ಕನ್ನಡಪ್ರಭ ವಾರ್ತೆ ಬೆಳಗಾವಿ
ನಗರದ ಸದಾಶಿವ ನಗರದ ಬುದ್ಧ ವಿಹಾರದಲ್ಲಿ ಭಗವಾನ ಬುದ್ಧ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮನುಷ್ಯ ಸ್ವಾರ್ಥಕ್ಕೊಳಗಾಗುತ್ತಿದ್ದಾನೆ. ಸ್ವಾರ್ಥವನ್ನು ಬಿಟ್ಟು ಅಶಕ್ತರಿಗೆ ಸಹಾಯ ಮಾಡುವುದೇ ಬುದ್ಧರಿಗೆ ನಾವು ಸಲ್ಲಿಸುವ ನಿಜವಾದ ಗೌರವ. ಗೌತಮ ಬುದ್ಧರ ಉದಾತ್ತ ಚಿಂತನೆಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಶಾಂತಿಯುತ ಸಮಾಜದ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು. ಮಹಾಪುರುಷರ ಆಶಯಗಳು ಕೇವಲ ಭಾಷಣಕ್ಕೆ ಸೀಮಿತವಾಗದೆ, ನಮ್ಮ ದೈನಂದಿನ ಬದುಕಿನ ದಾರಿಯಾಗಬೇಕು. ಆಗ ಮಾತ್ರ ನಾವೆಲ್ಲರೂ ನಿಜವಾದ ಪರಿವರ್ತನೆಯ ಹಾದಿಯಲ್ಲಿ ಸಾಗಲು ಸಾಧ್ಯ ಎಂದು ತಿಳಿಸಿದರು.
ಉಪ ಮೇಯರ್ ಹನುಮಂತ ಕೊಂಗಾಲಿ ಮಾತನಾಡಿ, ಭಗವಾನ್ ಬುದ್ಧರ ಆದರ್ಶಗಳನ್ನು ಅಳವಡಿಸಿಕೊಳ್ಳುವ ಮೂಲಕ ಜೀವನದಲ್ಲಿ ನೈಜ ಪರಿವರ್ತನೆ ತರಲು ಸಾಧ್ಯ ಎಂದು ತಿಳಿಸಿದರು.ಬೆಳಗಾವಿಯ ರಾಣಿ ಪಾರ್ವತಿದೇವಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಎಚ್.ಬಿ.ಕೋಲ್ಕಾರ ಮಾತನಾಡಿ, ಮುಕ್ತಿ ಎಂಬುದು ಮನುಕುಲದ ಆಸ್ತಿಯಾಗಿದ್ದು, ಏಕರೂಪದಲ್ಲಿದ್ದ ಮುಕ್ತಿಯ ಪರಿಕಲ್ಪನೆಯನ್ನು ಬಹುಮುಖಿ ಮುಕ್ತಿಯನ್ನಾಗಿ ಪರಿವರ್ತಿಸಿದ ಕೀರ್ತಿ ಭಗವಾನ್ ಬುದ್ಧನಿಗೆ ಸಲ್ಲುತ್ತದೆ ಎಂದು ತಿಳಿಸಿದರು.
ನಗರ ಸೇವಕ ಸಂದೀಪ ಜೀರಗ್ಯಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಉಪನಿರ್ದೇಶಕಿ ವಿದ್ಯಾವತಿ ಭಜಂತ್ರಿ, ಬೆಳಗಾವಿ ತಾಲೂಕ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಬಸವರಾಜ ಚನ್ನಣ್ಣವರ್, ಬೆಳಗಾವಿ ಜಿಲ್ಲಾ ಅಂಗವಿಕಲ ಕಲ್ಯಾಣ ಅಧಿಕಾರಿ ನಾಮದೇವ ಬಿಲ್ಕರ್, ಸಮಾಜದ ಮುಖಂಡರಾದ ಮಲ್ಲೇಶ್ ಚೌಗಲೆ, ಶಾಂತಪ್ಪ ಹಾದಿಮನಿ, ದುರ್ಗೇಶ್ ಮೇತ್ರಿ, ಭಾರತೀಯ ಬೌದ್ಧ ಮಹಾಸಭಾ ಬೆಳಗಾವಿ ಅಧ್ಯಕ್ಷ ಯಮನಪ್ಪ ಗಡಿನಾಯಕ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪನ್ಯಾಸಕ ಪ್ರೊ.ಮಹಾಂತೇಶ್ ಚಲವಾದಿ, ಮಾರ್ಕೆಟ್ ಠಾಣೆಯ ಸಿಪಿಐ ಜೆ.ಎಂ.ಕಾಲಿಮಿರ್ಚಿ, ಭಾರತೀಯ ಬೌದ್ಧ ಮಹಾಸಭಾ ಸಮತಾ ಸೈನಿಕ ದಳದ ಮೇಜರ್ ಜನರಲ್ ಯಶ್ವಂತ್ ಸಾಮ್ರಾಟ್ ಸೇರಿದಂತೆ ಸಮಾಜದ ಗಣ್ಯರು, ಮುಖಂಡರು ಉಪಸ್ಥಿತರಿದ್ದರು.