ಕನ್ನಡಪ್ರಭ ವಾರ್ತೆ ಬೆಳಗಾವಿ
ಪ್ರಕರಣಕ್ಕೆ ಸಂಬಂಧಿಸಿ ಮಲ್ಲಪ್ಪ ಸಾಂಬ್ರೇಕರ, ವಿಠ್ಠಲ ಸಾಂಬ್ರೇಕರ, ಬಾಗಣ್ಣ ಸಾಂಬ್ರೇಕರ, ರಮೇಶ್ ಸಾಂಬ್ರೇಕರ, ಮಾಳಿಂಗ ಸಾಂಬ್ರೇಕರ, ಗಂಗಪ್ಪ ಸಾಂಬ್ರೇಕರ, ವೈಜು ಸಾಂಬ್ರೇಕರ, ಪಿರಾಜಿ ಸಾಂಬ್ರೇಕರ ಹಾಗೂ ಯಲ್ಲಪ್ಪ ಸಾಂಬ್ರೇಕರ ವಿರುದ್ಧ ಪ್ರಕರಣ ದಾಖಲಾಗಿದೆ. ರೇಣುಕಾ ಸಾಂಬ್ರೇಕರ ಅವರು ಏಪ್ರಿಲ್ 6ರಂದು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದರೂ, ಆರಂಭದಲ್ಲಿ ಪ್ರಕರಣ ದಾಖಲಿಸಿರಲಿಲ್ಲ. ಇದು ಆಕ್ಷೇಪಕ್ಕೆ ಕಾರಣವಾಗಿತ್ತು.
ಆದರೆ, ನಂತರ ಪ್ರಕರಣ ಗಂಭೀರವಾದ ನಂತರ ಪೊಲೀಸರು ಎಚ್ಚೆತ್ತು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದೀಗ ಹಿರೇಬಾಗೇವಾಡಿ ಪೊಲೀಸರು ತನಿಖೆ ಕೈಗೊಂಡಿದ್ದು, ಆರೋಪಿಗಳ ಪಾತ್ರ, ಪಂಚಾಯಿತಿ ಮಟ್ಟದ ತೀರ್ಮಾನಗಳ ಹಿನ್ನೆಲೆ ಹಾಗೂ ಸಾಮಾಜಿಕ ಬಹಿಷ್ಕಾರದ ಪರಿಣಾಮಗಳ ಬಗ್ಗೆ ಸಮಗ್ರವಾಗಿ ಪರಿಶೀಲನೆ ನಡೆಸುತ್ತಿದ್ದಾರೆ.ನರಸೋಬಾ ಕರೆಪ್ಪ ಸಾಂಬ್ರೇಕರ ಅವರ ಕುಟುಂಬವನ್ನು ಗುರಿಯಾಗಿಸಿ ಸಮಾಜದ ಪಂಚರು ಸಾಮಾಜಿಕ ಬಹಿಷ್ಕಾರ ವಿಧಿಸಿದ್ದಾರೆಯೆಂಬ ಆರೋಪ ಕೇಳಿ ಬಂದಿದೆ. ಕುಟುಂಬದವರೊಂದಿಗೆ ಯಾರೂ ಮಾತನಾಡಬಾರದು, ಯಾವುದೇ ರೀತಿಯ ಸಂಪರ್ಕ ಹೊಂದಬಾರದು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದಾಗಿ ಕುಟುಂಬ ಸಂಪೂರ್ಣವಾಗಿ ಸಾಮಾಜಿಕವಾಗಿ ಒಂಟಿಯಾಗುವ ಪರಿಸ್ಥಿತಿ ನಿರ್ಮಾಣವಾಗಿದ್ದು, ದಿನನಿತ್ಯದ ಜೀವನಕ್ಕೂ ಅಡಚಣೆ ಉಂಟಾಗಿತ್ತು.