ಕಲಘಟಗಿ: ಪ್ರಸ್ತುತ ದಿನಗಳಲ್ಲಿ ಪತ್ರಿಕೋದ್ಯಮ ಹಲವಾರು ಸ್ಥರಗಳಲ್ಲಿ ಬದಲಾವಣೆ ಪಡೆದುಕೊಂಡಿದೆ. ಹೊಸ ಹೊಸ ತಂತ್ರಜ್ಞಾನಗಳು ಮಾದ್ಯಮರಂಗ ಪ್ರವೇಶಿಸುತ್ತಿರುವುದರಿಂದ ಸಾಂಪ್ರದಾಯಿಕ ಪತ್ರಿಕೋದ್ಯಮದಲ್ಲಿ ಸಾಕಷ್ಟು ಬದಲಾವಣೆಯಾಗುತ್ತಿದೆ ಎಂದು ಧಾರವಾಡ ಕವಿವಿ ಪ್ರತಿಕೋದ್ಯಮ ವಿಭಾಗದ ಪ್ರಾಧ್ಯಾಪಕ ಡಾ. ಸಂಜಯ ಮಾಲಗತ್ತಿ ಅಭಿಪ್ರಾಯ ಪಟ್ಟರು.
ಅವರು ಪಟ್ಟಣದ ಸಮೀಪದ ದಾಸ್ತಿಕೊಪ್ಪ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉಪನ್ಯಾಸ ನೀಡಿದರು.ಜನಾಭಿಪ್ರಾಯ ಬಿಂಬಿಸುವುದೇ ಪತ್ರಿಕೋದ್ಯಮದ ಮೂಲ ಉದ್ದೇಶ.. ಪತ್ರಕರ್ತರು ಸತ್ಯವನ್ನು ಮರೆಮಾಚಿ ಸುದ್ದಿ ಮಾಡಿದರೆ ಸಾಮಾಜಿಕ ಜೀವನದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಪತ್ರಿಕೋದ್ಯಮ ಬಹಳ ಮಹತ್ವದ ಕ್ಷೇತ್ರ. ಸಮಾಜದ ಮೇಲೆ ನಿಜವಾಗಿಯೂ ಕಳಕಳಿ ಇರುವವರು ಪತ್ರಿಕೋದ್ಯಮ ಕ್ಷೇತ್ರಕ್ಕೆ ಬರಬೇಕಿದೆ ಎಂದು ಸಲಹೆ ನೀಡಿದರು.
ಖಡ್ಗಕ್ಕಿಂತ ಹರಿತವಾದ ಶಕ್ತಿ ಲೇಖನಿಯಲ್ಲಿದೆ. ವಸ್ತುನಿಷ್ಠ, ಸತ್ಯದ ಪರವಾಗಿ ವರದಿ ಮಾಡಿದಾಗ ಆ ಲೇಖನಿಗೆ ಶಕ್ತಿ ಬರುತ್ತದೆ. ಪತ್ರಕರ್ತರು ವರದಿ ಮಾಡುವ ಧಾವಂತದಲ್ಲಿ ತಮ್ಮ ನಿಲುವು, ಅಭಿಪ್ರಾಯಗಳನ್ನು ಪ್ರತಿಪಾದನೆ ಮಾಡುವುದು ಕಂಡುಬರುತ್ತಿದೆ. ಇದು ಆಗಬಾರದು. ಸತ್ಯವನ್ನು ಪರಾಮರ್ಶಿಸುವ ನಿಟ್ಟಿನಲ್ಲಿ ವಸ್ತುನಿಷ್ಠತೆಯುಳ್ಳ ವರದಿ ಮಾಡಬೇಕಿದೆ ಎಂದರು.ವಿಪ ಮಾಜಿ ಸದಸ್ಯ ನಾಗರಾಜ ಛಬ್ಬಿ ಮಾತನಾಡಿ, ಸರ್ಕಾರ ಮತ್ತು ಜನರ ಮಧ್ಯದ ಕೊಂಡಿಯಾಗಿ ಪತ್ರಿಕಾ ಮಾಧ್ಯಮ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಪತ್ರಿಕೆ ಓದುವ ಸಂಪ್ರದಾಯ ಕಡಿಮೆಯಾಗುತ್ತಿರುವುದು ನೋವಿನ ಸಂಗತಿ. ಸರ್ಕಾರಗಳ ಹಳಿ ತಪ್ಪಿದಾಗ ಸರಿ ದಾರಿಗೆ ತರುವ ಕೆಲಸವನ್ನು ಪತ್ರಕರ್ತರು ಮಾಡುತ್ತಿದ್ದಾರೆ ಎಂದರು.
ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಗಣಪತಿ ಗಂಗೊಳ್ಳಿ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಅಧ್ಯಕ್ಷ ಎಸ್.ಆರ್. ಪಾಟೀಲ, ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಶೀಲೇಂದ್ರಾಚಾರ್ಯ ಕುಂದರಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥಗೌಡ ಮುರಳ್ಳಿ, ಕೃಷಿಕ ಸಮಾಜದ ಅಧ್ಯಕ್ಷ ಬಾಬು ಅಂಚಟಗೇರಿ, ಅಣ್ಣಪ್ಪ ಓಲೇಕಾರ, ರಮೇಶ ಸೋಲಾರಗೊಪ್ಪ ಮಾತನಾಡಿದರು.ಸಂಘದ ತಾಲೂಕು ಅಧ್ಯಕ್ಷ ಪ್ರಕಾಶ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ಸನ್ಮಾನ: ದಕ್ಷಿಣ ಕನ್ನಡ ಜಿಲ್ಲಾ ಕಾನಿಪ ಸಂಘದ ರಾಜ್ಯಮಟ್ಟದ ಛಾಯಾಚಿತ್ರ ಪ್ರಶಸ್ತಿ ಪುರಸ್ಕೃತರಾದ ಕನ್ನಡಪ್ರಭದ ಹುಬ್ಬಳ್ಳಿ ಛಾಯಾಗ್ರಾಹಕ ಈರಪ್ಪ ನಾಯ್ಕರ ಸೇರಿದಂತೆ ಧಾರವಾಡ ಕಾನಿಪ ಸಂಘದಿಂದ ಕೊಡಮಾಡಿದ ಪ್ರಶಸ್ತಿ ಪಡೆದ ಪ್ರಕಾಶ ಲಮಾಣಿ, ಪ್ರಹ್ಲಾದಗೌಡ ಗೊಲ್ಲಗೌಡರ ಹಾಗೂ ಪತ್ರಿಕಾ ವಿತರಕರು ಹಾಗೂ ಹಿರಿಯ ಪತ್ರಕರ್ತರನ್ನು ಸನ್ಮಾನಿಸಲಾಯಿತು.ಈ ವೇಳೆ ಎಸ್.ವಿ. ತಡಸಮಠ, ಸೋಮಶೇಖರ ಬೆನ್ನೂರು, ದೇವಪ್ಪ ಮೋರೆ, ಸೋಮಲಿಂಗ ಒಡೆಯರ, ವೈ.ಎನ್. ಮಂಜುನಾಥ ಮಾಳಗಿ ಪಾಟೀಲ, ಪ್ರಭಾಕರ ನಾಯಕ, ರವಿ ಬಡಿಗೇರ, ರಾಕೇಶ ಅಳಗವಾಡಿ, ಕಲ್ಲಪ್ಪ ಮಿರ್ಜಿ, ವಿರೇಶ ಹಾರೂಗೇರಿ, ಉದಯ ಗೌಡರ, ಪ್ರಕಾಶ ಧೂಪದ, ಶಶಿಕುಮಾರ ಕಟ್ಟಿಮನಿ, ಗಿರೀಶ ಮುಕ್ಕಲ್ಲ, ಉಮೇಶ ಜೋಶಿ, ವಿನಾಯಕ ಭಟ್ಟ, ಯಲ್ಲಪ್ಪ ಚವರಗಿ, ಬಸವರಾಜ ತಪ್ಪಣ್ಣವರ, ಉಳುವಪ್ಪ ಬಳಿಗೇರ ಸೇರಿದಂತೆ ಹಲವರಿದ್ದರು.