ಕನ್ನಡಪ್ರಭ ವಾರ್ತೆ ಮೈಸೂರು
ಕಬಿನಿ ಡ್ಯಾಂ ಹಿನ್ನೀರು ಪ್ರದೇಶದಲ್ಲಿ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅಕ್ರಮ ರೆಸಾರ್ಟ್ ಹೊಂದಿದ್ದಾರೆ. ಇವರ ಬೆಂಬಲಿಗರು, ಆಪ್ತರ ಹೆಸರಿನಲ್ಲಿ ನೂರಾರು ಕೋಟಿ ಹೂಡಿಕೆ ಮಾಡಿದ್ದಾರೆ ಎಂದು ಬಿಜೆಪಿ ನಗರ ವಕ್ತಾರ ಎಂ.ಎ. ಮೋಹನ್ ಆರೋಪಿಸಿದರು.ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಚ್.ಡಿ. ಕೋಟೆ ಕಬಿನಿ ಡ್ಯಾಂ ಹಿನ್ನೀರು ಪ್ರದೇಶ ಪರಿಸರ ಸೂಕ್ಷ್ಮ ವಲಯವಾಗಿದೆ. ಆದರೆ, ಈ ಭಾಗದಲ್ಲಿ ಅಕ್ರಮವಾಗಿ 10 ಹೆಚ್ಚು ರೆಸಾರ್ಟ್, ಹೋಂ ಸ್ಟೇಗಳನ್ನು ನಿರ್ಮಾಣ ಮಾಡಲಾಗಿದೆ. ಇದರಲ್ಲಿ ವಸತಿ ಸಚಿವ ಜಮೀರ್ ಅವರ ರೇಸಾರ್ಟ್ ಕೂಡ ಸೇರಿದೆ ಎಂದು ದೂರಿದರು.
ನಾಗರಹೊಳೆ ಅಭಯಾರಣ್ಯದ ವ್ಯಾಪ್ತಿಯಲ್ಲಿ ಸಚಿವ ಜಮೀರ್ ಅಹಮದ್ ಖಾನ್ ಅವರು ನಿಷೇಧಿತ ಅರಣ್ಯ ಪ್ರದೇಶದಲ್ಲಿ ಅಕ್ರಮ ವಸತಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದಾರೆ. ಜಮೀರ್ ಪಿಎ ಸರ್ಫರಾಜ್ ಮತ್ತು ಅವರ ಆಪ್ತರ ಹೆಸರಿನಲ್ಲಿ ರೆಸಾರ್ಟ್ ತೆರೆದಿದ್ದಾರೆ. ಡಿ ದರ್ಜೆ ಗುಮಾಸ್ತ ಸರ್ಫರಾಜ್ ಕಳೆದ 25 ವರ್ಷದಿಂದ ಜಮೀರ್ ಜೊತೆ ಇದ್ದಾರೆ ಎಂದು ಅವರು ಆರೋಪಿಸಿದರು.ಎಚ್.ಡಿ. ಕೋಟೆ 4 ಡ್ಯಾಮ್ ಗಳು ಇರುವ ತಾಲೂಕು. ಜೀವ ವೈವಿಧ್ಯಗಳಿರುವ ಬಂಡೀಪುರ, ನಾಗರಹೊಳೆ ಒಂದುಗೂಡುವ ಪ್ರದೇಶ. ಇಂತಹ ಪ್ರದೇಶದಲ್ಲಿ ಹಲವು ಅಕ್ರಮ ರೆಸಾರ್ಟ್ ಗಳು ತಲೆ ಎತ್ತಿವೆ. ಅರಣ್ಯ ಇಲಾಖೆಯ ನೀತಿ ನಿಯಮಗಳನ್ನು ಗಾಳಿಗೆ ತೂರಿ ರೆಸಾರ್ಟ್ ಗಳನ್ನು ನಿರ್ಮಾಣ ಮಾಡಿದ್ದಾರೆ. ಸರ್ಫರಾಜ್ ಸರ್ಕಾರಿ ನೌಕರನಾಗಿ ಬಿಜಿನೆಸ್ ಮಾಡುತಿದ್ದಾನೆ. ಒಬ್ಬ ಡಿ ಗ್ರೂಪ್ ನೌಕರ ಕೋಟ್ಯಂತರ ರೂಪಾಯಿ ಬಂಡವಾಳ ಹೂಡಿ ರೆಸಾರ್ಟ್ ಮಾಡಲಿಕ್ಕೆ ಹೇಗೆ ಸಾಧ್ಯ? ಇದರ ಹಿಂದೆ ಸಚಿವ ಜಮೀರ್ ಇದ್ದಾರೆ ಎಂದರು.
2015ಲ್ಲಿ ಟೂರಿಸಂ ಪಾಲಿಸಿ ಪ್ರಕಾರ ಅತಿಥಿ ಸ್ಕೀಮ್ ನಲ್ಲಿ ಒಂದು ಸ್ಟೇ ಅನ್ನು ರೈತರು ಮಾಡಲು ಅವಕಾಶ ಇದೆ. ರೈತ ತಾನು ವಾಸ ಇದ್ದು, ಜೊತೆಗೆ 4 ಹೆಚ್ಚುವರಿ ರೂಮ್ ಮಾಡಿ ಆ ರೈತನೇ ಅದನ್ನು ಮೆಂಟೇನ್ ಮಾಡಬೇಕು ಎಂಬ ನಿಯಮ ಇದೆ. ಆದರೆ, ರೆಸಾರ್ಟ್ ಇಲ್ಲಿ 20 ಹೆಚ್ಚು ರೂಮ್ ಗಳು ಇವೆ. ಸರ್ಫರಾಜ್ ಹೆಡ್ ಕ್ವಾಟರ್ ಬೆಂಗಳೂರು. ಇಲ್ಲಿ ಹೇಗೆ ಮೆಂಟೇನ್ ಮಾಡಲು ಸಾಧ್ಯ ಎಂದು ಅವರು ಪ್ರಶ್ನಿಸಿದರು.ರೆಸಾರ್ಟ್ ನೋಡಿಕೊಳ್ಳಲು ಒಬ್ಬ ಮೌಲ್ವಿ ಇದ್ದಾನೆ. ಒಬ್ಬ ಅತಿಥಿಗೆ 25000 ಚಾರ್ಜ್ ಮಾಡುತ್ತಾರೆ. ಆ ರೆಸಾರ್ಟ್ ಪಕ್ಕದಲ್ಲೇ ಸರ್ಫರಾಜ್ ಪರ್ಸನಲ್ ಡ್ರೈವರ್ 4 ಎಕೆರೆ ಜಾಗದಲ್ಲಿ 100 ಕೋಟಿ ಇನ್ವೆಸ್ಟ್ ಮಾಡಿ ದೊಡ್ಡ ಬಿಲ್ಡಿಂಗ್ ಕಟ್ಟುತಿದ್ದಾರೆ. ಒಬ್ಬ ಡ್ರೈವರ್ ಇಷ್ಟು ಇನ್ವೆಸ್ಟ್ ಮಾಡಲು ಸಾಧ್ಯವೇ. ಈ ರೀತಿಯ ಮಿಸ್ಸಿಂಗ್ ಲಿಂಕ್ ಗೆ ನಮಗೆ ಲಿಂಕ್ ಬೇಕು. ಅಲ್ಲಿ ಒಂದು ಸಿl7 ಬಾರ್ ಇದೆ. ಸಿl7 ರಲ್ಲಿ ಬೇರೆ ಕಡೆಗೆ ಪಾರ್ಸಲ್ ಕೊಡುವ ಹಾಗಿಲ್ಲ. ಆದರೆ, ರಾತ್ರಿ 11 ಗಂಟೆಯವರೆಗೆ ಓಪನ್ ಇರುತ್ತದೆ. ಇದೆಲ್ಲ ಜಮೀರ್ ಅಹಮದ್ ಖಾನ್ ಕೈವಾಡ ಇಲ್ಲದೇ ನಡೆಯೋದಿಲ್ಲ ಎಂದು ಅವರು ದೂರಿದರು.
15 ದಿನಕ್ಕೊಮ್ಮೆ ರೆಸಾರ್ಟ್ ಗೆ ಜಮೀರ್ ಬರುತ್ತಾರೆ. ಬಂದು ಎಲ್ಲಾ ರೈತರಿಗೆ ದುಡ್ಡನ್ನು ಕಡ್ಲೆಪುರಿ ಹಂಚಿದ ರೀತಿ ಹಂಚುತ್ತಾರೆ. ಕಾಡಂಚಿನಲ್ಲಿ ಬೃಹತ್ ಕಟ್ಟಡ ಕಟ್ಟಲು ಅನುಮತಿ ಕೊಟ್ಟವರು ಯಾರು? ಇವುಗಳ ಹತ್ತಿರ ಇನ್ನೊಂದು ರೆಸಾರ್ಟ್ ಕಾಂಗ್ರೆಸ್ ಸರ್ಕಾರದ ಸಚಿವರಾದ ಸತೀಶ್ ಜಾರಕಿಹೊಳಿ ಸಂಬಂಧಿಕರ ಹೆಸರಿನಲ್ಲಿ ಇದೆ ಎಂಬ ಮಾಹಿತಿ ಇದೆ.ಇದಕ್ಕೆ ಸಂಬಂಧಿಸಿದಂತೆ ಒಂದು ಸತ್ಯ ಶೋಧನೆ ಸಮಿತಿ ಮಾಡುತ್ತೇವೆ. ಇದನ್ನು ನಮ್ಮ ರಾಜ್ಯ ನಾಯಕರ ಗಮನಕ್ಕೆ ತಂದಿದ್ದೇವೆ. ಮುಂದಿನ ದಿನಗಳಲ್ಲಿ ಅಕ್ರಮ ರೆಸಾರ್ಟ್ ಇರುವಲ್ಲಿಗೆ ಮಾಧ್ಯಮ ಪ್ರತಿನಿಧಿಗಳನ್ನು ಕರೆದುಕೊಂಡು ಹೋಗಿ ವಾಸ್ತವಾಂಶ ಪರಿಶೀಲನೆ ಮಾಡುತ್ತೇವೆ ಎಂದರು.
ಈ ಸರ್ಕಾರದಲ್ಲಿ ಅಕ್ರಮಗಳ ಸರಮಾಲೆಯೇ ನಡೆಯುತ್ತಿದೆ. ಸಾವಿಲ್ಲದ ಮನೆಯ ಸಾಸಿವೆ ಇಲ್ಲ ಎನ್ನುವ ಹಾಗೆ ಈ ಸರ್ಕಾರದಲ್ಲಿ ಭ್ರಷ್ಟಾಚಾರ ಇಲ್ಲದ ಇಲಾಖೆಯೇ ಇಲ್ಲ. ಅಕ್ರಮ ರೆಸಾರ್ಟ್ ನಿರ್ಮಾಣದ ಬಗ್ಗೆ ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಿದ್ದೇವೆ. ಅಕ್ರಮ ರೆಸಾರ್ಟ್ ಗಳಲ್ಲಿ ಸಚಿವ ಜಮೀರ್ ಅಹಮದ್ ಬಂಡವಾಳ ಹೂಡಿಕೆ ಇದೆ. ಸರ್ಕಾರದ ಹಣವನ್ನು ಇಲ್ಲಿಗೆ ತಂದು ಹಾಕುತ್ತಿದ್ದಾರೆ. ಇಷ್ಟೆಲ್ಲಾ ಅಕ್ರಮಗಳ ಬಗ್ಗೆ ಕೂಡಲೇ ಉನ್ನತ ಮಟ್ಟದ ತನಿಖೆ ಆಗಬೇಕು ಎಂದು ಅವರು ಒತ್ತಾಯಿಸಿದರು.ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ, ನಗರ ಮಾಧ್ಯಮ ಸಂಚಾಲಕ ಮಹೇಶ್ ರಾಜೇ ಅರಸ್ ಮೊದಲಾದವರು ಇದ್ದರು.