ಹಾವೇರಿ: ಓದಿನ ಬೆಳಕು ಬದುಕಿನ ಬೆಳಕಾಗಬೇಕು. ಅಕ್ಷರದ ಅರಿವು ಮೂಡಿದಾಗ ಸಮಾಜದಲ್ಲಿ ಬದಲಾವಣೆ ಬರಲು ಕಾರಣವಾಗುತ್ತದೆ. ಪುಸ್ತಕಗಳೇ ಇದಕ್ಕೆಲ್ಲ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಹೇಳಿದರು.
ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಸುರೇಶ ಜಂಗಮಶೆಟ್ಟಿ ಮಾತನಾಡಿ, ಮೊಬೈಲ್ ಹಾವಳಿಯಿಂದ ಪುಸ್ತಕದ ಓದು ಕಡಿಮೆಯಾಗಿದೆ ಎಂಬ ಮಾತು ಸುಳ್ಳು. ಇಂದಿನ ತಲೆಮಾರಿನ ಓದಿನ ವಿಧಾನ ಬದಲಾಗಿದೆಂದು ಅರ್ಥೈಯಿಸಬೇಕು. ವ್ಯವಧಾನವಿಲ್ಲದ ಜೀವನದ ಓಟದಲ್ಲಿ ನಾವು ಹೊಸ ಹೊಸ ವಿಧಾನಗಳಿಗೆ ಜೋಡಿಸಿಕೊಳ್ಳಬೇಕು. ತಂತ್ರಜ್ಞಾನದ ಅರಿವು ಇದ್ದಾಗ ಮಾತ್ರ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಗುತ್ತದೆ. ಹಾಗಾದಾಗ ಮಾತ್ರ ನಾವು ಇಂದಿಗೆ ಬದುಕಿದಂತೆ ಎಂದರು.
ಇದೇ ವೇಳೆ ಅವರು ಗ್ರಂಥಾಲಯಕ್ಕೆ ಐವತ್ತಕ್ಕೂ ಹೆಚ್ಚು ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ. ಮಾನಸ ಮಾತನಾಡಿ, ಇಡೀ ಕರ್ನಾಟಕದಲ್ಲಿ ಮಾರ್ಚ್ 2027 ಅಂತ್ಯಕ್ಕೆ ಸುಮಾರು ಒಂದು ಲಕ್ಷ ಗ್ರಂಥಾಲಯಗಳನ್ನು ಅನುಷ್ಠಾನಗೊಳಿಸುವುದು ಪ್ರಾಧಿಕಾರದ ಗುರಿಯಾಗಿದೆ. ಮನೆಗೊಂದು ಗ್ರಂಥಾಲಯ ಹುಟ್ಟುವುದು ಎಂದರೆ ಪ್ರತಿ ಮನೆಯಲ್ಲಿ ಅರಿವಿನ ದೀಪ ಹಚ್ಚಿದಂತೆ. ಇದರಿಂದಾಗಿ ಮೂರು ಕೋಟಿ ಮನಸ್ಸುಗಳಲ್ಲಿ ಓದಿನ ಅರಿವು ಮೂಡಿಸಿದಂತೆ ಎಂದರು.
ಸಮಿತಿಯ ಸದಸ್ಯ ಎಸ್.ಆರ್. ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿದ್ದೇಶ್ವರ ಹುಣಸಿಕಟ್ಟಿಮಠ ಕಾರ್ಯಕ್ರಮ ನಿರೂಪಿಸಿದರು. ಡಾ. ಗೀತಾ ಸುತ್ತಕೋಟಿ ವಂದಿಸಿದರು.