ಕೆ.ಆರ್.ಪೇಟೆ ತಾಲೂಕಿನ ಕುರುಬಹಳ್ಳಿ ಗ್ರಾಮದ ಚಿಕ್ಕಗಾಡಿಗನಹಳ್ಳಿ ಶಾಲೆ ಬಡ್ತಿ ಮುಖ್ಯ ಶಿಕ್ಷಕ ಧರ್ಮರಾಜಗೌಡ ಹಾಗೂ ನಾಡಭೋಗನಹಳ್ಳಿ ಗ್ರಾಮದ ಶಾಲಾ ಮುಖ್ಯ ಶಿಕ್ಷಕಿ ರೂಪ ದಂಪತಿ ಪುತ್ರ ನೂತನ ಕೃಷ್ಣ ಭೈರವೇಶ್ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದು ತಾಲೂಕು ಜಿಲ್ಲೆಗೆ ಕೀರ್ತಿ ತಂದಿದ್ದಾನೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತಾಲೂಕಿನ ಕುರುಬಹಳ್ಳಿ ಗ್ರಾಮದ ಚಿಕ್ಕಗಾಡಿಗನಹಳ್ಳಿ ಶಾಲೆ ಬಡ್ತಿ ಮುಖ್ಯ ಶಿಕ್ಷಕ ಧರ್ಮರಾಜಗೌಡ ಹಾಗೂ ನಾಡಭೋಗನಹಳ್ಳಿ ಗ್ರಾಮದ ಶಾಲಾ ಮುಖ್ಯ ಶಿಕ್ಷಕಿ ರೂಪ ದಂಪತಿ ಪುತ್ರ ನೂತನ ಕೃಷ್ಣ ಭೈರವೇಶ್ ಸಿಇಟಿ ಪರೀಕ್ಷೆಯಲ್ಲಿ ರಾಜ್ಯಕ್ಕೆ 4ನೇ ರ್ಯಾಂಕ್ ಪಡೆದು ತಾಲೂಕು ಜಿಲ್ಲೆಗೆ ಕೀರ್ತಿ ತಂದಿದ್ದಾನೆ. ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಎಕ್ಸಲೆಂಟ್ ಪದವಿ ಪೂರ್ವ ಕಾಲೇಜಿನಲ್ಲಿ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ನೂತನ ಕೃಷ್ಣ ಭೈರವೇಶ್ ಬಿಎನ್ ವೈಎಸ್ನಲ್ಲಿ 4ನೇ ರ್ಯಾಂಕ್, ಬಿ ಫಾರ್ಮಾ ಹಾಗೂ ಡಿ ಫಾರ್ಮಾದಲ್ಲಿ 5ನೇ ರ್ಯಾಂಕ್, ಬಿಎಸ್ಸಿ ನರ್ಸಿಂಗ್ ಹಾಗೂ ವೆಟರ್ನರಿ ಸೈನ್ಸ್ ನಲ್ಲಿ 6ನೇ ರ್ಯಾಂಕ್ ಗಳಿಸಿ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸಿಇಟಿ ಪರೀಕ್ಷೆ ಫಲಿತಾಂಶ ಕುರಿತು ಮಾತನಾಡಿದ ವಿದ್ಯಾರ್ಥಿ ನೂತನ ಕೃಷ್ಣ ಭೈರವೇಶ್, ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಎಂಬಿಬಿಎಸ್ ಪ್ರವೇಶ ಪಡೆಯುವುದು ಮುಂದಿನ ಗುರಿಯಾಗಿದೆ. ಸಿಇಟಿಯಲ್ಲಿ ಉತ್ತಮ ಫಲಿತಾಂಶ ನಿರೀಕ್ಷೆ ಮಾಡಿದ್ದೆ. ಅದು ಇಂದು ನೆರವೇರಿತು. ಕಾಲೇಜಿನಲ್ಲಿ ಕಲಿಕೆಗೆ ಉತ್ತಮ ವಾತಾವರಣ ಇದ್ದುದರಿಂದ ಈ ಸಾಧನೆ ಸಾಧ್ಯವಾಗಿದೆ. ಮುಂದೆ ಉತ್ತಮ ವೈದ್ಯನಾಗಿ ಸಮಾಜ ಸೇವೆ ಮಾಡಲು ಉತ್ಸುಕನಾಗಿದ್ದೇನೆ ಎಂದರು.
ವಿದ್ಯಾರ್ಥಿಯನ್ನು ಶಾಸಕ ಎಚ್.ಟಿ.ಮಂಜು, ಮಾಜಿ ಶಾಸಕ ಕೆ.ಬಿ.ಚಂದ್ರಶೇಖರ್, ಬಿ.ಪ್ರಕಾಶ್, ಮನ್ಮುಲ್ ನಿರ್ದೇಶಕ ಡಾಲು ರವಿ, ಎಂ.ಬಿ.ಹರೀಶ್, ಕಾಂಗ್ರೆಸ್ ಮುಖಂಡ ವಿಜಯ್ ರಾಮೇಗೌಡ, ಆರ್ಟಿಓ ಅಧಿಕಾರಿ ಮಲ್ಲಿಕಾರ್ಜುನ್ ತಾಲೂಕಿನ ವಿವಿಧ ಗಣ್ಯರು, ಮುಖ್ಯಸ್ಥರು ಅಭಿನಂದಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.