ಕನ್ನಡಪ್ರಭ ವಾರ್ತೆ ಚಳ್ಳಕೆರೆ
ನಗರಸಭೆಯ ಸಾಮಾನ್ಯ ಸಭೆ ಅಧ್ಯಕ್ಷೆ ಆರ್.ಮಂಜುಳಾ ಪ್ರಸನ್ನಕುಮಾರ್ ಅಧ್ಯಕ್ಷತೆಯಲ್ಲಿ ನಡೆದಿದ್ದು, ಕಳೆದ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಅನುಷ್ಠಾನ ಹಾಗೂ ಇನ್ನಿತರೆ ವಿಚಾರಗಳ ಬಗ್ಗೆ ಸುಧೀರ್ಘ ಚರ್ಚೆ ನಡೆಯಿತು.ಪ್ರಾರಂಭದಲ್ಲಿ ಪೌರಾಯುಕ್ತ ಜಿ.ಟಿ.ಜಗರೆಡ್ಡಿ ಎಲ್ಲರನ್ನೂ ಸ್ವಾಗತಿಸಿ ಮಾತನಾಡಿ, ಸರ್ಕಾರದಿಂದ ಬಿಡುಗಡೆಯಾದ ಸುತ್ತೋಲೆ ಹಾಗೂ ಸಾರ್ವಜನಿಕರ ಹಿತದೃಷ್ಠಿಯಿಂದ ನಗರಸಭೆಗೆ ಹೆಚ್ಚುವರಿ ವಾಹನ ಖರೀದಿಸಲು ಮತ್ತು ನಗರಸಭೆ ಅಭಿವೃದ್ಧಿಗೆ ಸಂಬಂಧಪಟ್ಟ ವಿಚಾರಗಳ ಬಗ್ಗೆ ಸದಸ್ಯರು ಚರ್ಚೆ ನಡೆಸಿ ಮಾರ್ಗದರ್ಶನ ನೀಡುವಂತೆ ಮನವಿ ಮಾಡಿದರು.
ಸಭೆಯ ಆರಂಭದಲ್ಲೇ ನಗರಸಭೆಯ ಹಿರಿಯ ಸದಸ್ಯ ಎಸ್.ಜಯಣ್ಣ, ಶ್ರೀನಿವಾಸ್, ಸಿ.ಎಂ.ವಿಶುಕುಮಾರ್, ಟಿ.ಶಿವಕುಮಾರ್, ನಿರ್ಮಲ, ಸಾಕಮ್ಮ, ವಿ.ವೈ.ಪ್ರಮೋದ್, ಪಾಲಮ್ಮ ಮುಂತಾದವರು ನಗರಸಭೆಯ ಆಡಳಿತ ಸ್ವಚ್ಛತೆಯನ್ನು ಪೂರ್ಣಪ್ರಮಾಣದಲ್ಲಿ ಮಾಡಲು ವಿಫಲವಾಗಿದೆ. ಕಳೆದ ಸಭೆಯಲ್ಲಿ ನಗರದ ಎಲ್ಲಾ ವಾರ್ಡ್ಗಳ ಚರಂಡಿಗೆ ಡಿಡಿಟಿ ಪೌಡರ್ ಸಿಂಪಡಿಸಲು ಭರವಸೆ ನೀಡಿದ್ದರು. ಆದರೆ, ಆ ಕಾರ್ಯ ನೆರವೇರಿಲ್ಲ ಚರಂಡಿಗಳು ಗಬ್ಬುನಾರುತ್ತಿವೆ ಎಂದು ಆರೋಪಿಸಿದರು.ಕೆಲ ಸದಸ್ಯರು ಕಸದ ಗಾಡಿಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ, ಕೆಲವೆಡೆ ದುರುದ್ದೇಶದಿಂದ ರಸ್ತೆಗೆ ಕಸ ಚೆಲ್ಲುವುದರ ವಿರುದ್ಧ ಕ್ರಮ ಕೈಗೊಳ್ಳುವಂತೆ ತಿಳಿಸಿದರು.
ಪೌರಾಯುಕ್ತ ಜಗರೆಡ್ಡಿ ಮಾಹಿತಿ ನೀಡಿ, ಈಗಾಗಲೇ ರಸ್ತೆಗೆ ಕಸ ಹಾಕುವವರ ವಿರುದ್ಧ ಕ್ರಮಕೈಗೊಳ್ಳಲು ಆರೋಗ್ಯ ನಿರೀಕ್ಷಕರಿಗೆ ಸೂಚನೆ ನೀಡಲಾಗಿದೆ. ಪ್ಲಾಸ್ಟಿಕ್ ಕವರ್ ಮಾರಾಟ ಮಾಡದಂತೆ ನೈರ್ಮಲ್ಯ ಎಂಜಿನಿಯರ್ ನರೇಂದ್ರಬಾಬು ಅವರ ನೇತೃತ್ವದಲ್ಲಿ ವಿವಿಧ ಅಂಗಡಿಗ ಮೇಲೆ ದಾಳಿ ನಡೆಸಲಾಗಿದೆ ಎಂದರು.ಇದೇ ಸಂದರ್ಭದಲ್ಲಿ ಸರ್ಕಾರಿ ಕಚೇರಿ, ಕೆಲವೊಂದು ಸಂಘಟನೆಗಳು ನಿವೇಶನ ನೀಡುವಂತೆ ನಗರಸಭೆಗೆ ಅರ್ಜಿ ಸಲ್ಲಿಸಿದ್ದು, ನಿಯಮಗಳ ಪ್ರಕಾರ ನಿವೇಶನಗಳನ್ನು ಹಣ ನಿಗದಿತಗೊಳಿಸಿ ಪಾವತಿ ಮಾಡಿದ ನಂತರ ನೀಡುವಂತೆ ಸೂಚನೆ ನೀಡಲಾಯಿತು. ಹೆಚ್ಚುವರಿಯಾಗಿ ಕಸದ ಲಾರಿಗಳನ್ನು ಖರೀದಿಸಲು ಅನುಮತಿ ಕೋರಿದ್ದು ಆಕ್ಷೇಪಿಸಿದ ವಿಶುಕುಮಾರ್, ಸಾರ್ವಜನಿಕ ವಲಯದಲ್ಲಿ ನಗರಸಭೆ ಸ್ವಚ್ಛತೆ ವಿಚಾರದಲ್ಲಿ ನಿರ್ಲಕ್ಷೆ ವಹಿಸಿದೆ ಎಂಬ ಆರೋಪವಿದೆ. ಇರುವ ವಾಹನಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಬಹುದಾಗಿದೆ. ನಗರಸಭೆಯಲ್ಲಿ ಹಾಲಿ ಇರುವ ಸ್ವಚ್ಛತ ವಾಹನ ಮತ್ತು ಕೆಟ್ಟುನಿಂತ ವಾಹನಗಳ ಬಗ್ಗೆ ಮಾಹಿತಿ ನೀಡುವಂತೆ ತಿಳಿಸಿದರು.
ನಗರಸಭೆ ಒಡೆತನದ ಬೆಂಗಳೂರು, ಮಹಾದೇವಿ, ಪಾವಗಡ ರಸ್ತೆಯಲ್ಲಿರುವ ವಾಣಿಜ್ಯ ಮಳಿಗೆಗಳ ಸ್ಥಿತಿ ಸದಸ್ಯರು ಮಾಹಿತಿ ಕೇಳಿದಾಗ ಪೌರಾಯುಕ್ತ ಜಗರೆಡ್ಡಿ ಸದರಿ ಪ್ರಕರಣ ಈಗಾಗಲೇ ಹೈಕೋರ್ಟ್ನಲ್ಲಿ ವಿಚಾರಣೆ ನಡೆಸಲಾಗುತ್ತಿದೆ. ಈಗಾಗಲೇ ಎರಡು ಬಾರಿ ಕೋರ್ಟ್ಗೆ ಹಾಜರಾಗಿ ಮಾಹಿತಿ ನೀಡಲಾಗಿದೆ. ಕೋರ್ಟ್ನ ನಿರ್ದೇಶನವನ್ನು ನಿರೀಕ್ಷೆ ಮಾಡಲಾಗುತ್ತಿದೆ ಎಂದರು.ಉಪಾಧ್ಯಕ್ಷೆ ಕವಿತಾ ಬೋರಯ್ಯ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ್, ಕೆ.ವೀರಭದ್ರಪ್ಪ, ಆರ್.ರುದ್ರನಾಯಕ ಬಿ.ಟಿ.ರಮೇಶ್ ಗೌಡ, ಎಂ.ಜೆ.ರಾಘವೇಂದ್ರ, ಹೊಯ್ಸಳ ಗೋವಿಂದ, ವಿರೂಪಾಕ್ಷಿ, ಚಳ್ಳಕೆರೆ ಯಪ್ಪ, ಎಚ್.ಪ್ರಶಾಂತ್ ಕುಮಾರ್, ವೈ.ಪ್ರಕಾಶ್, ಸುಮಭರಮಣ್ಣ, ಸುಮಕ್ಕ, ಜೈತುಂಬಿ, ಜಯಲಕ್ಷ್ಮಿ, ಶಿಲ್ಪ ಮುರುಳಿ, ನಾಮಿನಿ ಸದಸ್ಯರಾದ ಬಡಗಿ ಪಾಪಣ್ಣ, ಅನ್ವರ್ ಮಾಸ್ಟರ್, ನಟರಾಜು, ನೇತಾಜಿ ಪ್ರಸನ್ನ, ಆರ್.ವೀರಭದ್ರಪ್ಪ ಸಭೆಯಲ್ಲಿ ಭಾಗವಹಿಸಿದ್ದರು.