೆ ಬೆಳಗಾರರ ಹಿತ ಕಾಯಲು ಅಡಕೆ ಮಂಡಳಿ ಸ್ಥಾಪನೆಯಾಗಬೇಕು. ಈ ಬಗ್ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಇಚ್ಛಾಶಕ್ತಿ ಪ್ರದರ್ಶಿಸಬೇಕು, ಗಾಳಿ ಮಳೆಗೆ ಅಡಕೆ, ಭತ್ತದ ಬೆಳೆ ಹಾನಿಯಾಗಿದ್ದು ಇದುವರೆಗೆ ಯಾವುದೇ ಪರಿಹಾರ ಸಿಕ್ಕಲ್ಲ. ತಾಲೂಕಿನಲ್ಲಿ ಮರಳು ಅಕ್ರಮ ದಂಧೆಯಂತೂ ಮೀತಿ ಮೀರಿದೆ ಎಂದು ದೂರಿದರು.
ರೈತ ಸಂಘದ ತಾಲೂಕು ಅಧ್ಯಕ್ಷರಾದ ಕೆ.ಸಿ.ಬಸಪ್ಪ, ನ್ಯಾಮತಿ ಅಧ್ಯಕ್ಷ ಉಮೇಶ್ ಮಾತನಾಡಿದರು., ಹಸಿರು ಸೇನೆ ಶಿವಮೋಗ್ಗ ಜಿಲ್ಲಾಧ್ಯಕ್ಷ ಬಸವರಾಜ ಸಂಭೋಳ್, ಕಾರ್ಯದರ್ಶಿನಾಗರಾಜ್,ಕಿರಣ್ ಹಿರೇಮನಿ, ಸುಂಕದಕಟ್ಟೆ ಕರಿಬಸಪ್ಪ, ಅವಿನಾಶ್, ನ್ಯಾಮತಿ ಗೌರವಾಧ್ಯಕ್ಷ ಗೋಪಾಲಪ್ಪ, ಉಪಾಧ್ಯಕ್ಷ ಜೀನೇಶಪ್ಪ, ಜೀವಿಂದ್ರ, ನಾರಾಯಣ, ನೀಲಕಂಠ ರಾಯ್ಕರ್, ಕೃಷ್ಣನಾಯ್ಕ, ನಿಂಗನಗೌಡ ಇತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.